ದೂರದ ನಕ್ಷತ್ರ/೧೫

ವಿಕಿಸೋರ್ಸ್ದಿಂದ

೧೫

ಅನಾರೋಗ್ಯದಿಂದ ಜಯದೇವ ಬಳಲಿದ. ಅದು ಮನಸಿನ ಕಾಹಿಲೆ. ಆ ಎಳೆಯ ಜೀವನದಲ್ಲಿ ಆವರೆಗೂ ಆಗದೇ ಇದ್ದ ಪ್ರಬಲ ಮನೋ ವಿಕಾರಗಳು ಆತನನ್ನ ಬಾಧಿಸಿದುವು. ತನ್ನ ಪ್ರೌಢಾವಸ್ಯೆಯನ್ನು ಸಾಧಿಸ ಹೊರಟಿದ್ದ ಯಾವನ, ಯಾವುದು ಸರಿ? ಯಾವುದು ತಪ್ಪು? ಎಂದು ಬಾರಿಬಾರಿಗೂ ಕೇಳುತ್ತಿತ್ತು, ಶ್ಯಾಮಲೆ ಕೆಟ್ಟವಳು ಎಂದು ಒಮ್ಮೊಮ್ಮೆ, ಆತನಿಗೆ ಅನಿಸುವುದು. ಹಾಗೆ ಭಾವಿಸಬಾರದು; ದೃಷ್ಟಿ ಕೆಟ್ಟಿರುವುದು ತನಗೆ; ಮಾನವ ಸಹಜವಾದ ಸ್ನೇಹ-ಸರಸವನ್ನು ತೋರಿದ ಮಾತ್ರಕ್ಕೆ ಆ ಹುಡುಗಿಯನ್ನು ಕೆಟ್ಟವಳೆನ್ನಬೇಕೆ? – ಎಂದೂ ತೋರುವುದು. ವಿವೇಕದ ಕಣ್ಣು ತಪ್ಪಿಸಿ, ದೇಹದ ಬಯಕೆ ಹೊರಗೆ ಹರಿದಾಡಲೆತ್ನಿಸುತ್ತಿತ್ತು, ಆದರೆ ಹೃದಯ ಅರಚುತ್ತಲೇ ಇತ್ತು: 'ನಾನು ಇಲ್ಲಿಲ್ಲ, ನನಗಿದೊಂದೂ ತಿಳಿಯದು. ನನ್ನ ಸಾನ ಬೆಂಗಳೂರು.'

ರಾತ್ರೆ ಹೊತ್ತು ಹಾಸಿಗೆಯಲ್ಲಿ ಹೊರಳಿ ಹೊರಳಿ ನಿದ್ದೆ ಮಾಡಿದರೂ ಬೆಳಗ್ಗೆ ಎದ್ದಾಗ, ಜಾಗರವಿದ್ದವರ ಹಾಗೆ ಕಣ್ಣುಗಳು ಉರಿದು ಕೆಂಪಗಾಗುತಿದ್ದುವು.

ನಾಗರಾಜ ಕೇಳಿದ :

“ಮೈ ಚೆನಾಗಿಲ್ವೆ?”

ವಾರ್ಷಿಕೋತ್ಸವದ ಸಂದರ್ಭದಿಂದ ಆತ್ಮೀಯರಾಗಿದ್ದ ತಿಮ್ಮಯ್ಯ ಮೇಷ್ಟ್ರು ಬಂದು ಕೇಳಿದರು :

“ಮೈ ಚೆನ್ನಾಗಿಲ್ವೆ?"

ಬೇರೆ ಹಲವರೂ ಅದೇ ಪ್ರಶ್ನೆ ಕೇಳಿದರು. ಜಯದೇವ ಬೇರೆಬೇರೆ ಮಾತುಗಳಲ್ಲಿ ಒಂದೇ ರೀತಿಯ ಉತ್ತರವನ್ನು ಕೊಡುತ್ತ ಬಂದ:

'ಚೆನಾಗಿಲ್ದೆ ಏನು?' 'ಚೆನ್ನಾಗೇ ಇದೀನಲ್ಲ?' 'ಛೆ! ಛೇ! ಹಾಗೇನೂ ಇಲ್ಲ.'

ಯಾರಾದರೊಬ್ಬರು ಕೇಳುತ್ತಿದ್ದರು :

“ಕಣ್ಣು ಕೆಂಪಗಿದೆ. ರಾತ್ರೆ ನಿದ್ದೆ ಇರ್ಲಿಲ್ವೇನು?”

