ಪುಟ:ಕರ್ನಾಟಕ ಗತವೈಭವ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨ನೆಯ ಪ್ರಕರಣ - ವೈಭವ-ವರ್ಣನೆ

೯೧


ಹಿಂದೆ ನಮ್ಮ ದೇಶದಲ್ಲಿ ಶಾಂತತೆಯೇ ಇರಲಿಲ್ಲ, ಎಲ್ಲಿ ನೋಡಿದರೂ ಅರಾಜಕತೆಯೇ ಇತ್ತು; ಎಂದು ತಲೆಯೊಳಗೆ ತಪ್ಪು ಕಲ್ಪನೆಯನ್ನು ಹಾಕಿಕೊಂಡಿರುವ ನಮ್ಮ ಸುಶಿಕ್ಷಿತರ ತಲೆಯೊಳಗೂ ಮೇಲಿನ ವಾಕ್ಯದಿಂದ ಪ್ರಕಾಶ ಕಿರಣಗಳು ಬೀಳುವುವೆಂದು ಆಶೆಯದೆ. ಬಿಹ್ಲಣನು ಬರೆದುದು ಕೇವಲ ಕವಿ ಕಲ್ಪನೆಯಲ್ಲವೆಂಬುದು ಚಾಲುಕ್ಯ ವಿಕ್ರಮನ ಮಿಕ್ಕ ಇತಿಹಾಸವನ್ನೋದಿದರೆ ಮನವರಿಕೆಯಾಗುವುದು. ಆತನು, ಪಟ್ಟವೇರುವ ಪೂರ್ವದಲ್ಲಿಯೇ ಅನೇಕಾನೇಕ ರಾಜ್ಯಗಳನ್ನು ಗೆದ್ದನು. ಪಟ್ಟವೇರಿದ ನಂತರ ೫೦ ವರ್ಷಗಳವರೆಗೆ ಅವನ ರಾಜ್ಯದಲ್ಲಿ ಪೂರ್ಣ ಶಾಂತತೆಯು ನೆಲೆಗೊಂಡಿತ್ತು. ಅವನ ಕಾಲಕ್ಕೆ ಆಗಿ ಹೋದ ಗ್ರಂಥಗಳನ್ನು ನೋಡಲು, ಅಂಥ ಗ್ರಂಥಗಳು, ಪೂರ್ಣ ಶಾಂತತೆಯು ನೆಲೆಗೊಂಡ ಕಾಲದಲ್ಲಲ್ಲದೆ ಮಿಕ್ಕಕಾಲಕ್ಕೆ ಆಗುವುದು ಶಕ್ಯವಿಲ್ಲವೆಂದೂ ಗೊತ್ತಾಗುವುದು. ಅದೇ ಕಾಲದ ಮತ್ತೊಬ್ಬ ಪಂಡಿತನು ನಮ್ಮ ಈ ಕರ್ನಾಟಕದ ಅರಸನನ್ನು ವರ್ಣಿಸುವುದನ್ನು ಆಲಿಸಿರಿ. ವಿಜ್ಞಾನೇಶ್ವರನು ತನ್ನ ಪ್ರಸಿದ್ಧ ಪುಸ್ತಕವಾದ 'ಮಿತಾಕ್ಷರಾ' ಎಂಬ ಧರ್ಮ ಶಾಸ್ತ್ರದ ಕೊನೆಗೆ ಬರೆದಿರುವುದೇನೆಂದರೆ-

नासीदस्ति भविष्यति क्षितितले कल्याणकल्पं पुरं ।
 नो दृष्टः श्रुत एव वा क्षितिपतिः श्रीविक्रमार्कोपमः ।।
विज्ञानेश्वरपंडितो न भजते किञ्चान्यदन्योपमः ।
 आकल्पं स्थिरमस्तु कल्पलतिका कल्पं तदत्रयम् ।।

"ಪೃಥ್ವಿಯ ಮೇಲೆ ಕಲ್ಯಾಣದಂಥ ಮತ್ತೊಂದು ಪಟ್ಟಣವು ಹಿಂದೆ ಇದ್ದಿಲ್ಲ, ಈಗಲೂ ಇಲ್ಲ, ಮುಂದೆಯೂ ಹುಟ್ಟುವುದಿಲ್ಲ. ವಿಕ್ರಮಾರ್ಕನಂಥ ಪ್ರತಾಪಶಾಲಿಯಾದ ಅರಸನು ಜಗತ್ತಿನೊಳಗೆ ಬೇರೊಬ್ಬರೂ ಇಲ್ಲ” – ಮುಂತಾಗಿ ವರ್ಣಿಸಿದುದೇನು ಸಾಮಾನ್ಯ ವರ್ಣನೆಯೇ? ಕನ್ನಡಿಗರೇ ನಿಮ್ಮ ಅರಸನ ಸ್ತುತಿಯನ್ನು ನಿತ್ಯದಲ್ಲಿ ಪಾರಾಯಣಮಾಡಿ ಪುಣ್ಯ ಕಟ್ಟಿಕೊಳ್ಳಿರಿ.
ದರೆ ನಮ್ಮ ಅರಸರ ವರ್ಣನೆಗಳನ್ನು ಆದ್ಯಂತವಾಗಿ ಕೊಡುವುದು ನಮ್ಮ ಉದ್ದೇಶವಲ್ಲ. ಕನ್ನಡಿಗರಲ್ಲಿ ಬೇರೂರಿದ ಕೆಲವು ಭ್ರಾಮಕ ಕಲ್ಪನೆಗಳನ್ನು ಹೊಡೆದೋಡಿಸಲಿಕ್ಕೆ ದಿಗ್ದರ್ಶನಾರ್ಥವಾಗಿ ನಾವು ಇವನ್ನು ಇಲ್ಲಿ ಕೊಟ್ಟಿರುವೆವು.