ನಾವೂ ಮನುಷ್ಯರು!/ಬಣ್ಣದ ಬಯಲು

ವಿಕಿಸೋರ್ಸ್ದಿಂದ

ಬಣ್ಣದ ಬಯಲು

ನಾಟಕದ ಅಂಟುಬಣ್ಣಕ್ಕೂ ನನಗೂ ನಂಟು ಹಳೆಯದು.ಐದನೆಯ ವಯಸ್ಸಿನ ಅನಂತರದ ಅನುಭವ ನೆನಪಿನ ಗವಿಯಲ್ಲಿ ಜ್ವಲಂತವಾಗಿರುತ್ತದೆಂದು ಮನೋವಿಜ್ಞಾನ ಮನವರಿಕೆಮಾಡಿಕೊಟ್ಟಿದೆ. ಐದಕ್ಕೂ ಮುಂಚಿನ ಘಟನೆಗಳು ನೆನಪಿವೆ ಅನಿಸಿದರೆ, ನಾವು ವಂಚನೆಗೆ ಒಳಗಾದಂತೆಯೇ: ಅವು ನಿಜನೆನಪಲ್ಲ; ಹಿರಿಯರು ಪದೇ ಪದೇ ಹೇಳಿ ಭೈರಿಗೆ ಕೊರೆದುದರ ಫಲವಾಗಿ ಮೆದುಳಿಗೆ ಅಂಟಿಕೊಂಡ ಜಿಗುಟು.ನಿಜ ಇರಬಹುದು. ಆದರೆ ಅವು ಯಾವುದೇ ವ್ಯಕ್ತಿಯ ಸ್ವಂತ ಅನುಭವವಲ್ಲ.

ಪ್ರತಿಯೊಂದು ಸಾಹಿತ್ಯಕೃತಿಗೂ ಒಂದಿಷ್ಟು ಹಿಂದು ಮುಂದು ಇದ್ದೇ ಇರುತ್ತದೆ. 1944ರಲ್ಲಿ ನಾನು ಬರೆದು ನಿರ್ದೇಶಿಸಿದ 'ನಾವೂ ಮನುಷ್ಯರು!'ನಾಟಕಕ್ಕೂ ಹಿಂದು ಮುಂದು ಇರಲೇಬೇಕಲ್ಲ? ಆ ಹಿಂದುಮುಂದು ಅರಿಯಲು ನೆನಪಿನ ಆಳವನ್ನು ಕಲಕಿದೆ. ಹಲವು ತುಣುಕುಗಳು ಮೇಲೆ ಬಂದುವು. ಐದನೆಯ ವಯಸ್ಸಿನ ಅನಂತರದ್ದೇ. ಆದರೂ ಕೆಲ ತುಣುಕುಗಳ ಬಗೆಗೆ ಶಂಕೆ, ಆ ಮಿತ್ರರಿಗೆ ಈ ಮಿತ್ರರಿಗೆ ಬರೆದು ಖಚಿತಪಡಿಸಿಕೊಂಡೆ. ಪರಿಣಾಮ ನೆನಪುಗಳ ಒಡ್ಡೋಲಗ- ಬಣ್ಣದ ಬಯಲು.

ದಕ್ಷಿಣ ಕನ್ನಡದಲ್ಲಿ ಹುಟ್ಟಿ ಸ್ವಲ್ಪಕಾಲವಾದರೂ, ಅಲ್ಲಿ ಬೆಳೆದವನಿಗೆ ಭೂತದ ಕೋಲ,ಯಕ್ಷಗಾನ,ತಾಳವುದ್ಧಳೆ ತೀರಾ ಅಪರಿಚಿತವಾಗುವುದು ಸಾಧ್ಯವಿಲ್ಲ. ಅಂಥವರಲ್ಲಿ ಒಬ್ಬ ನಾನು.ಕುಮಾರ ಪರ್ವತ ಕುಮಾರಧಾರೆ; ಆವರಿಸಿದ ಕುಳುಕುಂದದ ಬಯಲಲ್ಲಿ ಹುಟ್ಟಿ ಆರು ತಿಂಗಳಾದ ಮೇಲೆ, ಮಡಿಕೇರಿ : ಮಂಗಳೂರು ಹೆದ್ದಾರಿಯಲ್ಲಿನ ಕಾವು ಎಂಬ ಪುಟ್ಟ ಊರಿಗೆ; (ದಕ್ಷಿಣಕ್ಕೆ ಪುತ್ತೂರು, ಉತ್ತರಕ್ಕೆ ಸುಳ್ಳ)ನನ್ನ ಸ್ಥಳಾಂತರವಾಯಿತು. ಕಾವು ಊರು ಎಂದರೂ ಒಂದೇ: ಕಾವು ಗ್ರಾಮ ಎಂದರೂ ಒಂದೇ.



ಸೂಕ್ತ ವಯಸ್ಸಿನಲ್ಲಿ ಪ್ರಾಥಮಿಕ ಶಾಲೆ ಸೇರಿದೆ. ಅಕ್ಷರಗಳನ್ನು ಜೋಡಿಸಿ, ಅಚ್ಚಾದುದನ್ನು ಓದಲು ಕಲಿತ ಮೇಲೆ, ಶಾಲೆ ಇಷ್ಟವಾಯಿತು. ನನಗೆ ಶಾಲೆಗಿಂತಲೂ ಹೆಚ್ಚಿನ ಲೋಹಚುಂಬಕ ಆ ಊರಿನ ಪಟೇಲ ಶ್ರೀನಿವಾಸರಾಯರು(ಅವರಿಗೆ ನನ್ನ ತಂದೆಯ ಹೆಸರೇ ಇದ್ದುದು ಬರಿಯ ಆಕಸ್ಮಿಕ, ಪಟೇಲರು ಯಕ್ಷಗಾನದಲ್ಲಿ, ಸಾಹಿತ್ಯದಲ್ಲಿ ಆಸಕ್ತರು.) ಒಂದು ನಮೂನೆಯು ಪುಟ್ಟ ಹುಡುಗನ ಮೇಲೆ, ಆತ ತಬ್ಬಲಿಯೆಂಬ ಕಾರಣವೂ ಸೇರಿ, ಅವರು ಕುತೂಹಲ ತಳೆದದ್ದು ಸ್ವಾಭಾವಿಕ. ಹತ್ತಿರದ ಹಳ್ಳಿಗಳಲ್ಲಿ ಯಕ್ಷಗಾನ ಎಲ್ಲಿಯೇ ಇರಲಿ ಪಟೇಲರ ಹಿಂಡಿನೊಂದಿಗೆ ಈ ಹುಡುಗ ಒಬ್ಬನಾಗುತ್ತಿದ್ದ. ಆರುವ ಉರಿಯುವ ತೆಂಗಿನ ಒಣಗರಿಗಳ 'ಸೂಟೆ' ಎದುರಲ್ಲಿ ಹೊಲಗಳ ಏರಿಯುದ್ದಕ್ಕೂ ಹುಡುಗನ ಓಟ. ಸ್ಥಳ ತಲಪಿದೊಡನೆ ಒಂದು ಮೂಲೆಯಲ್ಲಿ ನೆಲದ ಮೇಲೆ ನಿದ್ದೆ. ಬೆಳಗಿನ ಜಾವ ರಣಚಂಡೆಯ ಸದ್ದಿಗೆ ಎಚ್ಚರ!

ನನ್ನ ತಾಯಿಯ ಸೋದರ ಮಾವ ಪ್ರಖ್ಯಾತ ಯಕ್ಷಗಾನ ಕಲಾವಿದ ರಾಗಿದ್ದರಂತೆ (ಈ ಶತಮಾನದ ಎರಡು ಮೂರನೇ ದಶಕಗಳಲ್ಲಿ) ಹಾಸ್ಯಗಾರ ಲಕ್ಷ್ಮೀನಾರಾಯಣಯ್ಯ ಎಂದೇ ಜನ ಅವರನ್ನು ಕರೆಯುತ್ತಿದ್ದರಂತೆ. ಜೀವ ನದಿಯಲ್ಲಿ ನನ್ನ ಪುಟ್ಟ ತೆಪ್ಪ ಬೇರೆಲ್ಲಿಗೋ ಸಾಗಿದುದ್ದರಿಂದ, ಆ ಅಜ್ಜನನ್ನು ರಂಗಸ್ಥೆಲದಲ್ಲಿ ಕಂಡು, ಅವರ ಮಾತುಕೇಳಿ ನಗುವ ಅವಕಾಶ ನನಗೆ ಲಭಿಸಲಿಲ್ಲ.

ಒಂದು ಅಪರಾಹ್ನ ಶಿವರಾಮ 'ಕಾರಂತ ಮತ್ತು ಬಳಗ (ಸದಸ್ಯರು ಎಳೆಯುವಕರು), ಕಾವು ಊರಿಗೆ ಬಂದರು (೧೯೩೨), ಎರಡು ಪುಟ್ಟ'ನಾಟಕ ಆಡಿ ಪುತ್ತೂರಿಗೆ ಅವರು ಮರಳಬೇಕು. ಶಾಲೆಯು ಮೆಟ್ಟಲುಗಳು ಮತ್ತು ಜಗಲಿಯೇ ವೇದಿಕೆ. ಅಂಗಳ ಛಾವಣಿಯಿಲ್ಲದ ಪ್ರೇಕ್ಷಾಗೃಹ. ಕತ್ತಲು ಕವಿದಂತೆ ಪೆಟ್ರೋಮಾಕ್ಸ್ ನ (ಗ್ಯಾಸ್ ಲೈಟ್), ಮೊದಲ ನಾಟಕದ ಹೆಸರು 'ಡೊಮಿಂಗೊ', ನಾಟಕದ ಕತೆ ಏನು? ಪಾತ್ರಧಾರಿಗಳು ಯಾರು? ಎರಡನೇ ನಾಟಕ' ಯಾವುದು?' ಗೊತ್ತಿಲ್ಲ. ಆದರೆ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದ ಒಂದು ಸಂಗತಿ ನೆನಪಿದೆ. ಡೊಮಿಂಗೊ' ಮುಗಿದ ಮೇಲೆ ತುಸು ವಿರಾಮ. ಆ ನಾಟಕದಲ್ಲಿ ಬಣ್ಣ ಹಚ್ಚಿಕೊಂಡಿದ್ದ ಒಬ್ಬರು ಮುಖ ತೊಳೆದು 'ಡೊಮಿಂಗೊ' ಪುಸ್ತಕದ ಪ್ರತಿಗಳೊಡನೆ ಬಂದರು. ಮುಂದಿನ ಸಾಲಿನಲ್ಲೇ ನೆಲದ ಮೇಲೆ ಕುಳಿತಿದ್ದ ನಾನು ಕೈಚಾಚಿದೆ. ಓಂದು ಪ್ರತಿ ಕೊಟ್ಟರು. ಆಗ ಮೂರನೆಯ ತರಗತಿಯ ವಿದ್ವಾರ್ಥಿ ನಾನು.ಅವಸರ ಅವಸರವಾಗಿ ಪುಟತಿರುವುತ್ತ ಓದಿದೆ. ಚಿಕ್ಕ ಪುಸ್ತಕ ಮುಗಿದೇ ಹೋಯಿತು! ಅದನ್ನು ಕೊಟ್ಟವರ ಸ್ವರ ಕೇಳಿಸಿತು: 'ನಾಲ್ಕಾಣೆ ಕೊಡಬೇಕು, ಆಯ್ತಾ?” ನನ್ನದು ಚಿಕ್ಕಾಸೂ ಇಲ್ಲದ ಜೇಬು. ಪುಸ್ತಕ ಮರಳಿಕೊಟ್ಟೆ. ನಾಚಿಕೆಯಿಂದಲೋ ಏನೋ, ಓದಿಯಾಯ್ತು' ಎನ್ನಲಿಲ್ಲ. ಆದರೆ, 'ನಿಮ್ಮ ಹೆಸರೇನು?'ಎಂದು ಕೇಳಿದೆ. ಉತ್ತರ: 'ಪಿ.ಕೆ.ನಾರಾಯಣ', 1 ಪಟೇಲರು ನಾಟಕಗಳ ಒಂದೊಂದು ಪ್ರತಿಕೊಂಡು,ಊರಿನ ಮಾನ ಉಳಿಸಿ ದರು!