“ಸ್ವಲ್ಪ ಜಾಸ್ತಿಹೊತ್ತು ಓದ್ತಾ ಕೂತಿದ್ದೆ, ಅಷ್ಟೆ.”

ಆಗ ಯಾರಾದರೂ ನಕ್ಕು ಹೇಳುತಿದ್ದರು :

“ದೊಡ್ಡ ಪರೀಕ್ಷೆ ಸಮೀಪವಾಗ್ತೀರೋದು ಹುಡುಗರಿಗೆ ಸಾರ್! ನೀವ್ಯಾಕೆ ಓದ್ತೀರಾ?'

ದೊಡ್ಡ ಪರೀಕ್ಷೆ, ಅದರಲ್ಲಿ ಸಂದೇಹವೇ ಇರಲಿಲ್ಲ, ಎಲ್ಲರೂ ಅಂತಹ ಪರೀಕ್ಷೆಗೆ ಬೇಗನೆ ಇಲ್ಲವೆ ತಡವಾಗಿ ಕುಳಿತುಕೊಳ್ಳల్వేటిలేు. ದುರ್ಬಲರಿಗೆ ಸೋಲು. ಹೃದಯ-ಮೆದುಳುಗಳನ್ನು ಒಂದಾಗಿ ಇರಿಸಿ ದೇಹದ ಮೇಲೆ ಸಂಪೂರ್ಣ ಒಡೆತನವಿರುವವರಿಗೆ ಗೆಲುವು.

ಸೋಲುವ ಇಷ್ಟವಿರಲಿಲ್ಲ ಜಯದೇವನಿಗೆ.

ಶ್ಯಾಮಲೆಗೆ ಏನಾಗಿತ್ತು? ಅತೃಪ್ತ ಗ್ರಹಜೀವನದ ಕೊರತೆಯನ್ನು ಒಳ್ಳೇಯವನೊಬ್ಬನ ಸಾಮಿಪ್ಯದಿಂದ ನೀಗಿಸಿಕೊಳ್ಳಲು ಆಕೆ ಇಚ್ಛಿಸಿದಳು. ಕಾಮದ ವಿಕೃತ ದೃಷ್ಟಿಯಿಂದಲೇ ಆಕೆ ಬದುಕನ್ನು ನೋಡುತ್ತಿರಲಿಲ್ಲ. ಆದರೆ ನಿರ್ದಿಷ್ಟವಾಗಿ ತನಗೇನು ಬೇಕೆಂಬುದು ಆಕೆಗೇ ತಿಳಿದಿರಲಿಲ್ಲ, ಅಸ್ಪಷ್ಟ ಆಸೆಗಳ ಕತ್ತಲಲ್ಲಿ ಹುಡುಗಿ ಎಡವಿ ನಡೆಯುತಿದ್ದಳು..

ಮನಸ್ಸಿನ ಹೊಯ್ದಾಟದ ನಿಜರೂಪವನ್ನು ತಿಳಿದುಕೊಳ್ಳಲು ಜಯದೇವ ಸಮರ್ಥನಾಗಲಿಲ್ಲ.......

ಹದಿನೈದು ದಿನ ಸಂಕಟ ಅನುಭವಿಸಿದ ಬಳಿಕ ಜಯದೇವ ಕೊನೆಯ ತೀರ್ಮಾನಕ್ಕೆ ಬಂದ-ಕೊಠಡಿ ಬದಲಾಯಿಸುವ ತೀರ್ಮಾನ.

ಆನಂದವಿಲಾಸದ ಯಜಮಾನರನ್ನು ಬಿಟ್ಟರೆ ಬೇರೆ ಹಾದಿ ಇರಲಿಲ್ಲ. ಹೋಟೆಲಿಗೆ ತಾಗಿಯೆ, ಗಂಡಸರ ವಾಸಕ್ಕೆ ಯೋಗ್ಯವಾಗಿದ್ದ ಮೂರು ಕೊಠಡಿಗಳಿದುವು. ಅವುಗಳಲ್ಲೊಂದು ಖಾಲಿ ಇತ್ತು.

“ಬಾಡಿಗೆ ಜಾಸ್ತಿಯಾಗುತ್ತಲ್ಲ ಮೇಷ್ಟ್ರೇ.”

