ಚಂದದಿ ಕೇಳಿದರ ವಿಸ್ತಾರ

ವಿಕಿಸೋರ್ಸ್ದಿಂದ

ವೇದಾಂತದ ಸಾರ[ಸಂಪಾದಿಸಿ]

  • ಶರೀಫರ ಪದದಲ್ಲಿ ವಿವರಣೆ:

ಚಂದದಿ ಕೇಳಿದರ ವಿಸ್ತಾರ
ವೇದಾಂತದ ಸಾರಾ
ಮನಸುಗೊಟ್ಟು ಆಲಿಸಿರಿ ಪೂರಾ || ಪ||

ಮೊದಲಿಗಿತ್ತು ನಿರಾಕಾರಾ
ಅದರಿಂದ ಸಾಕಾರ
ಶಬ್ದ ಹುಟ್ಟಿತೋ ಓಂಕಾರ
ಅಕಾರ ಉಕಾರ ಮಕಾರ
ನಾದಬಿಂದು ಕಳಾಕಾರ
ಸತ್ವ ರಜ ತಮದಿಯ ವಿಸ್ತಾರ

ಸ್ಥೂಲ ಸೂಕ್ಷ್ಮ ಕಾರಣ ಪೂರಾ
ಆದೀತೋ ಶರೀರಾ
ವಿಶ್ವತೇಜಸದ ಪ್ರಜ್ಞಹಾರಾ
ಬ್ರಹ್ಮ ವಿಷ್ಣು ಮಹೇಶ್ವರಾ
ಅವರವರ ವ್ಯಾಪಾರಾ
ಸೃಷ್ಟಿ ಸ್ಥಿತಿ ಲಯದ ಕಾರಭಾರಾ
ಲಕ್ಷವಿಟ್ಟು ಕೇಳ ವಿಚಾರ ||೧||

ಆದಿಬ್ರಹ್ಮನಿಂದಲಿ ಮುನ್ನಾ
ಪ್ರಕೃತಿಯು ಉಪ್ಪನ್ನಾ
ಅದರಿಂದ ಅಹಂಕಾರದ ಜನನಾ
ಅಹಂಕಾರದಿ ಹುಟ್ಟಿತು ಗಗನಾ
ಗಗನದಿಂದ ಪವನಾ
ಪವನದಿಂದ ಅಗ್ನಿ ಆಯಿತಣ್ಣಾ
ಅಗ್ನಿಯಿಂದ ಜಲ ಕೇಳಣ್ಣಾ
ಪೃಥ್ವಿಯ ರಚನಾ
ಅದರೊಳು ಔಷಧಿಗಳಾದವಿನ್ನಾ
ಔಷಧದಿಂದ ಹುಟ್ಟಿತು ಅನ್ನಾ
ಅನ್ನದಿಂದ ವೀರ್ಯ ಉತ್ಪನ್ನಾ
ಪುರುಷ ಪಶು-ಪಕ್ಷಿಗಳ ಜನನಾ
ಈ ಪರಿ ಆದೀತೋ ಚರಾಚರಾ ||೨||

ಪೃಥ್ವಿಯ ಅಂಶಗಳೆಲ್ಲಾ
ಅಸ್ಥಿಮಾಂಸವುಳ್ಳ ಚರ್ಮನಾಡಿಗಳ ರೋಮವೆಲ್ಲಾ
ಕಫಾ ಮೂತ್ರ ಮಜ್ಜಗಳೆಲ್ಲ ರಕ್ತಕೇತುಕೆಲ್ಲಾ
ಆಪತತ್ವವೇ ಅವಕೆ ಮೂಲ
ಹಸಿವು ತೃಷಾ ನಿದ್ರೆಯು ಬಲಾ ಆಲಸ್ಯ ಸಂಗವೆಲ್ಲಾ
ತೇಜ ತತ್ವದಲ್ಲಿ ಪೇಳಿತಲ್ಲಾ
ನಡಿದು ಹಾರಿ ಓಡುವದಲ್ಲಾ
ವಿಸ್ತರಿಸುವೆನೆಲ್ಲಾ
ನಲಿದಾಡುವದು ವಾಯು ಉಳಿದಾ ಕಲಾ
ಕಾಮ ಕ್ರೋಧ ಶೋಕ ಮೋಹ ಭಯಂಕರಾ || ೩ ||