'‍ಕಾವು ಊರಿನಿಂದ ಸುಳ್ಳಕ್ಕೆ ವಲಸೆ (1934,ಅಲ್ಲಿ ಶಿಕ್ಷಣದ ಮುಂದು ವರಿಕೆ, ಲೋವರ್ ಎಲಿಮೆಂಟರಿ ಕೊನೆಯ ಹಂತ ಮತು ಹಯರ್ ಎಲಿಮೆಂಟರಿ) ಈಗ ತಾಲೂಕು ಕೇಂದ್ರವಾಗಿರುವ ಸುಳ್ಯಕ್ಕೆ ಇರುವ ಮಹತ್ವ, ಆಗಿನ ಸುಳ್ಯಕ್ಕೆ ಇರಲಿಲ್ಲ. (ಬ್ರಿಟಿಷರಿಗೆ ಬಲಿಯಾಗುವುದಕ್ಕೆ ಮುಂಚೆ ಕೊಡಗಿನ ಒಂದು ಭಾಗವಾಗಿತ್ತು. ದಾಖಲೆಗಳಲ್ಲಿ ಆ ಕಾಲದಲ್ಲಿ ಅದರ ಹೆಸರು 'ಅಮರಸುಳ್ಳ') ಆ ದಾರಿಯಾಗಿ ಗಾಂಧೀಜಿ ಬಂದರು. ಜನಸಮುದಾಯ, ಜಯಕಾರ, ಬಡಕಲು ಜೀವದ ಭಾಷಣ, ಭ್ರಮೆಯ ಲೋಕ ಸೃಷ್ಟಿಯಾಗಿತು, ಕೆಲವೇ ಮಿನಿಟುಗಳಲ್ಲಿ, ಆಳುವ ವರ್ಗದ ಪಾಲಿಗೆ ಅರಿಭಯಂಕರನಾಗಿದ್ದ, ಆ ಅರ್ಧನಗ್ನ ಫಕೀರ.

'‍ಅದಕ್ಕೂ ಸುಮಾರು ಐದು ವರ್ಷ ಹಿಂದೆ ಅದೇ ದಾರಿಯಾಗಿ ಬಂದಿದ್ದ ಮದರಾಸು ಆಧಿಪತ್ಯದ (ಆಂಗ್ಲ) ಗವರ್ನರನಿಗೆ ಹಾರಹಾಕಲು ಕಾವು

1. ಮುಂದೆ ಪಿ.ಕೆ.ಯವರನ್ನು ನಾನು ಕಂಡದ್ದು 1941ರಲ್ಲಿ ಮಂಗಳೂರಲ್ಲಿ. ವಯಸ್ಸಿನಲ್ಲಿ ಹತ್ತು ವರ್ಷ ದೊಡ್ಡವರು.ಅಂದಿನಿಂದ ಬದುಕಿನುದ್ದಕ್ಕೂ ಗೆಳೆಯರಾಗಿ ದಿನಕಳೆದೆವು

ಊರಿನ ಪ್ರತಿಷ್ಠಿತರು ಜುಟ್ಟಿನ ಪುಟ್ಟ ಬಾಲಕನಾದ ನನ್ನನ್ನು ಆರಿಸಿದ್ದರು. ಯಾರೋ ಕಂಟ್ರಾಕ್ಟುದಾರರ ಖಾಕಿ ಹ್ಯಾಟಿನಿಂದ ನನ್ನ ತಲೆಯನ್ನು ಅಲಂಕರಿ ಸಿದ್ದರು. ಹಾರ ಹಾಕಿಸುವ ಸಂಭ್ರಮದಲ್ಲಿ ಹ್ಯಾಟು ಕೆಳಗೆ ಬಿತ್ತು!ಏನೇ ಆಗಲಿ, ಗಾಂಧೀಜಿಯನ್ನು ಕಾಣುವುದಕ್ಕೆ ಮುನ್ನವೇ ನನಗೆ ತಿಳಿದಿತ್ತು ಆ ಮಾಲಾರ್ಪಣೆ ನಾನು ಎಸಗಿದ್ದ ದ್ರೋಹ ಎಂದು. ಅದಕ್ಕೆ ಪ್ರಾಯಶ್ಚಿತ್ರ ಅಪ್ಪಟ ಗಾಂಧೀವಾದಿಯಾಗುವದು! ಸುಲಭದ ಕೆಲಸ ಸುಳ್ಯ ಶಾಲೆಯ ವುುಖೆಸ್ಕೋಪಾಧಾಯರು ದೇಶಪ್ರೇಮಿಯಾಗಿದ್ದರು.

ದೇಶಪ್ರೇಮ ಪುಲಕಕ್ಕಾದರೆ, ಮನೋರಂಜನೆಗೆ ಯಕ್ಷಗಾನ. ಆಗ ನನ್ನ ಮೇಲೆ ಪ್ರಭಾವ ಬೀರಿದ ಒಂದು ಪಾತ್ರ ಅಕ್ರೂರನದು. ಚಿಣ್ಣರು ಒಂದಾಗಿ ಅಣಕಪ್ರಸಂಗ ಏರ್ಪಡಿಸಿದೆವು. ಅದರಲ್ಲಿ ನಾನು ಅಕ್ರೂರನಾದೆ. ಭಾಗವತರಿರಲಿಲ್ಲ. ಎಲ್ಲ ಗದ್ಯಮಯ. ಮಾರನೆಯ ದಿನ, ಹಿರಿಯರ ಕಾರ್ಯ ಕ್ರಮದಲ್ಲಿ ಅಕ್ರೂರಪಾತ್ರ ವಹಿಸಿದ್ದವರ (ಶಗ್ರಿತ್ತಾಯರು?) ಮನೆಗೆ ಹೋದೆ. 'ಏನು ಹುಡುಗ? ಎಂದರು. ಚಿಣ್ಣರು ಮಾಡಿದ್ದನ್ನು ತಿಳಿಸಿದೆ.

ಹಾ! ಹಾ! ಎಂದು ನಕ್ಕರು. 'ನಾನು ಅಕ್ರೂರನಾಗಿದ್ದೆ ಎಂದೆ. ಮತ್ತೊಮ್ಮೆ ನಕ್ಕರು. ಹೆಮ್ಮೆಪಡುತ್ತ ಅಲ್ಲಿಂದ ಓಡಿದೆ.

1935ರಲ್ಲಿ ಸುದ್ದಿ ಹಬ್ಬಿತು: ಸುಳ್ಯದಲ್ಲಿ ಮಕ್ಕಳಕೂಟವಂತೆ! ಹತ್ತಾರು ಶಾಲೆಗಳ ಮಕ್ಕಳು ಬರುತ್ತಾರಂತೆ! ಆತಿಥ್ಯಕ್ಕೆ ಸಂಬಂಧಿಸಿದ ಸಕಲ ಏರ್ಪಾಟಿಗೆ ಮುಖ್ಯೋಪಾಧ್ಯಾಯ ರಾಮಪ್ಪಯ್ಯನವರ ಹಿರಿತನ. ಅವರ ಸಹೋದ್ಯೋಗಿಗಳೇ ಅತಿರಥ ಮಹಾರಥರು. ಶಾಲೆಯ ಬಾಲಕರು ವಾನರ ಸೇನೆ. ಊರ ಹತ್ತು ಸಮಸ್ತರ ಬೆಂಬಲ ಇದ್ದೇ ಇತ್ತು, ಐದನೆಯ ತರಗತಿ ಯಲ್ಲಿದ್ದ ನಾನು ಸ್ವಯಂಸೇವಕರಲ್ಲೊಬ್ಬ, ಅವರಿವರು ಹೇಳಿದ ಆ ಕೆಲಸ ಈ ಕೆಲಸಮಾಡಿದೆ. ಬಿಡುವಾದಾಗಲೆಲ್ಲ ಅದನ್ನು ಇದನ್ನು ನೋಡಿದೆ. ನನ್ನಲ್ಲಿ ಅಕ್ರೂರನ ಪಾತ್ರವಿರುವ ಪ್ರಸಂಗ ಬಾಲಲೀಲೆ ಕಂಸವಧೆ' ಎಂದು ಗೆ, ರಾಮಚಂದ್ರ ಉಚ್ಚಿలరు 3ళిసిದ್ದಾರೆ.

ಸುಪ್ತಪ್ರತಿಭೆ ಇದ್ದಿರಬಹುದು. ಆದರೆ ಆ ಕೂಟದಲ್ಲಿ ಅದು ಬಹಿರಂಗವಾಗಲಿಲ್ಲ.[೧] ನರ್ತಕರಂತೆ ಉದ್ದ ತಲೆಗೂದಲಿದ್ದ ಕೋ.ಶಿ.ಕಾರಂತರು ಅಲ್ಲಿ ಸೂತ್ರಧಾರರು. ನನ್ನ ಪಾಲಿಗೆ ಅವರು ಸೋಜಿಗದ ವ್ಯಕ್ತಿ, ಒಂದು 'ರಾತ್ರಿ 'ಕೂಲಿ' ಎಂಬ ನಾಟಕವಿತ್ತು. ಬೆಂಗಳೂರಿನ ಅ.ನ.ಸುಬ್ಬರಾಯರು. ಬರೆದದ್ದು, ಅವರ ತಂಡದ್ದೇ ಅಭಿನಯ. ತೆರೆ ಸರಿದಾಗ ಒಬ್ಬ ಸ್ಫುರದ್ರೂಪಿ ಯುವಕ ಬಣ್ಣದಿಂದ ಒಪ್ಪಗೊಂಡು ರಂಗದ ಬಲಮೂಲೆಯಲ್ಲಿ ಸ್ಟೂಲಿನ ಮೇಲೆ ಕುಳಿತಿದ್ದ. ಬಿಳಿ ಪಾಯಜಾಮ-ನಿಲುವಂಗಿ, ಅವರು ಅ.ನ.ಕೃ. 'ನಾಟಕದಲ್ಲಿ ಕಾರ್ಮಿಕ ಮುಖಂಡ. ಇನ್ನೊಂದು ರಾತ್ರೆ ನೋಡಲು ದೊರೆತದ್ದು ಕಾರಂತರೇ ನಿರ್ಮಿಸಿದ್ದ 'ಭೂತರಾಜ್ಯ'ಎಂಬ ಮೂಕಿ ಸಿನಿಮಾ.

ಅದಕ್ಕೂ ಮುಂಚೆ ಅವರು ತಮ್ಮ 'ಡೊಮಿಂಗೊ' ನಾಟಕವನ್ನು ಮೂಕಿ ಚಲಚ್ಚಿತ್ರವಾಗಿ ಮಾಡಿದ್ದರಂತೆ. ಅದು ಆಕಸ್ಮಿಕದಲ್ಲಿ ಸುಟ್ಟುಹೋಗಿತ್ತಂತೆ. ಆಕಸ್ಮಿಕದ ವಿಷಯದಲ್ಲಿ ಸುಳ್ಳ ಹಿಂದೆ ಬೀಳಲಿಲ್ಲ. ಹಿಮಯುಗ ರಂಗಸ್ಥಳದಲ್ಲಿ ಹಾಸಿದ್ದ ಹತ್ತಿರಾಶಿಗೆ ಯಾವುದೋ ಕಡ್ಡಿಬೆಂಕಿ ತಗಲಿತು. ಸದ್ಯಃ ಕ್ಷಿಪ್ರ ಕಾರ್ಯಾಚರಣೆಯಿಂದ ಬೆಂಕಿ ಹತೋಟಿಗೆ ಬಂತು! ಸುಳ್ಯ ಗೆದ್ದಿತು. ಕಾರ್ಯಕ್ರಮಗಳಲ್ಲಿ ದೃಶಾವಳಿಯ ಜತೆಗೆ ಯಕ್ಷಗಾನಕ್ಕೂ ಸ್ಥಾನವಿತ್ತು.