“ಎಷ್ಟು?"

“ಹನ್ನೊಂದುರೂಪಾಯಿ.”

“ಬೆಂಗಳೂರು ಬಾಡಿಗೆಯಾಯ್ತಲ್ರಿ!”

“ಏನು ಮಾಡ್ಲಿ ಹೇಳಿ ? ನೀವು ಈ ಊರಿಗೆ ಬಂದಾಗ್ಲೆ ಇಲ್ಲಿಗೆ ಕರೆಯೋಣಾಂತಿದ್ದೆ, ಆದರೆ ನಿಮಗೆ ಬಾಡಿಗೆ ಜಾಸ್ತಿಯಾಗುತ್ತೇಂತ—”

ದೂರದ ನಕ್ಷತ್ರ

೧೫೮

ನೀನು ಬಡವ, ನಿನ್ನ ಸಂಪಾದನೆ ಕಡಮೆ–ಎಂದೂ ಸೂಚ್ಯವಾಗಿ ಆ ಮಾತುಗಳು ಹೇಳುತಿದ್ದುವು.

“ಆಗ್ಲಿ ಬರ್ತೀನಿ !”

ಹೋಟೆಲಿನವನಿಗೆ ಆಶ್ಚರ್ಯವಾದರೂ ಅದನ್ನಾತ ತೋರಿಸಿ ಕೊಡಲಿಲ್ಲ.

“ಯಾವತ್ತು ಬರ್ತೀರಿ?”

“ಇವತ್ತೇ--ಸಾಯಂಕಾಲ.”

ಸಂಬಳದ ಖರ್ಚು ಕಳೆದು ಉಳಿತಾಯವಾಗದಿದ್ದರೂ ಅಷ್ಟೆ, ಕೊಠಡಿ ಬದಲಾಯಿಸುವುದೇ ಸರಿ ಎಂದುಕೊಂಡ.

ಜಯರಾಮಶೆಟ್ಟರ ಮನೆಯಲ್ಲಿ ಪ್ರಶ್ನೆಗಳಿಗೆಲ್ಲ ಜಯದೇವ ಕೊಟ್ಟ! ಉತ್ತರ ಒಂದೇ :

“ಅಲ್ಲೇ ಸವಿಯೋಪವಾಗಿದ್ರೆ ನನಗೆ ಅನುಕೂಲವಾಗುತ್ತೆ.”

ನಾಗರಾಜ, ಏನನ್ನೊ ಕಳೆದುಕೊಂಡವನ ಹಾಗೆ ಹೇಳಿದ:

“ಹಾಗಾದರೆ, ಪಾಠ - ಸಾರ್ ?"

“ಬೆಳಗ್ಗೆ ಶಾಲೆಗೆ ಹೋಗ್ತಾ ಅಲ್ಲಿಗೇ ಬಂದುಬಿಡು ನಾಗರಾಜ.”

ಶ್ಯಾಮಲಾ ನಗಲಿಲ್ಲ, ಹೊರಗೆ ಮುಖ ತೋರಿಸಲಿಲ್ಲ, ಆಕೆಗೆ ದುಃಖ ವಾಯಿತು– ಆದರೆ ತನ್ನ ಮನಸ್ಸಿನ ಹೊಯ್ದಾಟ ನಿಲ್ಲುವುದಲ್ಲಾ ಎಂದು ಸಮಾಧಾನವೂ ಆಯಿತು. 'ಪಾರಾದೆ' ಎಂದುಕೊಂಡ ಜಯದೇವ, ಇನ್ನೊಬ್ಬರ ಭಾವನೆಗಳನ್ನು ತಿಳಿಯುವ ಗೋಜಿಗೆ ಹೋಗಲಿಲ್ಲ.

ಜಯದೇವ ಕೊಠಡಿ ಬದಲಾಯಿಸಿದ್ದು ತಿಳಿದಾಗ ವೆಂಕಟರಾಯರು ಉತ್ಸುಕರಾದರು; ನಂಜುಂಡಯ್ಯ ಹುಬ್ಬು ಮೇಲೇರಿಸಿ ಯೋಚಿಸಲೆತ್ನಿಸಿದರು.

“ಏನು ಜಯದೇವ ? ಶೆಟ್ಟರ ಮನೇಲಿ ಅನುಕೂಲವಾರ್ಲಿಲ್ವೊ?"