ಶಬ್ದ ಹುಟ್ಟಿತೋ ಗಗನದಲಿ
ಸ್ಪರಿಸೆ ಅದನ ವಾಯುವಿನಲಿ
ರೂಪ ಉದ್ಭವಿಸಿತೋ ತೇಜದಲಿ
ರಸವಾಯ್ತೋ ಜಲತತ್ವದಲಿ
ಪೃಥ್ವಿ ನಿಜ ಅಂಶದಲಿ ವಿಷ ಹುಟ್ಟಿತಲ್ಲಿ
ಶಬ್ದ ಒಂದೇ ಗುಣ ನಭದಲ್ಲಿ
ಶಬ್ದ ಸ್ಪರ್ಶ ವಾಯುವಿನಲ್ಲಿ
ಶಬ್ದ ಸ್ಪರ್ಶ ರೂಪ ತೇಜದಲಿ
ಶಬ್ದ ಹರಡಿದು ನಾಲ್ಕು ದಿಕ್ಕಿನಲ್ಲಿ
ನೋಡು ಪೃಥ್ವಿಯಲ್ಲಿ
ಶಬ್ದ ಹಿಡಿದು ಐದು ಗುಣವಲ್ಲಿ
ಪಿಂಡ ಬ್ರಹ್ಮಾಂಡ ಒಂದೇ ಪ್ರಕಾರ || ೪ ||

ಗಗನದ ನಿಜ ಆಂಶದಲಿ ಹುಟ್ಟಿತು ಈ ಜ್ಞಾನಾ
ವಾಯು ಕೂಡಿದರೆ ಆಯಿತು ಮನಾ
ತೇಜದಿಂದ ಬುದ್ಧಿಯು ಗಹನ
ಜಲಕೆ ಚಿತ್ತವಿನ್ನಾ
ಪೃಥ್ವಿಗಹಂಕಾರದ ಕೂನಾ
ಬರಿವಾಯುವಿನಿಂದಾದಿತು ವ್ಯಾನಾ ತೇಜದ ಉದಾನಾ
ತೇಜದಿಂದಲುದಾನಾ (ಉದಾನ)
ಅವು ಕೂಡಿದರೆ ಆಯಿತು ಅಪಾನಾ
ಪೃಥ್ವಿ ಕೂಡಲುದಿಸಿತು ಪ್ರಾಣಾ
ನಭ ಕೂಡಿ ಸಮಾನಾ
ಹೀಂಗ ಹುಟ್ಟಿದವು ಪಂಚಪ್ರಾಣಾ
ಮುಂದೆ ಕೇಳೋ ಇಂದ್ರಿಯ ವಿಚಾರ || ೫||

ಬರಿಯ ತೇಜದ ಅಂಶದ ನೇತ್ರಾ
ಜಲಕೆ ಜಿವ್ಹೆ ಪವಿತ್ರಾ
ಪೃಥ್ವಿಕೂಡಲು ಪ್ರಾಣ ವಿಚಿತ್ರಾ
ಗಗನ ಕೂಡಲಾಯಿತೋ ಶ್ರೋತ್ರಾ
ಪವನಂಶವೇ ಗಾತ್ರಾ
ಜ್ಞಾನ ಇಂದ್ರಿಯ ಕೇಳು ಸರ್ವತ್ರ
ವಾಯು ಬೆರತು ಪ್ರಾಣಿಯ ಸೂತ್ರಾ
ತೇಜಕ ಪದಯತ್ರಾ
ಗಗನಕೂಡಲ್ಕೆ ವಾಕಸೂತ್ರಾ
ಪೃಥ್ವಿಯೊಳು ಜಲಕೂಡಿ ಲಿಂಗಮಾತ್ರಾ
ಬರೆ ಪೃಥ್ವಿಗೆ ಗುದತಂತ್ರಾ
ಕರ್ಮ ಇಂದ್ರಿಯಗಳ ಚರಿತ್ರಾ
ಮುಂದೆ ಕೇಳ ವಿಷಯಗಳಂಕುರಾ ||೬||