ಭಾರತದ ದೇಶೀಯ ಭಾಷೆಗಳಲ್ಲಿ ಈ ಶತಮಾನದ ಎರಡು ಮೂರನೆಯ ದಶಕಗಳಲ್ಲಿ ನವೋದಯ ಉಂಟಾಗಲು ಕಾರಣ, ತಿಲಕ-ಗಾಂಧಿಯರ (ಬಳಿಕ ಗಾಂಧಿ-ಜವಾಹರರ) ನೇತೃತ್ವದ ಸ್ವಾತಂತ್ರ್ಯ ಸಂಗ್ರಾಮ, ಸಾಹಿತ್ಯ, ಸಂಸ್ಕೃತಿ ಹೊಸನೆಲೆಯನ್ನು ಅರ್ಥವನ್ನು ಸಾಧಿಸಲು ಯತ್ನಿಸಿದ ಕಾಲ ಅದು. ಆ ವಾತಾವರಣದಲ್ಲಿ ತಮ್ಮ ಅಭಿವ್ಯಕ್ತಿಯನ್ನು ಕಂಡು ಕೊಂಡವರು ಸಹಸ್ರಾರುಜನ. ಒಬ್ಬೊಬ್ಬರದು ಒಂದೊಂದು ಬಗೆ. ಅದರಲ್ಲೊಂದು ಕಾರಂತಶೈಲಿ. ಈ ಶೈಲಿಯಿಂದ ಪ್ರಭಾವಿತವಾದ ಕ್ಷೇತ್ರ ದಕ್ಷಿಣ ಕನ್ನಡ. 1930-40ರ ದಶಕದಲ್ಲಿ ಪುತ್ತೂರಿನ ದಸರೆ-ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಹೆಸರುವಾಸಿಯಾಗಿತ್ತು. ಕಾರಂತರೇ ಹೇಳಿರುವಂತೆ "ಪುತ್ತೂರಿನ ನನ್ನ ಆಶ್ರಯದಾತರಾದ ಮೊಳಹಳ್ಳಿ ಶಿವರಾಯರು ಆ ಊರನ್ನು ಬಿಡುವ ಸ್ವಲ್ಪ ಕಾಲದ ಮೊದಲೇ ಅಲ್ಲಿನ ದಸರಾ ಉತ್ಸವ ನಿಂತಿತು." ನನ್ನ ಹನ್ನೊಂದು ಹನ್ನೆರಡನೆಯ ವಯಸ್ಸಿನಲ್ಲಿ (1935 ಮತ್ತು 1936) ಪುತ್ತೂರಿನ ದಸರೆ ನೋಡಲು, ಸವಿಯಲು ಸುಳ್ಯದಿಂದ ನಾನು ಬಂದಿದ್ದೆ. 1936ರಲ್ಲಿ ಒಂದು ದೃಶ್ಯಾವಳಿಯಲ್ಲಿ ಗುಡುಗು ಮಿಂಚು ಆರ್ಭಟಕ್ಕೆ ಬೆದರುವ ಆದಿವಾಸಿಯ ಪಾತ್ರವಹಿಸಿದ್ದೆ. ಪ್ರೇಕ್ಷಕರ ಮುಂದೆ ನಾನು ಹೀಗೆ ಕಾಣಿಸಿಕೊಂಡದ್ದು ಒಂದೆರಡು ನಿಮಿಷ ಮಾತ್ರ.

ಶಾಲೆಯ ವಾರ್ಷಿಕೋತ್ಸವದಲ್ಲಿ ಯಾವಾಗಲೂ ವಿವಿಧ ವಿನೋದಾವಳಿ ಇರುತ್ತಿತ್ತು. ಒಂದು ಬಾರಿ ಇದ್ದಕ್ಕಿದ್ದಂತೆ ರಂಗಸ್ಥಲದ ಮೇಲೆ ಬುದ್ಧ ಪ್ರತ್ಯಕ್ಷನಾದ. ಬೋಳುತಲೆ, ಆಕರ್ಷಕ ದುಂಡುಮುಖ, ನೀಳವಸನ. 1 ಬುದ್ಧ ಕೈಗಳಲ್ಲಿ ఆ ದಿನವೋ ವಾರವೋ ಹುಟ್ಟಿರಬಹುದಾದ ಮುದ್ದಾದ ಆಡಿನಮರಿ. ಆ ಪಾತ್ರಧಾರಿ ನನ್ನ ಹಿರಿಯ ಕನ್ನಡ ಅಧ್ಯಾಪಕ ಬಿ. ಶಂಕರನಾರಾಯಣ ರಾವ್. ನಶ್ಯಪ್ರಿಯ-ಸದಾಮಿಡಿಯುವ ಭಾವಜೀವಿ!


1 ಕಿರಿಯ ಕನ್ನಡ ಅಧ್ಯಾಪಕರು ಕೆ. ಎಸ್. ವೆಂಕಪ್ಪ ಭಟ್. ನಾಲ್ಕನೆಯ ತರಗತಿಯಲ್ಲಿ ನಾನು ಬರೆದ ಒಂದು ಪ್ರಬಂಧದ ಮಾರ್ಜಿನ್ ನಲ್ಲಿ ಇಂಗ್ಲಿಷಿನಲ್ಲಿ ಕೆಂಪು ಮಸಿಯಲ್ಲಿ Good ಎಂದು ಬರೆದವರು. ಅದು ನನಗೆ ದೊರೆತ ಮೊದಲ ಮೆಚ್ಚುಗೆ. ಮುಂದೆ ಬೇರೆ ಬೇರೆ ಪಾಠಗಳಲ್ಲೂ ಗುಡ್-ವೆರಿಗುಡ್ ಗಳ ಪರಿಚಯ ಆಗಾಗ್ಗೆ ಆಯಿತೆನ್ನಿ.

ಸುಳ್ಯಕ್ಕೊಂದು ನಾಟಕ ಕಂಪನಿ ಬಂತು; 1937ರಲ್ಲಿ. ಆ ಜನ ಬಸ್ ನಿಲ್ದಾಣದ ಬಳಿ ತಟಿಕೆಯ, ಮುಳಿಯ ಮಾಡಿನ ರಂಗಮಂದಿರ ರಚಿಸಿದರು. ಕರಪತ್ರಗಳು ಪುತ್ತೂರಿನಲ್ಲಿ ಅಚ್ಚಾಗಿ ಬರುತ್ತಿದ್ಧುವು. ಕಂಪನಿ ಒಂದೆರಡು ತಿಂಗಳು ಅಲ್ಲಿತ್ತೆಂದು ತೋರುತ್ತದೆ. ಟಿಕೆಟು ಕೊಳ್ಳಲು ಕಾಸಿರದಿದ್ದ ದಿನಗಳು. ಆದರೂ ಒಂದೆರಡು ನಾಟಕ ನೋಡಿದೆ. ನೆನಪು ಗಾಢವಾಗಿರುವ ನಾಟಕ 'ಭಕ್ತ ಕಬೀರ'.

ಕಂಪನಿ ಬೇರೆ ಊರಿಗೆ ಹೋದಮೇಲೂ ರಂಗಮಂದಿರವನ್ನು ಕೆಡವಿರಲಿಲ್ಲ. ಸುಳ್ಯದಲ್ಲಿ ಆಗ ಆಫೀಸರರ ಕ್ಲಬ್ ಇತ್ತು. ಸದಸ್ಯವರ್ಗ, ಸಬ್ ರಿಜಿಸ್ಟ್ರಾರ್, ಪೊಲೀಸ್ ಸಬ್ಇನ್ಸ್ ಪೆಕ್ಟರ್ ಅಥವಾ ರೈಟರ್, ಸರಕಾರೀ ಆಸ್ಪತ್ರೆಯ ಡಾಕ್ಟರು, ಮಣೆಗಾರರು ಮತ್ತಿತರರು; ಜಮೀನ್ದಾರರೊಬ್ಬರು; ಅವರಿಗೆ ಸರಿಗಟ್ಟಬಲ್ಲ ನಮ್ಮ ಶಾಲೆಯ ಅಧ್ಯಾಪಕವರ್ಗ. ಇವರೆಲ್ಲ ಸುಳ್ಯದ ಶಿಷ್ಟಜನ. ಒಬ್ಬರಿಗೆ ಹಾರ್ಮೋನಿಯಂ ನುಡಿಸಲು ಬರುತ್ತಿತ್ತು. ಯಾರು ಬೀಜ ಬಿತ್ತಿದರೊ? ತೆರಳಿದ್ದ-ಕಂಪನಿಯ ಪರಾಗಸ್ಪರ್ಶವಾಗಿತ್ತೇನೊ! ಅಂತೂ ಈ ಶಿಷ್ಟರು ನಾಟಕ ಆಡಲು ಹೊರಟರು. ಸ್ವಲ್ಪ ಕಾಲ ಬ್ಯಾಡ್ಮಿಂಟನ್ ನ ವೇಳೆಯನ್ನು ನಾಟಕದ ರಂಗತಾಲೀಮು ಆಕ್ರಮಿಸಿತು.

ಆ ವರ್ಷದ ಆರಂಭದಲ್ಲಿ ನನಗೆ ಯು. ಎಸ್. ಪಣಿಯಾಡಿಯವರ 'ತುಳುನಾಡ್' ಮಾಸಪತ್ರಿಕೆಯ ಪರಿಚಯವಾಗಿತ್ತು. ಎಂ. ವಿ. ಹೆಗ್ಡೆಯವರ ಕವಿತೆಗಳು ಆ ಪತ್ರಿಕೆಯಲ್ಲಿ ನನಗೆ ಮುಖ್ಯ ಆಕರ್ಷಣೆ. ವ್ಯಾವಹಾರಿಕ ತುಳುವಿನಲ್ಲಿ ನಾನೂ ಕವಿತೆ ರಚಿಸಿದೆ. ಕತೆ, ಕಿರುನಾಟಕ ಬರೆದೆ. ಅವೆಲ್ಲ ಅಚ್ಚಾದುವು.

ಸುಳ್ಯದ ಶಿಷ್ಟರು ಆಡಿದ ನಾಟಕಗಳಲ್ಲಿ ಮುಖ್ಯವಾದುವು: 'ಒಂದೇ ಗುಟುಕು' ಮತ್ತು 'ಮೇವಾಡದ ಪತನ.' ಇವೆರಡನ್ನೂ ಒಂದನ್ನು ಮರಾಠಿಯಿಂದ, ಇನ್ನೊಂದನ್ನು ಹಿಂದಿಯಿಂದ ಕನ್ನಡಕ್ಕೆ ತಂದರು ಬಿ. ಕೆ. ರಾಮಕೃಷ್ಣ. ಒಂದು ದಿನ ರಂಗತಾಲೀಮು ನಡೆಯುತ್ತಿದ್ದಾಗ ಡ್ರಾಯಿಂಗ್ ಮಾಸ್ಟರು ಸುಬ್ಬಣ್ಣನವರು ನನ್ನನ್ನು ಕರೆದು, "ಇಲ್ಲಿ ನಡೆಯುತ್ತಿರುವ ರಿಹರ್ಸಲನ್ನು ಚಿತ್ರಿಸಿ ಒಂದು ನಾಟಕ ಬರಿ ನೋಡುವ,” ಎಂದರು. ನನ್ನ ತುಳುಸಾಹಸ ಆಗ ಅಲ್ಲಿ ಎಲ್ಲರಿಗೂ ಗೊತ್ತಿದ್ದ ಸಂಗತಿ. ಹೆಸರು ಅವರೇ ಹೇಳಿದರು. 'ನಾಟಕವೆಂಬ ನಾಟಕ' ನಾಲ್ವತ್ತು ಪುಟಗಳ ಒಂದು ನೋಟ್ ಬುಕ್ ಪುಡಿ ಮಾಡಿದೆ. ಸುಬ್ಬಣ್ಣ ಮಾಸ್ಟರು ನಾನು ಬರೆದದ್ದನ್ನು ಓದಿದರು. ಏನೂ ಹೇಳಲಿಲ್ಲ. ಆ ಹಸ್ತಪ್ರತಿ ನನ್ನಲ್ಲಿಲ್ಲ. ಅವರಲ್ಲೇ ಉಳಿಯಿತೊ? ಗೊತ್ತಿಲ್ಲ.