ಮುಖ್ಯೋಪಾಧ್ಯಾಯರ ಆ ಪ್ರಶ್ನೆಯಲ್ಲಿ ಅಣಕವಿತ್ತು, ಜಯದೇವ ಕಟ್ಟನಿಟ್ಟಾಗಿ ಹೇಳಿದ: -

“ಇಲ್ಲ ಸಾರ್, ಅನುಕೂಲವಾಗಿರ್ಲಿಲ್ಲ.”

ವೆಂಕಟರಾಯರಿಗೆ ಮುಖಭಂಗವಾದ ಹಾಗಾಯಿತು. ಜಯದೇವ ನಿಲ್ಲದೆ ಇದ್ದಾಗ ನಂಜುಂಡಯ್ಯನೊಡನೆ ಅವರು ಆಪ್ತಾಲೋಚನೆ

೧೫೬

ದೂರದ ನಕ್ಷತ್ರ

ನಡೆಸಿದರು. ಜಯರಾಮಶೆಟ್ಟರ ಮನೆಯಲ್ಲಿ ಪತಿಗೃಹದಿಂದ ಬಂದು ಕುಳಿತಿದ್ದ ಯುವತಿಯೊಬ್ಬಳು ಇದ್ದಳೆಂಬ ವಿಷಯವೂ ವೆಂಕಟರಾಯರಿಗೆ ತಿಳಿದಿತ್ತು!

ಅವರು ಜಯರಾವುಶೆಟ್ಟರಲ್ಲಿ ಹೋದರು. ಶೆಟ್ಟರು ಮಾತನಾಡಿದ್ದು ತಮ್ಮ ಮಗನ ವಿಷಯವೇ.

“ನೀವೇ ಏನಾದ್ರೂ ಪಾಠ ಹೋಳ್ಕೊಡಾಕೆ ಆಗ್ತದಾ ಸ್ವಾಮಿ ?”

“ಅದಕ್ಕೇನ್ರೀ..... ಬೆಳಗ್ಗೆ ಏಳರಿಂದ ಎಂಟರವರೆಗೆ ಕಳಿಸ್ಕೊಡಿ. ಸ್ಪೆಷಲಾಗಿ ಪಾಠ ಹೊಳೋಣ.”

ಮುಖ್ಯೋಪಾಧ್ಯಾಯರೇ ಜಯದೇವನ ಮಾತೆತ್ತಿದರು.

“ಒಳ್ಳೆಯವ್ರೇ.. ಆದರೆ ಸ್ವಲ್ಪ ವಿಚಿತ್ರ–ಇನ್ನೂ ಹುಡುಗ” ಎಂದಷ್ಟೇ ಶೆಟ್ಟರು ಹೇಳಿದರು. ವೆಂಕಟರಾಯರಿಗೆ ನಿರಾಶೆಯಾಯಿತು: ಆದರೂ ಜಯದೇವ ಜವಾಬ್ದಾರಿ ಇಲ್ಲದ ಮನುಷ್ಯ–ಆತನ ನಡತೆ ಚೆನಾಗಿಲ್ಲ? ಎಂದು ಅವರು ತೀರ್ಮಾನಿಸಿದರು.

“ನಿಮಗೆ ಅವರಿಂದೇನಾದ್ರೂ ತೊಂದರೆಯಾಗಿದ್ರೆ ಹೇಳಿ, ವಿವೇಕ ಹೇಳ್ತೀನಿ” ಎಂದೂ ವೆಂಕಟರಾಯರು ಶೆಟ್ಟರಿಗೆ ಹೇಳಿದರು.

“ಛೆ! ಛೆ! ಆತನಿಂದ ತೊಂದರೆ ಆಗೋದಂದ್ರೇನು?” ಎಂದು ಶೆಟ್ಟರು ಆ ವಿಷಯವನ್ನೇ ತಳ್ಳಿಹಾಕಿಬಿಟ್ಟರು.

