ಪುಟ:ಅಜಿತ ಕುಮಾರ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಜಿತ ಕುಮಾರ.

೪೭

ಹಾರವನ್ನು ಮಾಡಬೇಕೆಂದಿರುವನು” ಎಂದೆಣಿಸಿ, ಮೃದುವಾದ ಸ್ವರದಿಂದ “ಮಗು, ಸ್ವಸ್ಥವಾಗಿ ಹಿಂದಕ್ಕೆ ಹೋಗು, ನಿನ್ನಂಥ ವೀರರು ಸಾಯುವುದೆಂದರೆ ಬಹು ದುಃಖಕರ " ಎಂದು ಹೇಳಿದನು.

ಆದರೆ ಅಜಿತನು' ಇಲ್ಲ. ಹಿಂದಕ್ಕೆ ಹೋಗಲಾರೆ. ಆ ಪುರುಷಾ ಮೃಗವನ್ನು ಕಂಡ ವಿನಾ ಹಿಂದಿರುಗುವುದಿಲ್ಲ. ನಾನು ಆಣೆ ಹಾಕಿಕೊಂಡಿದ್ದೇನೆ” ಎಂದನು.

ಆಗ ಶತಬಲಿಯು “ಹಾಗಾದರೆ ಅದನ್ನು ನೋಡುವೆಯಂತೆ,” ಎಂದು ಹೇಳಿ, ಪಹರೆಯವರಿಗೆ “ಈ ಹುಚ್ಚನನ್ನು ಆಚೆಗೆ ತೆಗೆದುಕೊಂಡು ಹೋಗಿ!” ಎಂದು ಆಜ್ಞಾಪಿಸಿದನು. ಕೂಡಲೆ ಅಜಿತನನ್ನೂ ಉಳಿದ ಬಂದಿವಾನರನ್ನೂ ಸೆರೆಮನೆಗೆ ತೆಗೆದುಕೊಂಡು ಹೋದರು.

ಶತಬಲಿಗೆ ಅರಿಂದಮೆ ಎಂಬೊಬ್ಬಳು ಮಗಳಿದ್ದಳು. ಆಕೆಯು ತನ್ನ ಹಾಲುಗಲ್ಲಿನ ಅರಮನೆಯ ಉಪ್ಪರಿಗೆ ಮೇಲಿಂದ ಅಜಿತನನ್ನು ನೋಡಿ ಆತನ ಧೈರ್ಯಕ್ಕೂ ಆಕಾರಕ್ಕೂ ಮೆಚ್ಚಿ, “ಇಂಥ ಯುವಕನು ಸಾಯುವುದು ಬಲು ದುಃಖಕರ” ಎಂದು ಅಂದುಕೊಂಡಳು. ಅದರೊಂದಿಗೆ ಆತನಲ್ಲಿ ಆಕೆಗೆ ಪ್ರೀತಿಯೂ ಹುಟ್ಟಿತು. ಆದುದರಿಂದ ರಾತ್ರಿಯಾಗುತ್ತಲೇ ಸೆರೆಮನೆಗೆ ಹೋಗಿ ಆತನೊಡನೆ ತನ್ನ ಮನಸ್ಸನ್ನು ಬಿಚ್ಚಿ ಹೇಳಿದಳು.

"ಈಗಲೆ ನಿನ್ನ ಹಡಗಿಗೆ ಓಡಿಹೋಗು, ಬಾಗಿಲ ಬಳಿಯ ಪಹರೆಯವರು ತಡೆಯಲೊಲ್ಲರು, ಅವರಿಗೆ ಲಂಚ ಕೊಟ್ಟಿರುತ್ತೇನೆ, ನೀನೂ, ನಿನ್ನ ಸ್ನೇಹಿತರೂ, ಎಲ್ಲ ರೂ ಓಡಿಹೋಗಿರಿ, ನನ್ನನ್ನು ಕೂಡ ಕರೆದುಕೊಂಡು ಹೋಗು ; ನಿನ್ನನ್ನು ಬಿಟ್ಟಿರಲಾರೆ. ಈ ಗುಟ್ಟು ರಟ್ಟಾದರೆ, ನನ್ನ ತಂದೆ ನನ್ನನ್ನು ಕೊಂದುಬಿಟ್ಟಾನು ” ಎಂದು ಹೇಳಿದಳು.

ಅಜಿತನು ಆಕೆಯ ಚೆಲುವನ್ನು ಕಂಡು ಮನಸೋತು, ಹಾಗೆ ಯೋಚಿಸಿ, “ಪುರುಷಾಮೃಗವನ್ನು ಕೊಂದು ನಮ್ಮ ದೇಶದವರಿಗಿರುವ