'ಮೇವಾಡ ಪತನ' ನಾಟಕಕ್ಕೆ ನನ್ನನ್ನು ಸೆಳೆದರು. ಹದಿನಾಲ್ಕರ ಶಿವ ಸುಳ್ಯದಲ್ಲಿ 'ಸುದ್ದಿ' ಯಾದ. ಮೊಘಲ್ ಸಮ್ರಾಜ್ಞೆ, ಉದಯಪುರಿಯ ಪಾರ್ಟು. ಧ್ವನಿ ಒಡೆದಿತ್ತು. ಆದರೆ ಬೆಳವಣಿಗೆಯಲ್ಲಿ ಎತ್ತರವನ್ನು ಸಾಧಿಸಿರಲಿಲ್ಲ, ಸಾಲುಗಳನ್ನು ಗಟ್ಟಿಮಾಡಿದೆ. ಅಭಿನಯ ಕೇಳಬೇಡಿ. ಅಕ್ಬರ್ ಪಾತ್ರಧಾರಿ ಸುಮಾರು ಆರಡಿ ಎತ್ತರದ ಎಂ. ಮಿರಾಸಾಹೇಬರು. ಊರಿನ ಜಮೀನ್ದಾರರು.1

ಅಕ್ಬರ್: "ಉದಯಪುರೀ...."

ಉದಯಪುರಿ: (ಪಲ್ಲಂಗದ ಮೇಲಿಂದ ತಲೆಎತ್ತಿ ಸಾಮ್ರಾಟನ ಎತ್ತರವನ್ನು ನೋಡುತ್ತ)

"ಜಹಾಪನಾ!"

ಕಂಪನಿ ಮಂದಿರವನ್ನು ಕೆಡಹುವುದಕ್ಕೆ ಮುಂಚೆ ನಡೆದ ಕಾರ್ಯಕ್ರಮದಲ್ಲಿ


1 ಅವರ ಹೆಸರು ಮರೆತಿದ್ದೆ. ಈ ಲೇಖನದ ರೂಪುರೇಷೆ ಸ್ಪಷ್ಟವಾದೊಡನೆ, ಸುಳ್ಯದ ಪ್ರಮುಖ ವರ್ತಕ- ಬಾಲ್ಯದಲ್ಲಿ ನನ್ನ ಸಹಪಾಠಿ- ಕೆ. ಮಹಮ್ಮದ್ ಹಾಜಿ ಅವರಿಗೆ ಬರೆದೆ. ಮರುಟಪಾಲಲ್ಲೆ ಅಕ್ಬರ್ ಪಾತ್ರ ವಹಿಸಿದ ಮಹಾನುಭಾವರ ಹೆಸರು ತಿಳಿಸಿದರು. ಮೀರಾ ಸಾಹೇಬರ ಬೇಗಂ ಒಂದು ದಿನ ಶಾಲೆಗೆ ಹೋಗುತ್ತಿದ್ದ ನನ್ನನು ಕರೆಸಿ ತಿಂಡಿ ಕೊಟ್ಟಿದ್ಧರು. ಅವರ ಮಗ ಶಬೀರ್ ಇನ್ನೊಂದು ದಿನ ಮರದಿಂದ ಮಾವಿನ ಹಣ್ಣು ಕಿತ್ತುಕೊಟ್ಟಿದ್ದ. ಈಗ ಶಬೀರ್ ಸಾಹೇಬರು ಮಂಗಳೂರಿನಲ್ಲಿರುವರಂತೆ. ಒಂದು ಕಿರುನಾಟಕವೂ ಇತ್ತು. “ನಾಲ್ಕನೆಯ ಪಿಶಾಚಿ."1 ಇಲ್ಲಿ ನಾನು ರಾಣಿಯಲ್ಲ, ನಾಲ್ಕು ಮಕ್ಕಳ ತಾಯಿ. ಫರಂಗಿರೋಗದ ತಂದೆಗೆ ಹುಟ್ಟುವ 'ಶನಿಸಂತಾನ' ಇವು. ನಾನು ಅಮ್ಮ. ಮುಖ್ಯೋಪಾಧ್ಯಾಯರು ಅಪ್ಪ. ನಾಟಕ ಈಟಿಯಂತೆ ತಿವಿಯಬೇಕು; ಜನ ಎಚ್ಚರಗೊಳ್ಳಬೇಕು ಎಂದು ರಾಮಪ್ಪಯ್ಯನವರು ಬಯಸಿದಂತೆ ತೋರುತ್ತದೆ. ಅಭಿನಯಿಸಿದ ವೇಳೆಯಲ್ಲಿ ನನಗೆ ಅದು ಪೂರ್ತಿಯಾಗಿ ಅರ್ಥವಾಗಿರಲಿಲ್ಲ.

೧೯೩೭ರ ಮೇ ಅಂತ್ಯದಲ್ಲೋ ಜೂನ್ ಆರಂಭದಲ್ಲೋ ಕನ್ನಡದಲ್ಲಿ ನನ್ನ ಮೊದಲ ಸಣ್ಣಕತೆ ಬರೆದೆ. ನಮ್ಮ ಶಾಲೆಗೆ ಮಂಗಳೂರಿನಿಂದ 'ರಾಷ್ಟ್ರಬಂಧು' ವಾರಪತ್ರಿಕೆ ಬರುತ್ತಿತ್ತು. ಎರಡನೆಯ ಪುಟದಲ್ಲಿ ವಾರದ ಕತೆ ಇರುತ್ತಿತ್ತು. ಅಲ್ಲಿಗೆ ನನ್ನದನ್ನು ಕಳಿಸಿದೆ. ಪ್ರಾಧ್ಯಾಪಕ-ಸಾಹಿತಿ ಸಂಪಾದಕ ಕಡೆಂಗೋಡ್ಲು ಶಂಕರ ಭಟ್ಟರು'ಕಿಶೋರ'ನ ಕತೆಗೆ ಪಾಸ್ ಮಾರ್ಕ್ ಕೊಟ್ಟರು. ಜುಲೈ ೫ರ ಸಂಚಿಕೆಯಲ್ಲಿ ಅದು ಪ್ರಕಟವಾಗಿಯೇ ಬಿಟ್ಟಿತು.... ನನಗೆ ಕತೆಗಾರನ ಪಾತ್ರ ಇನ್ನು.

ಊರಿನ ಕ್ಲಬ್ಬಿನಲ್ಲಿ ಒಂದು ವಿದಾಯಕೂಟ ಏರ್ಪಟ್ಟಿತು. ಸುಳ್ಯದ ಜನಪ್ರಿಯ ಡಾಕ್ಟರಿಗೆ ವರ್ಗವಾಗಿತ್ತು. ಆ ಸಮಾರಂಭದ ಒಂದು ಮೂಲೆಯಲ್ಲಿ ನಾನು ಕುಳಿತಿದ್ದೆ. ನಾಲ್ಕು ಸಾಲುಗಳ ಸುದ್ದಿಯನ್ನು 'ರಾಷ್ಟ್ರಬ೦ಧು'ವಿಗೆ ದಾಟಿಸಿದೆ. ಅಚ್ಚಾಯಿತು. ಸುಳ್ಯದ ಶಿಷ್ಟರಿಗೆ ಸಂತೋಷ. ಪತ್ರಿಕೆಗಳಿಗೆ ಸುಳ್ಳು ಸುದ್ದಿ ಕಳುಹಿಸಿ, ಪ್ರಕಟವಾದಾಗ ಸುದ್ದಿಗೆ ಗುರಿಯಾದವರು


1 ಬಣ್ಣದ ಬಯಲು ಪೀಠಿಕೆ ಬರೆಯುವ ಸಿಧ್ಧತೆಯಲ್ಲಿದ್ದಾಗ ಮಿತ್ರರಾದ ಎಸ್. ಎಸ್. ಶಿವಸ್ವಾಮಿ ಬಂದರು. ದೇಶದ ಸಮೂಹಮಾಧ್ಯಮ ಕ್ಷೇತ್ರದಲ್ಲಿ (ಆಕಾಶವಾಣಿ, ದೂರದರ್ಶನ) ಹಿರಿಯ ಹುದ್ದೆಯಲ್ಲಿದ್ದು ನಿವೃತ್ತರಾದವರು. ಬರೆಹ, ಭಾಷಣಗಳಲ್ಲಿ ಈಗ ನಿರತರು. ಹಿರಿಯ ಲೇಖಕರೂ ಮಿತ್ರರೂ ಆಗಿದ್ದ ಪಡುಕೋಣೆ ರಮಾನಂದ ರಾಯರು ತಮ್ಮ ಗೆಳೆಯನ 'ನಾಲ್ಕನೆಯ ಪಿಶಾಚಿ' ನಾಟಕವನ್ನು The Fourth Spectre ಎಂದು ಇಂಗ್ಲಿಷಿಗೆ ಭಾಷಾಂತರಿಸಿ, ಶಿವಸ್ವಾಮಿಯವರಿಗೆ ಕೊಟ್ಟರಂತೆ. ಸ್ವಾತಂತ್ರ್ಯೋತ್ತರ ಕಾಲಾವಧಿ. ಅವರು ಮೂಲವನ್ನೂ ಅನುವಾದವನ್ನೂ ದಿಲ್ಲಿಗೆ ಕಳೆಸಿದರಂತೆ. ಪ್ರತಿಕ್ರಿಯೆ ಬರಲಿಲ್ಲ. ಪಡುವ ಕಷ್ಟ ಕಂಡು, ಖುಷಿಪಡುವವರೂ ಆಗ ಇದ್ದರು. ಅಂಥ ಕಪಟಿಯ ಪರಿಚಯವೂ ನನಗೆ ಬೇಗನೆ ಆಯಿತು. ಮುಖ್ಯೋಪಾಧ್ಯಾಯರ ಮನಸ್ಸನ್ನೇ ಆತ ನೋಯಿಸಿದ್ದ.... ಸುದ್ದಿಗಾರನ ಪಾತ್ರವನ್ನೂ ಎಚ್ಚರಿಕೆಯಿಂದ ಅಭಿನಯಿಸತೊಡಗಿದೆ.

ಆಗ ಶಾಲೆಯಲ್ಲಿ ತಿಂಗಳ ಹಬ್ಬ ನಡೆಯುತ್ತಿತ್ತು. ಒಮ್ಮೆ ಅಧ್ಯಾಪಕರು "ಈ ಸಲ ನೀನು ಅಧ್ಯಕ್ಷನಾಗು" ಎಂದರು. ಹೊಸ ಪಾತ್ರ. ಎಲ್ಲ ವಿಧ್ಯಾರ್ಥಿಗಳದೇ ಕಾರಭಾರು. ಹಾಡು, ಕಥೆ, ಭಾಷಣ ಎಲ್ಲವೂ. ಅಧ್ಯಕ್ಷನಾದ ಮಾತ್ರಕ್ಕೆ ನನ್ನದೇ ಕಾರ್ಯಕ್ರಮ ಇರಬಾರದೆಂಬ ನಿಯಮವಿರಲಿಲ್ಲ. ಸ್ವಿಜರ್ಲೆಂಡಿನ ದೇಶಪ್ರೇಮಿ ವಿಲಿಯಂಟೆಲ್ ನ ಕತೆಯನ್ನು ಆಯ್ಧುಕೊಂಡೆ. ಒಬ್ಬ ಕಿರಿಯ ಹುಡುಗನಿಗೆ ಟೆಲ್ ನ ಪಾತ್ರಕೊಟ್ಟು (ಕತ್ತರಿಸಿ, ಮತ್ತೆ ನಯವಾಗಿ ಜೋಡಿಸಿದ ನಿಂಬೆಹಣ್ಣು ಅವನ ತಲೆಯಮೇಲೆ. ಅದಕ್ಕೆ ಕಟ್ಟಿದ ನೂಲು ನೇಪಥ್ಯದಲ್ಲಿ ಕಣ್ಮರೆ.) ನಾನೇ ಟೆಲ್. ಸಾಭಿನಯ ಕಥನ. (ದೃಶ್ಯ-ಶ್ರಾವ್ಯ ಎರಡೂ.) "ಬಾಣಬಿಟ್ಟು, ನಿನ್ನ ಮಗನ ತಲೆಯ ಮೇಲಿನ ಹಣ್ಣನ್ನು ಎರಡು ಹೋಳು ಮಾಡು! ಇಲ್ಲವಾದರೆ-!" ವೈರಿಭೂಪನ ಗರ್ಜನೆ. ಆ ಮಾತು ಹೇಳಿ ಮತ್ತೆ ದೇಶಪ್ರೇಮಿ ಟೆಲ್ ಆಗಿ, ಹೆದೆ ಏರಿಸಿ ಬಾಣಬಿಟ್ಟೆ, ಮರೆಯಲ್ಲಿದ್ದವನು ನೂಲು ಎಳೆದ. ನಿಂಬೆ ಹಣ್ಣಿನ ಎರಡು ಹೋಳುಗಳು ಉರುಳಿದುವು! (ಕರತಾಡನ)