ಹೀಗಿದ್ದರೂ, ಮುಖ್ಯೋಪಾಧ್ಯಾಯರು ಮಾತ್ರ ಜಯದೇವನ ನಡತೆಯ ಬಗೆಗೆ ತಮ್ಮ ಅಭಿಪಾಯವನ್ನು ಬದಲಿಸಲಿಲ್ಲ,

ಮುಖ್ಯೋಪಾಧ್ಯಾಯರಿಗೆ ಸಂತೋಷವಾಗಿ ಜಯದೇವನಿಗೆ ಬೇಸರ ಬರುವಂತಹ ಬೇರೊಂದು ಪ್ರಕರಣ ನಡೆಯಿತು. ಶ್ಯಾಮಲೆ ಮತ್ತು ತನಗೆ ಸಂಬಂಧಿಸಿ ಕೆಟ್ಟ ನಾಲಿಗೆಗಳು ಏನನಾದರೂ ಅನ್ನಬಹುದೆಂದು ಜಯದೇವ ನಿರೀಕ್ಷಿಸಿದ್ದ, ಆದರೆ ಹಾಗೇನೂ ಆಗಲಿಲ್ಲ, ಅದರ ಬದಲು ವಿದ್ಯಾರ್ಥಿನಿ ಇಂದಿರೆ ಮತ್ತು ಆತನ ವಿಷಯದಲ್ಲಿ ಅಲ್ಲಸಲ್ಲದ ಮಾತುಗಳು ಹೊರಟುವು.

ಶಾಲೆಯ ಗೋಡೆಯ ಮೇಲೆ ಎದುರು ಭಾಗದಲ್ಲೇ ಯಾರೋ ಸುಣ್ಣದ ಕಡ್ಡಿಯಲ್ಲಿ ಬರೆದಿದ್ದರು:

“ಸಂಧಿ ವಿಂಗಡಿಸಿ! ಜಯದೇವೇಂದ್ರ--ಜಯದೇವ + ಇಂದಿರಾ !"

ಜಯದೇವನಿಗೆ ರೋಸಿಹೋಯಿತು. ಆದರೆ ರೇಗಾಡಿ ಪ್ರಯೋಜನ ವಿಲ್ಲವೆಂದು ಆತ ಸುಮ್ಮನಾದ. ಇಂದಿರಾ ತರಗತಿಯಲ್ಲಿ ತಲೆತಗ್ಗಿಸಿ

೧೫೭

ದೂರದ ನಕ್ಷತ್ರ

ಕುಳಿತಳು. ಶಾಲೆಯ ಜವಾನ ಗೋಡೆಯನ್ನೊರೆಸಿದ.

ಈ ಸಲ ಮಾತ್ರ ವೆಂಕಟರಾಯರು ಸುಮ್ಮನಿರಲಿಲ್ಲ. ಇದು ಯಾರೋ ಕೆಟ್ಟ ಹುಡುಗರ ಕಿಡಿಗೇಡಿತನವೆಂಬುದು ಅವರಿಗೆ ಗೊತ್ತಿದ್ದರೂ ಜಯದೇವನಿಗೆ ಇದಿರಾಗಿ ಉಪಯೋಗಿಸಿಕೊಳ್ಳಲು ಸಮಯಕ್ಕೆ ಸರಿಯಾಗಿ ಅದು ಒದಗಿ ಬಂತು.

ನ್ಯಾಯಾಧೀಶರು ಆರೋಪಿಯನ್ನು ತಮ್ಮ ಕೊಠಡಿಗೆ ಕರೆದರು.

“ನಿಮ್ಮಿಂದ ನನಗೆ ವಿವರಣೆ ಬೇಕು.”

ಜಯದೇವ, ಮೈ ಉರಿಯುತ್ತಿದ್ದರೂ ತಾಳ್ಮೆಯಿಂದಿರಲು ಯತ್ನಿಸಿ ನಿಶ್ಚಲ ಮುಖದಿಂದ ಅವರೆದುರು ಕುಳಿತ. ನೆಟ್ಟ ನೋಟದಿಂದ ಅವರನ್ನೆ ನೋಡಿದ. •

“ಸುಮ್ಮೆ ಕೂತಿದೀರಲ್ಲಾ!”

“ಯಾವುದಕ್ಕೆ ವಿವರಣೆ?

“ನೋಡಿಲ್ವೇನು? ಗೋಡೆಮೇಲೆ ಬರೆದಿದಾರೆ."

“ನಾನು ಬರನು ಬರದ್ನೆ ಅದನ್ನ?"

“ವಕ್ರವಾಗಿ ಮಾತಾಡ್ಬೇಡಿ, ನನಗೆ ಸರಳ ಉತ್ತರ ಬೇಕು.”

