ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಲಿನ ಚಿಂತೆ

ಚಳಿಗಾಲದ ಒಂದು ಮುಂಬೆಳಗಿನಲ್ಲಿ ಶಿವಪಾರ್ವತಿಯರು ಜೊತೆಯಾಗಿ ಕೈಲಾಸದಿಂದ ಹೊರಬಿದ್ದರು. ಅಡ್ಡಾಡಿಕೊಂಡು ಬರುವುದೇ ಅವರ ಉದ್ದೇಶವಾಗಿತ್ತು. ಹಿಮಾಲಂಹದ ಬೆಟ್ಟಗಳನ್ನಿಳಿದು ಸಾನು ಪ್ರದೇಶಕ್ಕೆ ಬಂದರು. ಅಲ್ಲಲ್ಲಿ ಒಕ್ಕಲಿಗರ ವಸತಿಗಳು ಕಾಣಿಸತೊಡಗಿದವು. ಅವೆಷ್ಟೋ ಹೊಲಗಳಲ್ಲಿ ಒಲೆಗುಣಿಯ ಉರಿಯು ಎದ್ದು ಕಾಣಿಸಿತು. ಹಕ್ಕಿ ಪಕ್ಷಿಗಳ ಉಲುಹು ಇನ್ನೂ ಕುಗ್ಗಿಯೇ ಇತ್ತು. ಆ ಎಲ್ಲ ದೃಶ್ಯಗಳನ್ನು ಕಂಡು ಆನಂದಿಸುತ್ತ ಸಾಗಿದ್ದರು ಆ ದೇವದಂಪತಿಗಳು.

"ಅಗೋ ನೋಡಿರಿ. ಆ ಹೊಲದವನು ಹೇಗೆ ಮಲಗಿದ್ದಾನೆ ಮುದುಡೆಂಾಗಿ. ಮೈಮೇಲೆ ಹೊದೆದುಕೊಂಡ ಕಂಬಳಿ ಸವೆದು ಹಿ೦ಜಾಳಿಯಾಗಿದೆ. ಅಂಥ ಹರಕು ಕೋರಿಯಿಂದ ಚಳಿಯ ಬಾಧೆ ಹೇಗೆ ಪರಿಹಾರವಾದೀತು? ಪಾಪ ಎಂದು ಬೊಟ್ಟು ಮಾಡಿ ಶಿವನಿಗೆ ಮಲಗಿಕೊಂಡವನ ದೃಶ್ಯವನ್ನು ಪಾರ್ವತಿ ತೋರಿಸಿದಳು. ಆ ಮಾತಿಗೆ ಶಿವನು ನಸುನಕ್ಕು ಕನಿಕರವನ್ನು ತೋರ್ಪಡಿಸಿ ಮುಂದೆ ಸಾಗಿದನು. "ಇಲ್ಲಿ ನೋಡಿರಿ. ಇವನೂ ಮಲಗಿದ್ದಾನೆ. ಹೊದೆದದ್ದು ಹೊಸಶಾಲು ಕಾಣಿಸುತ್ತದೆ. ಶಾಲಿನ ಒಂದು ಸೆರಗು ಕಾಲಕೆಳಗೆ, ಇನ್ನೊಂದು ಸೆರಗು ತಲೆಕೆಳಗೆ ಹಾಕಿ ಜೇಟು ಕೊಟ್ಟು ಮಲಗಿದ್ದಾನೆ. ನಿಶ್ಚಿಂತ ಪುರುಷನೇ ಕಾಣಿಸುತ್ತದೆ" ಎಂದಳು ಪಾರ್ವತಿ.

ಆ ದೃಶ್ಯವನ್ನು ಕಂಡು ಶಿವನು — "ಅಹುದಲ್ಲವೇ" ಎಂದುಸುರಿ ಮುಂದಡಿಯಿರಿಸಿದನು. ಮುಂಜಾವಿನ ತಿರುಗಾಟವನ್ನು ಮುಗಿಸಿಕೊಂಡು ಆ ದೇವದಂಪತಿಗಳು ಕೈಲಾಸವನ್ನು ತಲುಪಿದರು. ಶಿವನು ಮೈಮೇಲಿನ ಬಟ್ಟೆಂಯನ್ನು ಕಳಚುತ್ತಿರುವಾಗಲೇ ಸೇವಕನನ್ನು ಕರೆದು—"ಆ ದೇವಾಂಗಪತಿಯನ್ನು ಕೂಡಲೇ ಬರಹೇಳು" ಎಂದು ಆಜ್ಞಾಪಿಸಿದನು.

ಪಾರ್ವತಿಯು ಒಳಮನೆಯನ್ನು ಪ್ರವೇಶಿಸಿ ತನ್ನ ಮುಂದಿನ ಕೆಲಸಕ್ಕೆ ಅಣಿಯಾದಳು. ಅಷ್ಟರಲ್ಲಿ ದೇವಾಂಗಪಶಿ ಬಂದವನೇ ಶಿವನ ಪಾದಕ್ಕೆ ಹಣೆಹಚ್ಚಿ ವಂದಿಸಿದನು. "ದೇವರು ಕರೆಸಿದ್ದೇಕೆ" ಎಂದು ಕೈಮುಗಿದು ಕೇಳಿದನು.