ಹೈಸ್ಕೂಲು ಅಧ್ಯಯನಕ್ಕೆಂದು, ನೀಲೇಶ್ವರಕ್ಕೆ ಹೋದೆ ೧೯೩೮ರ ಬೇಸಗೆಯಲ್ಲಿ. ಪುತ್ತೂರು ಕಾಸರಗೋಡು ತಾಲೂಕುಗಳಿಂದ ಕನ್ನಡ ಹುಡುಗರು ಅಧ್ಯಯನಕ್ಕಾಗಿ ಅಲ್ಲಿಗೆ ಬರುತ್ತಿದ್ದರು. ಮಲಯಾಳಿಗಳು ಸಮಾನ ಪ್ರಮಾಣದಲ್ಲಿದ್ದರು. ಅಲ್ಲಿನವರು, ಸುತ್ತುಮುತ್ತಲಿನವರು. ಇಬ್ಬರ ನಡುವೆ ಸಂಪರ್ಕಭಾಷೆ, ಇಂಗ್ಲಿಷ್. ಆ ಸಲದ (೧೯೩೯) ವಾರ್ಷಿಕೋತ್ಸವದಲ್ಲಿ ಮದರಾಸಿನ ಯಾರೋ (ಚೆಟ್ಟೂರ್?) ಬರೆದ ಇಂಗ್ಲಿಷ್ ನಾಟಕವನ್ನು ಅಭಿನಯಕ್ಕೆ ಗೊತ್ತುಮಾಡಿದ್ದರು. (ಹೆಸರು ಮರೆತಿದ್ದೇನೆ.)ನಾನು ನಾಯಕಿ. ಹಿರಿಯ ಅಧಿಕಾರಿಯ ಪತ್ನಿ ಅಲಮೇಲು. ವಕ್ಷಸ್ಥಲ?

ತೆಂಗಿನ ಎರಡು ಹೋಳುಗಳ ಚಿಪ್ಫು. ಬಿಗಿದು ಹಿಡಿಯಲು ಬ್ರಾ,ಸಿ‍ಕ್ಸ್ತ್ ಫಾರ್ಮ್‍ನ ಹಿರಿಯ ಹುಡುಗಿಯೊಬ್ಬಳು (ಯಾರ ಮೂಲಕವೊ) ಎರವಲು ಕೊಟ್ಟದ್ದು.

ಶಾಲೆಯಲ್ಲೂ ಹೊರಗೂ ವಾಗ್ಮಿಯ ಪಾತ್ರ. ಸಾಮ್ರಾಜ್ಯಶಾಹಿಯ

ವಿರುದ್ಧ ಆವೇಶದ ಭಾಷಣಗಳು. ಭಾಷಣ ಸ್ಪರ್ಧೆಯಲ್ಲಿ-ಲೇಖನ ಸ್ಪರ್ಧೆ ಯಲ್ಲೂ ಪ್ರತಿವರ್ಷ ಬಹುಮಾನಗಳು. ಆಗೊಮ್ಮೆ ಈಗೊಮ್ಮೆ ಕಥಕ್ಕೆಳಿ ನೋಡುತ್ತಿದ್ದೆ ಇಷ್ಟಪಟ್ಟು. ಬಣ್ಣ ಬಳೆದ ಮುಖ. ಬಯಲಿನಲ್ಲಿ ಕುಳಿತೆವರು ಬೆರಗಾಗಬೇಕು. ಮುಷ್ಟಿಕಟ್ಟಿ ಭಾಷ್ಪಣ ಮಾಡುವ ಕಲೆ ಸಮನಲ್ಲವೆ ಕಥಕ್ಕಳಿಗೆ ಮುಖವಾಡದ ಬದುಕು. ಒಳಗೂ ಹೊರಗೂ ಒಂದೇ ಆದರೆ ಚಂದ. ಬೇರೆಬೇರೆ ಆದರೆ?

ಕನ್ನಡನೆಲದಲ್ಲಿ ಗಾಂಧಿ-ನೆಹರು ನಾಯಕರು. ದಕ್ಷಿಣಕ್ಕೆ, ಅಗೋಚರ ನಾಯಕರಿದ್ದರು:ಮಾರ್ಕ್ಸ್,ಲೆನಿನ್,ಸ್ಟಾಲಿನ್. ಅಹಿಂಸೆ,ಕರುಣೆ,ಅನುಕ೦ಪ ಗಳ ಜತೆ ಬೆರೆಯಿತು ತೀವ್ರಗಾಮಿತ್ವ. (ನಾಟಕದಲ್ಲಿ ಮುಖ್ಯ ರಸಗಳು ಎಷ್ಟು?)

ಹೈಸ್ಕೂಲು ಮುಗಿಸಿದವನು.೧೯೪೧ರ ಮೇ ಮೊದಲದಿನದಿಂದಲೇ ಮಂಗಳೂರಿನ ನಾಗರಿಕನಾದೆ. 'ರಾಷ್ಟ್ರಬಂಧು' ಸೇರಿದೆ, ಪತ್ರಿಕೋದ್ಯೋಗಿ ಯಾದೆ.

ನಾಟಕಲೋಕದಲ್ಲಿ ನನ್ನ ವಿಲಿವಿಲಿಗೆ ಸಂಬಂಧಿಸಿ ೧೯೪೩ ಗಮನಾರ್ಹ ವರ್ಷ. ಆ ವರ್ಷದ ಮೇ ತಿಂಗಳಲ್ಲಿ ಅಖಿಲ ಭಾರತ ಪ್ರಗತಿಶೀಲ ಲೇಖಕರ ಸಮ್ಮೇಳನ ಮುಂಬಯಿಯಲ್ಲಿ ಜರಗಿತು. ಭಾಗವಹಿಸಲೆಂದು ಮಂಗಳೂರಿ ನಿಂದ ಆ ಮಹಾನಗರಕ್ಕೆ ತೆರಳಿದೆ. ಧಾರವಾಡದಿಂದ ಶ್ರೀರಂಗರು ಬಂದಿದ್ದರು, ಜತೆಗೆ ಮುಂಬಯಿ ನಿವಾಸಿಗಳಾದ ಶ್ರೀರಂಗ ಮಿತ್ರರಿದ್ದರು-ಕೃಷ್ಣಕುಮಾರ ಕಲ್ಲೂರ ಮತು ಎಚ್. ಎಸ್. ಪಾಟೀಲ. ಇನ್ನೊಂದು ಸಮ್ಮೇಳನದಲ್ಲೂ ನಾನು ಭಾಗವಹಿಸಿ IPTA (ಇಪ್ಪಾ)ಅಸ್ತಿತ್ವಕ್ಕೆ ಬಂದುದನ್ನು ಕಂಡೆ.ಏನು ಪೀಪ್ ಲ್ಸ್ ಥಿಯೇಟರಿನ ಉದ್ದೇಶ? ಪ್ರಗತಿಶೀಲ ಸಾಹಿತಿಗಳಿಗೂ ಅದಕ್ಕೂ ಏನು ಸಂಬಂಧ? ಉತ್ತರಗಳು 'ಬಣ್ಣದ ಬಯಲು' ಲೇಖನಕ್ಕೆ ಪೂರಕ ವಾಗಿರುವ ಇನ್ನೊ೦ದು ಪುಟ್ಟ ಲೇಖನದಲ್ಲಿ ಅಡಕಗೊಂಡಿವೆ.ಓದಿ ನೋಡು ವಿರಂತೆ.

ಒಂದು ಮಾತು ಮೊದಲೇ ಹೇಳಿಬಿಡುವುದು ಮೇಲು. ಮೇಲೆ ಪ್ರಸ್ಥಾಫಿತವಾದ ಎರಡು ಸಂಘಟನೆಗಳಿಗೂ ಆ ಕಾಲದ ಏಕ ಕಮ್ಯೂನಿಸ್ಟ್ ಪಕ್ಷವೇ ಪ್ರೇರಕಶಕ್ತಿಯಾಗಿತ್ತು. ಆ ವೇಳೆಗೆ ನಾನು ಕಮೂನಿಸ್ಟ್ ಸೇರಿದ್ದೆನೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ?

ಮಂಗಳೂರು ನನ್ನ ಕಾರ್ಯರಂಗ. ಪ್ರಗತಿಶೀಲ ಲೇಖಕರ ಸಂಘಕ್ಕೂ ಜನತಾರಂಗಭೂಮಿ ಸಮಿತಿಗೂ ನಾನೇ ಕಾರ್ಯದರ್ಶಿ. ಮೊದಲಿನದಕ್ಕೆ ಕೆ.ಕೆ.ಶೆಟ್ಟರು ಅಧ್ಯಕ್ಷರು; ಎರಡನೆಯದರ ಅಧ್ಯಕ್ಷರು ತಲಚೇರಿ ರ೦ಗ ರಾಯರು.ಜನತಾರಂಗಭೂಮಿಯ ಉದ್ಘಾಟನೆಯಲ್ಲಿದ್ದದು ಬರೇ ಭಾಷಣ ಗళు ಮಾತ್ರ!

ಜಪಾನಿನಲ್ಲಿ ಎರಡು ವಿಶಿಷ್ಟ ನಾಟಕ ಶೈಲಿಗಳಿವೆ: 'ನೊ' ಮತ್ತು 'ಕಬುಕಿ'. ನನ್ನ ಮೊದಲ ಯತ್ನ NO ಆಯಿತು! ಹೀಗೆ ಕಾಳಸಂತೆಯವ ರನ್ನು ಹೀಗಳೆಯುವ ಅಭಿನಯಕ್ಕೆ ಒಂದು ಗಂಟೆ ಬೇಕಾಗುವ ನಾಟಕ ರಚಿಸಿದೆ.ಅನುಮತಿ ನೀಡುವವರು ಜಿಲ್ಲಾ,ಪೋಲೀಸ್ ಸೂಪರಿ೦ಟೆ೦ಡೆ೦ಟರು. ಕಾಗದ ಬರೆದೆ. ಮೂರನೆಯ ದಿನ ಪೋಲೀಸ್ ಸಬ್ಇನ್ಸ್ಪೆಕ್ಟರ್ ಒಬ್ಬರು ಸನ್ಯಾಸಿಗುಡ್ಡೆ ರಸ್ತೆಗೆ ಬಂದರು. ಸೈಕಲಿನಲ್ಲಿ. ರಸ್ತೆಗೆ ತಗಲಿಕೊಂಡೇ ನನ್ನ ಕಿಟಿಕಿ. ಸೈಕಲಿನಿಂದಿಳಿದು, ಅತ್ತ ಬಂದು, ಕೇಳಿದರು:

"ಇಲ್ಲಿ ಪೀಪ್‍ಲ್ಸ್ ಥೀಯೇಟರ್ ಎಲ್ಲಿದೆ?"

“ಥಯೇಟರ್‍ಗೆ ಕಟ್ಟಡ ಇಲ್ಲ. ಸಮಿತಿ ಮಾತ್ರ. ನಾನು ಕಾರ್ಯದರ್ಶಿ," ಎಂದೆ.

"ನಿಮ್ಮ ನಾಟಕದ, ಹಸ್ತಪ್ರತಿ ಬ೦ದಿದೆ. ಡಿ.ಎಸ್.ಪಿ.ಬರ ಹೇಳಿ ಧಾರೆ. ಚರ್ಚ್ಚಿಗೆ ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಬನ್ನಿ.”