ಜಯದೇವ ಎದ್ದು ನಿಂತ:

“ಸರಳವಾಗಿ ಹೇಳ್ಲೆ ? ನೀವು ತುಚ್ಛವಾಗಿ ವರ್ತಿಸಿದೀರಿ. ಇದೇ ನನ್ನ ಉತ್ತರ !”

ಅಷ್ಟು ಹೇಳಿ ಆತ ಹೊರಟು ಹೋದ. ಸ್ವಲ್ಪ ಹೊತ್ತು ದಿಗ್ಭ್ರಾಂತರಾಗಿ ಕುಳಿತ ವೆಂಕಟರಾಯರು ನಂಜುಂಡಯ್ಯರನ್ನು ಕರೆದು ರೇಗಾಡಿದರು. ತಮಗೆ ಅವಮಾನವಾಯಿತೆಂದರು. ಆ ಜಯದೇವ ಕೈಎತ್ತಿ ಹೊಡೆಯಲು ಬಂದನೆಂದರು. ಆತನನ್ನು ಕೆಲಸದಿಂದ ವಜಾ ಮಾಡಿಸ್ತೀನಿ ಎಂದು ಆರ್ಭಟಿಸಿದರು. ವಿದ್ಯಾಧಿಕಾರಿಯ ಶಾಲಾ ಸಂದರ್ಶನದ ದಿನದಿಂದ ಬಲಗೊಂಡು ವಾರ್ಷಿಕೋತ್ಸವದ ಕಾಲದಲ್ಲಿ ಪ್ರಬಲವಾದ, ದ್ವೇಷಾಸೂಯೆಯ ಬೆಂಕಿ ವೆಂಕಟರಾಯರ ಹೃದಯದಲ್ಲಿ ಭುಗ್ ಭುಗಿಲೆಂದು ಹತ್ತಿ ಕೊಂಡಿತು.

ವೆಂಕಟರಾಯರು ಜಯದೇವನ ವಿರುದ್ಧವಾಗಿ ಮೇಲಧಿಕಾರಿಗಳಿಗೆ ಕಳುಹಲೆಂದು ವರದಿ ಸಿದ್ಧಗೊಳಿಸಲು ಒಂದು ವಾರ ಹಿಡಿಯಿತು, ಆದರೆ ಜಯದೇವ ಅಷ್ಟರಲ್ಲೆ ಖಾಸಗಿಯಾಗಿ ರಾಧಾಕೃಷ್ಣಯ್ಯನವರಿಗೆ ಬರೆದ.

೧೫೮

ದೂರದ ನಕ್ಷತ್ರ

“ಹೀಗೆ ಬರೆಯುವುದು ತಪ್ಪೆಂದು ನನಗೆ ಗೊತ್ತಿದೆ; ಆದರೂ ಕ್ಷಮಿಸಿ,” ಎಂದು ಹೇಳಿ, ನಡೆದುದೆಲ್ಲವನ್ನೂ ಆತ ವಿವರಿಸಿದ.

ಆ ಕಾಗದದಲ್ಲಿ ಅತಿ ಮುಖ್ಯವಾದ ಒಂದಂಶವಿತ್ತು, ದೀರ್ಘ ಯೋಚನೆಯ ಬಳಿಕ ಅದನ್ನು ಜಯದೇವ ಬರೆದಿದ್ದ.

“ಉಪಾಧ್ಯಾಯ ವೃತ್ತಿಯ ಮೊದಲ ವರ್ಷದ ಕೊನೆ ಸಮೀಪಿಸುತ್ತ ಬಂತು.ಮುಂದೆ ವಿದ್ಯಾಭ್ಯಾಸ ಮುಂದುವರಿಸಬೇಕೆಂದು ಮಾಡಿದ್ದೇನೆ: ಅಲ್ಲಿಂದ ಹಿಂತಿರುಗುವ ನನಗೆ ಇದೇ ಊರಲ್ಲಿ ಕೆಲಸ ಕೊಡಿಸುವಿರೆಂಬ ನಂಬಿಕೆ ಇದೆ. ನೀವು ನನ್ನಂಥವರಲ್ಲಿ ಏನೋ ಆಸೆ ಇಟ್ಟಿದ್ದಿರಿ. ಅದನ್ನು ಎಂದಿಗೂ ನಿರರ್ಥಕಗೊಳಿಸುವುದಿಲ್ಲವೆಂದು ಭರವಸೆ ಕೊಡುತ್ತೇನೆ.”