ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಭೇದಾ

ತಾಯಿತಂದಿಗಳಿಗೆ ಇಬ್ಬರು ಮಕ್ಕಳು. ಗಂಡೊಂದು ಹೆಣ್ಣೊಂದು.

ಜಂಗಮನೊಬ್ಬ ಭಿಕ್ಷಾಕ್ಕ ಬಂದ—"ನಿಮ್ಮ ಮಗಳೀಗಿ ಸಾಡೇ ಸಾತಿ ಆದ. ಅದ್ರಿಂದ ನಿಮಗೂ ಸುಖ ಇಲ್ಲ. ಅವಳಿಗೂ ಸುಖ ಇಲ್ಲ. ಆಕೀಗಿ ದೂರಮಾಡಬೇಕು. ಅಂದರ ಯಾರಿಗೂ ದುಃಖ ಇಲ್ಲ" ಎಂದು ಹೇಳಿದ.

ಮಗಳಿಗೆ ದೂರಮಾಡಲು ತಾಯಿಯ ಮನಸ್ಸು ಒಪ್ಪಲಿಲ್ಲ. ಅದಕ್ಕಾಗಿ ತಾಯಿತಂದೀನೇ ಹನ್ನೆರಡು ವರುಷದವರೆಗೆ ದೂರ ಹೋದರು. ಮನೆಯಾಗ ಮಗಳೊಬ್ಬಳೇ ಉಳಿದಳು. ನಿತ್ಯ ದೇವರ ಪೂಜಿಮಾಡಬೇಕು, ಭಜನಿ ಕೀರ್ತನಿ ಮಾಡಬೇಕು—ಹೀಗೆ ದಿನ ಕಳೆದಳು. ಜಂಗಮ ಮನಿಯಾಗೇ ಉಳಿದ. ಅವನೀಗಿ ದಿನಾ ಊಟಕ್ಕ ಮಾಡಿ ನೀಡಬೇಕು. ಬಳಿಕ ಭಜನೀ ಮಾಡಕೋತ ಖೋಲ್ಯಾಗ ಒಬ್ಬಳೇ ಕೂಡಲಿಕ್ಕೆ ಹತ್ತಿದಳು. "ಏನು ದಿನಾ ಭಜನೀ ಹಚ್ಚೀದಿ"

ಎಂದು ಜ೦ಗಮ ಕಿಟಿ ಕಿಟಿ ಕೊಡಲಿಕ್ಕೆ ಹತ್ತಿದ. ಒಂದು ದಿನ ಅವಳ ಮೈಮ್ಯಾಗ ಏರಿಹೋದಾಗ ಆಕಿ ಖೋಲ್ಯಾಗ ಕುಂತವಳು ಬಾಗಿಲ ಹಾಕೊಂಡು ಕುಂತೇ ಬಿಟ್ಟಳು. ಎಷ್ಟು ಬಾಗಿಲ ಬಡಿದರೂ ತಗೀಲೇ ಇಲ್ಲ. ನೀರುಬೇಡ, ನಿಡಿಬೇಡ ಎಂದು ಕೂತುಬಿಟ್ಟಳು. ಜಂಗಮ ಅವಳ ತಾಯಿತಂದಿಗೊಳಿಗೆ ಪತ್ರಬರೆದು ತಿಳಿಸಿದ—ಅಭೇದಾಳ ನೀತಿ ಸರಿಯಾಗಿಲ್ಲೆಂದು.

ತಂಗೀಗಿ ಹೋಗಿ ಕಡಿದು ಬಾ ಎಂದು ಅವ್ವ-ಅಪ್ಪ ಮಗನೀಗಿ ಕಳಿಸಿದರು. ಅಭೇದಾ ಎಂದು ಬಾಗಿಲ ಮುಂದ ನಿಂತು ಒದರಿದ. ಅಣ್ಣ ಬಂದಾನೆಂದು ತಿಳಿದು ಬಾಗಿಲು ತೆಗೆದು ಹೊರಗೆ ಬಂದಳು. "ತಾಯಿಗೆ ಜಡ್ಡಾಗಿ ಮಲಗಿದ್ದಾಳೆಂದು" ಸವಿ ಮಾತು ಹೇಳಿ ಕರಕೊಂಡು ಹೊಂಟು ಅಡವ್ಯಾಗ ತಲವಾರ ತೆಗೆದು ಹೊಡೆದರೂ ಅಭೇದಾಳಿಗೆ ತಗುಲಲಿಲ್ಲ. ಗುಂಡಿನಿಂದ ಹೊಡೆದರೂ ಬಡೀಲಿಲ್ಲ. ತಂಗ್ಯಾ ನಿನಗೆ ನನ್ನಿಂದ ಹೊಡೆಯುವದಾಗೂದಿಲ್ಲ. ನಿನಗೆ ಜೀವದಾನ ಮಾಡುತೀನು ಎ೦ದು ಹೇಳಿ, ಆಕೀಗಿ ಒಂದು ಆಲದ ಗಿಡದ ಕೆಳಗೆ ಬಿಟ್ಟು ಹೊಂಟುಹೋದ. ಅಭೇದಾ ಮಾತ್ರ ಆಲದಗಿಡದ ತೊಪ್ಪಲ ತಿಂದು ಇರಲಿಕ್ಕೆ ಹತ್ತಿದಳು. ಮೈ ಮ್ಯಾಗಿನ ಬಟ್ಟೆಯೆಲ್ಲಾ ಚೂರಾಗಿ