"ಸರಿ."

ಮಾರನೆ ದಿನ ಬ೦ತು.

ಡಿ.ಎಸ್.ಪಿ. ಆಫೀಸಿಗೆ ಹೋಗುವ ಕಡೆ ಬಲಬದಿಯಲ್ಲಿ ಲಾಕಪ್ಪು. ಒಳಗಿದ್ದರು ಕೇಶವ ಕಾಮತ್. ಮಜೂರ ನಾಯಕ. ಅತ್ತ ಇತ್ತ. ಹುಲಿ ಹೆಜ್ಜೆ ಇಡುತ್ತಿದ್ದವರು ನನ್ನನ್ನು ನೋಡಿ ನಕ್ಕರು.

ಅಧಿಕಾರಿಯೊಂದಿಗೆ ವ್ಯರ್ಥ ಚರ್ಚೆ.

ಡಿ.ಎಸ್.ಪಿ. ವಿಚಾರಣೆಗೆ ಮುಂಚೆಯೇ ತೀರ್ಪುಕೊಟ್ಟರು:"ಇಂಥ ನಾಟಕ ಆಡಬಾರದು. No!"

ಹೊರಟು ಬ೦ದೆ.ಹಸ್ತಪ್ರತಿ ಅಲ್ಲಿಯೇ ಉಳಿಯಿತೊ,ತ೦ದೆನೊ, ನೆನಪಿಲ್ಲ.ನಿಮಗೆ ತೋರಿಸಲು ಆ 'ನೋ' ನಾಟಕ ಇಲ್ಲವಲ್ಲ ಎಂದು ಬೇಸರ. ಹರಿದು ಎಸೆದಿರಬಹುದು. ಬೇಡದ್ದನ್ನು ತಕ್ಷಣ ಹರಿದುಬಿಡುವುದು ಮೊದಲಿನಿಂದಲೂ ನನಗಿದ್ದ ಚಾಳಿ.(ಆ ಚಾಳಿಯಿಂದ ಮುಕ್ತನಾಗಲು ಈಗ ಪ್ರಯತ್ನಿಸುತ್ತಿದ್ದೇನೆ. ಆದರೆ, ತಡವಾಗಿ ಬಂದ ಬುದ್ಧಿಯಿಂದ ಪ್ರಯೋಜನ ಕಡವೆು.)

ವಿವಿಧ ವಿನೋದಾವಳಿಗೆ ಪೋಲೀಸ್ ಕಣ್ಯಾಪು ಬೇಡವಲ್ಲ? ಕೆನರಾ ಹೈಸ್ಕೂಲಿನಲ್ಲಿ ಕಾರ್ಯಕ್ರಮ ಇಟ್ಟುಕೊಂಡೆವು. ಸಪ್ಪೆಯಾಯಿತು.

ಆಗ ಬಂತು ಮುಂಬಯಿಯಿಂದ ಒಂದು ನಾಟಕದ ಬೆರಳಚ್ಚು ಪ್ರತಿ. ಶೀರ್ಷಿಕೆ: 'ಅಮೃತ್'. ಬರೆದವರು ಖ್ವಾಜಾ ಅಹಮದ್ ಅಬ್ಸಾಸ್. ಭಾಷೆ ಇಂಗ್ಲಿಷ್ವಿ.ವಿಡಂಬನಾತ್ಮಕ ಕೃತಿ. No? or Yes? ಅನುವಾದಿಸುವುದಕ್ಕೆ ಮುಂಚೆ ಮೊದಲು ಇದರ ತೀರ್ಮಾನವಾಗಲಿ ಎಂದು,ಡಿ.ಎಸ್.ಪಿ.ಯವರಿಗೆ 'ಅಮೃತ್' ಕೊಟ್ಟೆ. ಅವರು ಜಿಲ್ಲಾ ಕಲೆಕ್ಟರಿಗೆ ರವಾನಿಸಿದರು. ಕರಮತುಲ್ಲಾ,ಐ.ಸಿ.ಎಸ್.

ಬುಲಾವ್. ಸಂಜೆ ಹೊತು ಹೋದೆ ವಸತಿ-ಕಾರ್ಯಾಲಯ ಎರಡೂ ಇದ್ದಕಟ್ಟಡಕ್ಕೆ. ಅಬ್ಬಾಸರ ನಾಟಕವನ್ನು ಓದಿ ಮುಗಿಸಿದ್ದರು, ಏನು ನಯ! ಏನು ವಿನಯ! ನಮ್ಮ ಮಾತುಕತೆ ನಡೆಯುತ್ತಿದಾಗ, ಬೇಗಂ ಸಾಹೇಬರೂ ಎಲ್ಲಿಂದಲೋ ಇಣಿಕಿ ನೋಡಿದರು.

“ನಾಟಕ ಸಾರಸ್ಯಕರ. ಆದರೆ-"

ಅವರ ಮುಖ ನೋದಿದೆ.ಮು೦ದುವರಿಸಿದರು

"ಜಾನ್‍ಬುಲ್ ಪಾತ್ರ ಮಾತ್ರ ಬೇಡ. ಅದನ್ನು ತೆಗೆದು ಹಾಕಿ

ಅನುಮತಿ ಕೊಡೋಣ."

ನಾಟಕ ಸೀಳು ಬಿಟ್ಟಂತೆ ಆಗ್ತದಲ್ಲ?"

"Sorry Mr. Rao. ಸ್ಟೇಜ್ ಮೇಲೆ ಜಾನ್ಬುಲ್ ಚಿತ್ರಣ

ಸಲ್ಲದು....”

ಗಣಪತಿ ಹೈಸ್ಕೂಲಿನಲ್ಲಿ ಬುಲ್ ಇಲ್ಲದೆಯೇ 'ಅಮೃತ್' 1 ಆಡಿದೆವು. ಆ

ವರ್ಷ ಬಿಜಾಪುರದ ಬರಗಾಲದ ವೇಳೆ ಶ್ರೀರಂಗರು ಬರೆದಿದ್ದ'ಬೀದಿಯ ಭೂತ' ಏಕಾಂಕವನ್ನೂ ಅಭಿನಯಿಸಿದೆವು. ಯಶಸ್ಸು ಲಭಿಸಿತು. ಸಂಘಟಕನಾದವನು ಹೊರಗೆ ಓಡಾಡಬೇಕೇ ಹೊರತು ಸ್ವತಃ ಬಣ್ಣ ಅಂಟಿಸಿಕೊಳ್ಳಬಾರದೆಂಬು ದನ್ನು ಆದಿನ ಕಲಿತೆ.

ಕಲಿತದ್ದನ್ನು. ಕೃತಿಗಿಳಿಸಲು ಅವಕಾಶ ದೊರೆತದ್ದು ೧೯೪೪ರಲ್ಲಿ

"ನಾವೂ ಮನುಷ್ಯರು!” ನಾಟಕವನ್ನು ಮಂಗಳೂರು ಮೈದಾನದಲ್ಲಿ ಬಯಲು ನಾಟಕವಾಗಿ ಆಡಿದಾಗ.

ಈ ಪುಸ್ತಕದ ಹೂರಣವೇ 'ನಾವೂ ಮನುಷ್ಯರು!'ನೀವು ಓದುವುದಕ್ಕೆ

ಮುನ್ನ ಅದರ ಪೃಥಕ್ಕರಣ, ಮೌಲ್ಯಮಾಪನ ಇತ್ಯಾದಿ ನಾನು ಮಾಡ ಬಾರದು.

೧೯೪೪ರ ನವೆಂಬರ್ ೭ ರಂದು 'ನಾವೂ ಮನುಷ್ಯರು!' ನಾಟಕದ

ಪ್ರಥಮ ಪ್ರದರ್ಶನ, ಮಂಗಳೂರು ಮೈದಾನಿನಲ್ಲಿ, ಮೇಜುಗಳ ಮೇಲೆ ಮೇಜುಗಳನ್ನಿರಿಸಿ ನಿರ್ಮಿಸಿದ ರಂಗಸ್ಥಲ, ಬಿದಿರು ಊರಿ ಮಾಡಿದ

1 ಕನ್ನಡದಲ್ಲಿ'ಅಮೃತ' ಚೌಕಟ್ಟು. ಹಿನ್ನೆಲೆಯಲ್ಲಿ ಬಿಳಿಬಟ್ಟೆ, ಬೇರೆ ಪರದೆಗಳಿಲ್ಲ. ಪೆಟ್ರೊಮ್ಯಾಕ್ಸ್ ದೀಪಗಳು,ಎದುರು ಹೊಸ ಅನುಭವಕ್ಕಾಗಿ ಕಾದಿದ್ದ ಐದು ಸಹಸ್ರಕ್ಕೂ

ಹೆಚ್ಚು ಜನ.

ನಾಟಕ ಅಭಿನಯಿಸಲು ಪೋಲೀಸರ ಅನುಮತ್ತಿ ಕೇಳಿರಲಿಲ್ಲ.ಅವರೂ ನನ್ನನ್ನು ಸಮೀಪಿಸಿರಲಿಲ್ಲ;ಅಕ್ಟೋಬರ್ ಕ್ರಾ೦ತಿಯ ದಿನವಲ್ಲವೆ ಆವತ್ತು? ನಡೆಯುತ್ತಿದ್ದ ವುಹಾಯುದ್ಧದಲ್ಲಿ ಫಾಸಿಸಮಿನ ಶವದ್ದಾನಿಗೆ ಮೊಳೆ ಹೊಡೆಯುತ್ತಿದ್ದ ಬಲಿಫ್ಟದೇಶವಲ್ಲವೆ ರಷ್ಯ?

ಕಮೂನಿಸ್ಟ್ ಪಕ್ಷದಿಂದ ನಾನು `ದೂರಸರಿದು ಮೂವತ್ತೈದು ವರ್ಷ ಸಂದಿವೆ. ಆದರೂ ನನ್ನ 'ಕೆಂಪು ದಿನಗಳ ನೆನಪು ಮಾಸಿಲ್ಲ.ಇಷ್ಟ ವಾದದ್ದು ಅಪ್ರಿಯವಾದದು ಎರಡೂ ಇವೆ ಆ ಮೂಟೆಯಲ್ಲಿ.ನನಗೆ ತೃಪ್ತಿ ನೀಡಿದ ಒಂದು ಘಟನೆ: 'ನಾವೂ ಮನುಷ್ಯರು!'2' ಬಯಲು ನಾಟಕದ ಪ್ರದರ್ಶನ.

ಹಲವು ಕಾರ್ಮಿಕ ಸಂಘಟನೆಗಳೂ ಕಮ್ಯೂನಿಸ್ಟ್ ಪಕ್ಷವೂ ಒಂದಾಗಿ

ಏರ್ಪಡಿಸಿದ್ದ ಕಾರ್ಯ್ದುಕ್ರಮ್ಮ. ಭಾಷಣಗಳ ಸುರಿಮಳೆ ಆದಮೇಲೆ ಜನತಾ ರಂಗಭೂಮಿ ಹೊಣೆ ಹೊತ್ತಿದ್ದ ನಾಟಕ, ವಿವಿಧ ವಿನೋದ. ಕ್ಲಾರ್ಮಿಕ


1. ಆಕ್ಟೋಬರ್ ಕ್ರಾ೦ತಿ,-ನವೆಂಬರ್'ನಲ್ಲಿ ಆಚರಣೆಇದೇನು ಎನ್ನುವಿರಾ? ತ್ಸಾರ್ ಆಳ್ವಿಕೆಯಲ್ಲಿ ರಷ್ಯದಲ್ಲಿ ಬಳಕೆಯಲ್ಲಿದ್ದ ಕ್ಯಾಲೆ೦ಡರಿನ ಪ್ರಕಾರ ಸಮಾಜ ವಾದ ಕ್ರಾ೦ತಿ ಆರ೦ಭವಾದದ್ದು ಅಕ್ಟೋಬರ್ ೨೫ರ೦ದು.ಈಗಿನ ಕ್ಯಾಲೆ೦ಡರ್ ಪ್ರಕಾರ ಆಧು ನವೆಂಬರ್ ೭ ಆಗುತ್ತದೆ, ಹೀಗಾಗಿ ಅಕ್ಟೋಬರ್ ಕ್ರಾ೦ತಿ ಯೆಂಬ ಹೆಸರು ಹೊತ್ತಿದ್ದರೂ ಅದರ ಆಚರಣೆ ನವೆಂಬರ್ನಲ್ಲಿ.