ಕೆಲವು ದಿವಸ ಗಗನದೊಳಿದ್ದು
ಜಲದೊಳಗೆ ಬಿದ್ದು
ಪಾವಾಮಾತ್ರದ ಲಿಪಿತನದಲಿ ಬಂದು
ಮೂರು ತಿಂಗಳುದರದಿ ನಿಂದು
ರತಿಕೂಡಲು ಬಿಂದು
ಜನನಿಯ ಗರ್ಭಕೈತಂದು
ನವತಿಂಗಳ ವಿಧಾನದೊಂದು ಜನಿಸಿ ಬರಲೊಂದು
ಪೂರ್ವಜನ್ಮದ ಸ್ಮರಣೆಯ ಮರೆದು
ಶಿಶುತನದಲಿ ತಿಳಿಯದು
ಅಂದು ಪ್ರಾಯಕಾಲ ಕೂಡಿಯದು
ವಿಷಯದಲಾತ ಮರುಗಿ ಬೆಂದು
ವೃದ್ಧನಾಗಿ ಬಿಡತೈತಿ ಘೋರಾ ||೭||

ಒಂದೆ ಮನದಿ ಗುರುಮತವರಿದು
ಎರಡು ಬುದ್ಧಿಯ ಮರಿತು
ಮೂರು ತಾಪವನೆ ಮೊದಲು ಮುರಿದು
ಚತುರ್ವಿಧ ಪುರುಷಾರ್ಥವನೆ ಜರಿದು
ಪಂಚಕ್ಲೇಶ ಕೊರಿದು
ಪಂಚ ವಿಷಯಗಳನೆಲ್ಲಾ ತರಿದು
ಷಟ್ಪದ ವೈರಿಗಳಿಗೆ ಅರಿದು
ಷಡ್ ಭ್ರಮಗಳ ಉರಿದು
ಸಪ್ತವ್ಯಸನಗಳೆಲ್ಲಾ ಸರಿದು
ಅಷ್ಟ ಪಾಶಗಳ ಪರಿಹರಿದು
ಅಷ್ಟ ಮದಗಳನರಿದು
ನವವಿಧ ಭಕ್ತಿಯಲಿ ಮೆರಿದು
ರಾಜಯೋಗಿಯೆನಿಸುವ ಶೂರಾ ||೮||

ಈ ಪರಿಯಲಿ ಸಾಧನಮಾಡೋ
ಸಂತ ಜನರ ಕೂಡೋ
ತಾರಿಸುವ ಸದ್ಗುರುವಿನ ನೋಡೋ(ತಾರಿಸವ=ದಾಟಿಸುವ)
ತನು ಮನ ಧನ ವಹಿಸಿಬಿಡೋ
ಚರಣದಿ ಚಿತ್ತವಿಡೋ
ಗುರುವಿನ ನಿರುತದಿ ಕೊಂಡಾಡೋ
ಬಂದದಕೇನು ತೋಡೋ
ಮುಂದ ಯಾರಿಲ್ಲ ನಿನಗ ಜೋಡೋ
ಗುರುಗೋವಿಂದನ ಒಡಗೂಡೋ
ಚಿತ್ತಸುಖವನು ಬೇಡೋ
ನಿತ್ಯಾನಂದದಲಿ ನಲಿದಾಡೋ
ಸರ್ವ ಬ್ರಹ್ಮಮಯ ಬರ್ಪುರಾ
ವೇದಾಂತಾ ಸಾರಾ ||೯||

ನೋಡಿ[ಸಂಪಾದಿಸಿ]

ಶರೀಫ ಸಾಹಿತ್ಯ

ಉಲ್ಲೇಖ[ಸಂಪಾದಿಸಿ]

  • ಶಿಶುನಾಳ ಶರೀಫರ ಪದಗಳು -ಅನಾಮಿಕ