2. 'ನಾವೂ ಮನುಷ್ಯರು!' ನಾಟಕದ ಮೊದಲ ಪ್ರದರ್ಶನದಲ್ಲಿ ಪಾತ್ರ ವಹಿಸಿದ ವರು- ೧. ಸಿರಿಪ್ಸನ್ ಸೋನ್ಸ್ (ದಕ್ಷಿಣ ಕನ್ನಡದಲ್ಲಿ ನೇಕಾರರನ್ನು ಸ೦ಘಟಿಸಿದ ಆದ್ಯರು) ೨ . ಎ. ಬಾಬು ೩ , ರಾಮ ಬಲಾಯ ೪ . ಘಾಟಿ ಬಾಬು ೫ . ಬಿ.ರಾಮಪ್ಪ (ಇವರೆಲ್ಲ ನೇಕಾರರು) ೬ .ಶ್ರೀಪತಿ ಭಟ್ ೭ :ಮ. ಕ. ಶೀನಪ್ಪ (ಪ್ರೆಸ್ ಕಾರ್ಮಿಕರು) .ಈ ಪೈಕಿ ರಾಮ ಬಲ್ಮಾಯ , ಘಾಟಿ ಬಾಬು ಮತ್ತು ಮ. ಕ. ಶೀನಪ್ಪ ಮೃತಪಟ್ಟಿದ್ದಾರೆ. ಎಂ . ಬ್ಲಾಬು ಮತ್ತು ಶ್ರೀಪತಿ ಭಟ್ ಬೊಂಬಾಯಿಯಲ್ಲಿದ್ದಾರೆ . ಈಯೆಲ್ಲ ಮಾಹಿತಿಗಾಗಿ ಶ್ರೀ ಸೋನ್ಸರಿಗೆ

ಕೃತಜ್ನ - ನಿರ೦ಜನ.. ‌‌‌xvi/ ನಾವೂ ಮನುಷ್ಯರು!

ಬಂಧುಗಳೇ ಪಾತ್ರಧಾರಿಗಳು. ಇದ್ದೂ ಇರದ ಮೇಕಪ್. ಎಲ್ಲಾ ನೈಜತೆಗೆ ಹತ್ತಿರ. ಕಾಲೇಜು ವಿದ್ಯಾರ್ಥಿಗಳಾದ ಆರೂರು ಪಟ್ಟಾಭಿ-ಕುಪ್ಳುಚಾರ್ ರಾಮಕೃಷ್ಣ ಭಟ್ಟರಿಂದ ನೃತ್ಯ.

ಮೂರು ನಾಲ್ಕು ತಿಂಗಳ ಬಳಿಕ ಬೆಂಗಳೂರಿಗೆ ಹೊರಟೆ, ಪತ್ರಿ

ಕೋದ್ಯಮದ 'ದೊಡ್ಡಾಟ'ದಲ್ಲಿ ಭಾಗವಹಿಸಲು. 'ನಾವೂ ಮನುಷ್ಯರು'! ಹಸ್ತಪ್ರತಿ ನನ್ನ ಜತೆ ಪ್ರಯಾಣ ಬೆಳೆಸಿತು. ಬೆಂಗಳೂರಿನ ಪುಟ್ಟದೊಂದು ಮಾಸಪತ್ರಿಕೆ ಅದನ್ನು ಪ್ರಕಟಿಸಿ ಹಸ್ತಪ್ರತಿ ಹಿಂತಿರುಗಿಸಿತು. ಇಲ್ಲಿ ಸ್ವಚ್ಛ ನಕಲಿಗಾಗಿ ಬಳಸಿರುವುದು ಅದನ್ನೇ.

ನಾನಾ ಸಾಹಸ ದುಸ್ಸಾಹಸಗಳ ಬಳಿಕ ೧೯೫೧ರಲ್ಲಿ ಬೆಂಗಳೂರಲ್ಲಿ

ಮತ್ತೆ ಕಾಣಿಸಿಕೊಂಡೆ, ಪ್ರಕಾಶಕನಾಗಿ. ನಿರಂಜನ ಮತ್ತು ನನ್ನ ಮುಂಬಯಿ ಸ್ನೇಹಿತ ವಾಸುದೇವ ಜತೆ ಸಂಪಾದಕರು. ಹೊರತಂದ ಪ್ರಕಟಣೆಗಳಲ್ಲಿ (ಪುರೋಗಾಮಿ ಪ್ರಕಾಶನ) ಒಂದು-'ಕವಿಪು೦ಗವ' ನಾಟಕ. ತೆಲುಗಿನ ಅತ್ರೇಯ ಬರೆದದ್ದು, ವಾಸುದೇವರು ಕನ್ನಡಿಸಿದ್ದು. ೧೯೫೨ರಲ್ಲಿ ಅದನ್ನು ಓದಿದ ಅ. ನ. ಸುಬ್ಬರಾಯರು-'ಕೂಲಿ'-ನಾಟಕ ಬರೆದವರು-"ಆಡೋಣ" ಎಂದರು. ಅವರ ಮನೆಯ ಕಿರಿಯರು ಮತ್ತು ನಾನು ನಟ-ನಟಿಯರು. (ಹುಡುಗ ಸ್ತ್ರೀಪಾತ್ರ ಮಾಡುವ ಕಾಲ ಕಳೆದಿತ್ತು!) ಗುಬ್ಬಿ ವೀರಣ್ಣನವರ ಗಾಂಧಿನಗರದ ರಂಗಮಂದಿರದಲ್ಲಿ ಒಂದು ದೇಖಾವೆ. ಬಳಿಕ ಮೈಸೂರಿನ ಪುರಭವನದಲ್ಲೊಮ್ಮೆ. ನನ್ನದು ಕಾರ್ಮಿಕ ಧುರೀಣನ ಪಾತ್ರ. ನನಗೆ ದೊರೆ ತದ್ದು ಕಳಪೆ ಅಂಕ. ಅದೇ ಕೊನೆಯದು. ಈ ವರೆಗೂ ಯಾವ ನಾಟಕ ದಲ್ಲೂ ಮತ್ತೆ ಆಭಿನಯಿಸಿಲ್ಲ.

ಮಿತ್ರ ಚದುರಂಗರನ್ನು ಒಮ್ಮೆ ಮೈಸೂರಿನಲ್ಲಿ ಕಂಡಾಗ."ಶಿವಸ್ವಾಮಿ

ಯವರನ್ನು ನೋಡಿ ಬರೋಣವಾ?" ಎಂದರು. ಆಗ ಮೈಸೂರು ಆಕಾಶ ವಾಣೆಯ ಅಧಿಕಾರಿಯಾಗಿದ್ದರು ಎಸ್.ಎನ್.ಶಿವಸ್ವಾಮಿ.ಇಬ್ಬರೂ ಅವರ

ಮನೆಗೆ ಹೋದೆವು. ಶಿವಸ್ವಾಮಿ ಸ್ನೇಹಪರ. ಆದರೆ ಸೂಕ್ಷ್ಮಗ್ರಾಹಿ. 

ಬಣ್ಣದ ಬಯలు | xvii

ಜವಾಬುದಾರಿ ಹೊತ್ತವ್ಯಕ್ತಿ ಮೈಯೆಲ್ಲ ಕಣ್ಣಾಗಿರಬೇಕು. ನನ್ನ ಹಿಂದಿತ್ತು ಭಿನ್ನವೂ ಉಗ್ರವೂ ಆದ ಬದುಕಿನ ಛಾಯೆ. ಬಾನುಲಿ ನಾಟಕದ ಪ್ರಸ್ತಾಪ ಅವರು ಮಾಡಲಿಲ್ಲ. "ಪ್ರಸಾರಕ್ಕಾಗಿ ಒಂದು ಕತೆ ಬರೆಯಿರಿ," ಎಂದು ಹೇಳ ಲಿಲ್ಲ. ಚದುರಂಗ ಯಾವ ಸೂಚನೆಯನ್ನೂ ನನಗೆ ಕೊಟ್ಟಿರಲಿಲ್ಲವಾದ್ದರಿಂದ, ಬೇಸರದ ಪ್ರಶ್ನೆ ಇರಲಿಲ್ಲ.

೧೯೫೫ರಲ್ಲಿ ಕಾದಂಬರಿಕಾರ ನಿರಂಜನ ಮೈಸೂರಿನಲ್ಲಿ ಮನೆಮಾಡಿದ.

ಪ್ರದೇಶ ವಾಣಿವಿಲಾಸ ಮೊಹಲ್ಲಾ. ಅಲ್ಲಿ ಎಡವಿದರೆ ಸಾಕು, ಆಕಾಶವಾಣಿ ಯವರೋ ವಿಶ್ವವಿದ್ಯಾಲಯದವರೋ ಸಿಗುತ್ತಿದ್ದರು. ಇತ್ತ ಕವಿ ಇಟಗಿ ರಾಘವೇಂದ್ರ (ಆಕಾಶವಾಣಿಯ ಕಾರ್ಯಕ್ರಮ ಸಹಾಯಕರು): ಅತ್ತ ಶಿವಸ್ವಾಮಿ. ಸಣ್ಣ ಜಗತು. ಆಕಾಶವಾಣಿಗಾಗಿ ಕೆಲ ಪುಸ್ತಕಗಳನ್ನು ವಿಮರ್ಶೆ ಮಾಡಿದೆ. ನಿಮ್ಮ 'ರಂಗಮ್ಮನ ವಠಾರ' ಕಾದಂಬರಿಯನ್ನು ನಾಟಕ ರೂಪದಲ್ಲಿ ಬರೆದುಕೊಡಿ, ಆರು ಭಾಗಗಳಲ್ಲಿ" -ಎಂದರು ಶಿವಸ್ವಾಮಿ. ನಾಟಕ! ಬಾಗಿಲಲ್ಲಿ ಹೋದದ್ದು ಕಿಟಿಕಿಯಿಂದ ಬಂದಿತ್ತು!

ಮೈಸೂರು ಆಕಾಶವಾಣಿ ಬೆಂಗಳೂರಿಗೆ ಸ್ಟಳಾಂತರಗೊಂಡಿತು.

ರೂಪುಗೊಳ್ಳುತ್ತಿದ್ದ ಕರ್ನಾಟಕದ ರಾಜಧಾನಿಯ ಹೊಸನಿಲಯ. "ಇದು ಆಕಾಶವಾಣಿ, ಬೆಂಗಳೂರು.” ಅದರ ಉದ್ಘಾಟನೆಯ ಘಳಿಗೆಯಲ್ಲಿ 'ಪಾವನ ಪರಂಪರೆ' ಎಂಬ ನುಡಿಚಿತ್ರ ಬೇಂದ್ರೆ ಬರೆದದ್ದು. ರಾಜರತ್ನಂ, ನಿರಂಜನ; ಎಲ್.ಜಿ. ಸುಮಿತ್ರಾ....ಧ್ವನಿಗಳು (ಪಾತ್ರಗಳು). ಆಹ್ವಾನಿತ ಶ್ರೋತೃಗಳ ಎದುರಲ್ಲಿ ಕಾರ್ಯಕ್ರಮ ನಡೆಯಿತು. ರೂಪಕ ಪ್ರಸಾರ ಒಂದು ಬಗೆಯ ಧ್ವನಿ ಅಭಿನಯ.ಮುಂದೆ ಆ ನಿಲಯಕ್ಕೆ ಶ್ರೀರಂಗ, ವಿ.ಸೀ., ಕಸ್ತೂರಿ ಪ್ರೊಡ್ಯೂಸರುಗಳಾಗಿ ಬಂದರು.

ನಾನು ಸಕುಟುಂಬನಾಗಿ ಧಾರವಾಡಕ್ಕೆ ಸಾಗಿದೆ. ಬೆಂಗಳೂರು

ನಿಲಯಕ್ಕಾಗಿ ಭದ್ರಾವತಿ ಉಕ್ಕಿನ. ಕಾರಖಾನೆಯನ್ನು ಕುರಿತು ಒಂದು ರೂಪಕ-ನುಡಿಚಿತ್ರ-ಬರೆಯಲು ಓಡಾಡಿದೆ."ಮಣ್ಣು ಉಕ್ಕಾಯಿತು; ಕಾಡು ಊರಾಯಿತು!"ನನ್ನದೇ ನಿರ್ವಹಣೆ. ದಕ್ಷಿಣದ ನಾಲ್ಕು ಆಡು ಭಾಷೆಗಳಲ್ಲಿ ಪ್ರಸಾರವಾಯಿತು. ಧಾರವಾಡದಲ್ಲಿದ್ದಾಗ ರಂಗಸ್ಟಲದಲ್ಲಿ ಆಡುವ ಮತ್ತು xviii / ನಾವೂ ಮನುಷ್ಯರು!

ಜತೆಯಲ್ಲೆ ಪ್ರಸಾರ ಮಾಡುವ ಉದ್ದೇಶಕ್ಕಾಗಿ ಬೆಂಗಳೂರು ನಿಲಯ ಒಂದು ನಾಟಕ ಕೇಳಿತು. 'ಸಂಗಮಸ್ನಾನ' ಬರೆದೆ. ನಿಲಯ ನಿರ್ದೇಶಕ ಡಾ! ನಟೇಶರ ದ್ವಿಉದ್ದೇಶ ಯೋಜನೆ ದಿಲ್ಲಿಯ ಟೀಕೆಗೊಳಗಾಗಿ, 'ಸಂಗಮಸ್ನಾನ' ಪ್ರಸಾರವಷ್ಟೇ ಆಯಿತು. (ರಂಗನಾಟಕ ಬೇರೆ, ಪ್ರಸಾರ ನಾಟಕ ಬೇರೆ ಎಂಬುದು ನನ್ನ ಅಭಿಪ್ರಾಯವೂ ಆಗಿತ್ತು.) ಧಾರವಾಡ ನಿಲಯಕ್ಕಾಗಿ ನಾನು ಬರೆದ ಪ್ರಸಾರನಾಟಕಗಳು: 'ಅನುರಾಗ', 'ಸೂತ್ರಕಿತ್ತಪಟ' 'ಕಣ್ಣಿದ್ದವರಿಗೂ ನೀನೆ ಶಿವಾ' ಮತ್ತು ನಿಲಯ ನಿರ್ದೇಶಕ ಮಧುರಕಾಂತ ವೈದ್ಯರ ಅಧಿಕಾರಾ ವಧಿಯಲ್ಲಿ, ನೆರೆಹೊರೆಯಲ್ಲಿದ್ದ ಭಾಸ್ಕರ ಯೇಸುಪ್ರಿಯರ ಸ್ನೇಹದ ಬಲವಂತಕ್ಕೆ ಒಪ್ಪಿ, ವೈದ್ಯರ ಅಪೇಕ್ಷೆಯಂತೆ ರಚಿಸಿದ ಆರು ಭಾಗಗಳ ನಾಟಕ ಮಾಲಿಕೆ 'ಆಹ್ವಾನ'.

ಬೆಂಗಳೂರಿಗೆ ಮರಳಿದೆ. ಬದುಕಿನ ಅಲೆದಾಟದ ಕೊನೆಯ ತಾಣ.

ಅಂಕಣಗಳನ್ನೂ ಕಾದಂಬರಿಗಳನ್ನೂ ಹೊಸೆಯುವ ಕೆಲಸ. ಜತೆಯಲ್ಲಿ ಆಕಾಶವಾಣಿಗಾಗಿ ಮೂರು ಮೊಳದ ಅರೆ ಬಟ್ಟೆಗಳು. ಚೀನದೊಡನೆ ಘರ್ಷಣೆ ಸಂಭವಿಸಿದಾಗ ಬರೆದ ನಾಟಕಗಳು. 'ಬಂದ ದಾರಿಗೆ ಸುಂಕವಿಲ್ಲ' ಮತ್ತು 'ಪಾಪಾಸುಕಳ್ಳಿ' ಮುಂದೆ, ಮೊದಲಿನದನ್ನು 'ಸಮ್ರಾಜ್ಞಿ'ಎಂಬ ತಲೆಕಟ್ಟಿನಲ್ಲಿ ರಂಗನಾಟಕವಾಗಿ ಬರೆದೆ.'ಪಠ್ಯ ನಾಟಕ' ಎಂದರೂ ಸಂದೀತು. ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗೆ ಅದು ಉಪಪಠ್ಯವಾಗಿ, ಮನೆಸಾಲ ತೀರಿಸಲು ಅಗತ್ಯವಿದ್ದ ಹಣ ದೊರೆಯಿತು.

ಪ್ರಸಾರಕ್ಕೆಂದೇ ಬರೆದ ರೂಪಕಗಳು ಇನ್ನೂ ನಾಲ್ಕಾರಿವೆ. ಹೆಸರುಗಳ

ಪಟ್ಟಿ ಕೊಟ್ಟರೇನು? ಬಿಟ್ಟರೇನು?

ಈಗ ದೂರದರ್ಶನ ಬಂದಿದೆ.೧೯೭೧ರಲ್ಲಿ ಪಾರ್ಶ್ವಪೀಡಿತನಾದ ಮೇಲೆ

ನಾಟಕ ನೋಡುವ ಸುಖದಿಂದ ವಂಚಿತನಾದವನಿಗೆ ಈಗ ತುಸು ಸಮಾಧಾನ. ಸಮುದಾಯ ತಂಡ, ಬೀದಿ ನಾಟಕದ ಬಂಧುಗಳು, ಹವ್ಯಾಸೀ ನಟವೃಂದ, ಇತರ ರಂಗಭೂಮಿ ಪ್ರಯೋಗಗಳನ್ನು ಕಾಣಲಾರೆನಾದರೂ ದೂರದರ್ಶನ ದಲ್ಲಿ ಬರುವ ನಾಟಕ, ಯಕ್ಷಗಾನ ನೋಡಿ, ಬಯಲನ್ನೂ ಅಗೋಚರ ಪ್ರೇಕ್ಷಕಗಣವನ್ನೂ ಕಲ್ಪಿಸಿಕೊಳ್ಳುತ್ತೇನೆ. ಬಣ್ಣಮೆತ್ತಿದ ನಾಟಕಗಳೂ ಬರತೊಡಗಿದೆ ಈಗ.  ಬಣ್ಣದ బಯలు | xix

ನನ್ನ ಪಾಲಿಗೆ ನಾಟಕ ಬರೆಯುವ ಕನಸು ಹಳೆಯದು. ಅದಿನ್ನೂ

ಹಸುರಾಗಿದೆಯಲ್ಲ. ಆಶ್ಚರ್ಯ!


* * *


ಇನ್ನೊಂದು ಲೇಖನವನ್ನು ಓದಿದಿರೆಂದರೆ, 'ನಾವೂ ಮನುಷ್ಯರು!'

ನಾಟಕದ ಪ್ರೇಕ್ಷಕ ಮಹಾಶಯರಾಗುತ್ತೀರಿ ನೀವು.

'ಭಾರತ್ತೀಯ ಜನತಾ ರಂಗಭೂಮಿ ಮತ್ತು ಪ್ರಗತಿಶೀಲ ಲೇಖಕರು'

ಎಂಬ ಲೇಖನವನ್ನು ನಾನು ಬರೆದದ್ದು ೧೯೪೪ರಲ್ಲಿ.'ನಾವೂ ಮನುಷ್ಯರು!' ರಚನೆಗೆ ಕೆಲದಿನ ಮುಂಚೆ ಇರಬೇಕು. ಜನತಾ ರಂಗಭೂಮಿ ದೇಶದ ನಾಟಕ ಕ್ಷೇತ್ರದಲ್ಲಿ ಆಗ ಮೂಡಿಬಂದ ಹೊಸ ಅಲೆ.

ಮುಂಬಯಿಯಲ್ಲಿ 'ಇಪ್ವಾ' ಈಗಲೂ ಜೀವಂತವಾಗಿದೆ. ಬೇರೆಡೆ

ಗಳಲ್ಲಿ ಅದು ಬೇರೆ ಬೇರೆ ರೂಪ ತಳೆದಿದೆ. ನಾಟಕ ಜನತೆಗೆ, ಬದುಕಿಗೆ ಹತ್ತಿರವಾಗಿರಬೇಕೆಂದು ಬಯಸುವವರಿಗೆಲ್ಲ ಜನತಾರಂಗಭೂಮಿ ಅನಿವಾರ್ಯ ವಾಗಿ ಗಮನಿಸಲೇಬೇಕಾದ ಅಧ್ಯಾಯ.

ಪ್ರವರ ಸಾಕುಮಾಡಲೆ? ಆಗಲೇ ಹೇಳಿದಂತೆ, ಲೇಖನ ಓದಿದ ಮೇಲೆ,

“ನಾವೂ , ಮನುಷ್ಯರು!" ಎಂದು ಪ್ರತಿಪಾದಿಸುವ ಪಾತ್ರಗಳನ್ನು ಭೇಟಿ ಯಾಗುತ್ತೀರಿ. ನಮಸ್ಕಾರ.


೭-೧೦-೧೯೮೫

ಬೆಂಗಳೂರು

ನಿರಂಜನ

  1. ಕಾರಂತರ ಸ್ಮೃತಿಪಟಲದಲ್ಲಿ' ಕೃತಿಯ ಮೊದಲ ಭಾಗದಲ್ಲಿ ನನ್ನ ಪ್ರಸ್ತಾಪವಿದೆಯೆಂದು ಸಾಹಿತ್ಯ ಮಿತ್ರದ್ವಯರು ನಾಲ್ಕು ವರ್ಷ ಹಿಂದೆ ಹೇಳಿದರು. ಆ ಮೊದಲಭಾಗ ಪುಸ್ತಕದಂಗಡಿಯಿಂದ ಖರೀದಿ ಮಾಡಿದ್ದು ಮನೆಯಲ್ಲಿತ್ತು. ಓದಿರಲಿಲ್ಲ. ಮಿತ್ರರ ಎದುರಲ್ಲೇ ಪುಸ್ತಕ ತರಿಸಿದೆ. ತೆರೆದು ಪುಟ ಪತ್ತೆ ಹಚ್ಚಲು ಅವರು ನೆರವಾದರು. ಅಲ್ಲಿತ್ತು ಈ ಕೆಳಗಿನ ವಾಕ್ಯಃ
    "ಸುಳ್ಯ - ಮಕ್ಕಳ ಕೂಟದಲ್ಲಿ ಸೇರಿಕೊಂಡ ಕುಳಕುಂದೆ ಶಿವರಾಯನೆಂಬಾತ ಇಂದು ನಿರಂಜನನಾಗಿ ಕರ್ನಾಟಕದಲ್ಲಿ ಹೆಸರಾಗಿದ್ದಾನೆ.”
    ನಾನೆಂದೆ: “ತಮ್ಮ ಪ್ರತಿಷ್ಟೆ ಮೆರೆಸಲು ನನ್ನ ಹೆಸರನ್ನು ಕಾರಂತರು ಬಳಸಬೇಕಾಗಿರಲಿಲ್ಲ."
    ಕಾರಂತರ ನಿಜವಾದ ಆರಾಧಕರಾಗಿದ್ದು ಜೀವತೇದು ತೀರಿಕೊಂಡ ನನ್ನ ಹೆಡ್ ಮಾಸ್ಟರು ರಾಮಪ್ಪಯ್ಯನವರ ಹೆಸರು ಪುಸ್ತಕದಲ್ಲಿ ಇಲ್ಲದಿರುವುದು ಗಮನಾರ್ಹ.(ತಮ್ಮಸ್ವತಂತ್ರ ಭಾರತದ ಕನಸು ನೆನಸಾಗುವುದಕ್ಕೆ ತುಸು ಮುನ್ನ ಪುತ್ತೂರಿನಲ್ಲೇ ಅವರು ತೀರಿಕೊಂಡರು.ವಯಸ್ಸಾಗುವುದಕ್ಕೆ ಮುಂಚೆಯೇ.)