ಪುಟ:ಕರ್ನಾಟಕ ಗತವೈಭವ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೪

ಕರ್ನಾಟಕ ಗತವೈಭವ


ರಲ್ಲಿ ಕೆಲವರು ಶೈವರು ಕೆಲವರು ವೈಷ್ಣವರೆಂದೂ ವಿಜಯನಗರದ ಅರಸರಲ್ಲಿಯೂ ಕೆಲವರು ಶೈವರು ಕೆಲವರು ವೈಷ್ಣವರೆಂದೂ ಸ್ಥೂಲಮಾನದಿಂದ ಹೇಳಬಹುದು. ಅದು ಹೇಗೇ ಇರಲಿ! ಎಲ್ಲರೂ ಅತ್ಯಂತ ಪರಧರ್ಮ ಸಹಿಷ್ಣುಗಳಾಗಿದ್ದರೆಂಬುದಂತೂ ನಿರ್ವಿವಾದವೇ! ಜಿನ, ವಿಷ್ಣು, ಶಿವ ಈ ಮೂರ್ತಿಗಳು ಒಂದೆಡೆಯಲ್ಲಿ ಸ್ಥಾಪಿತವಾದ ಉದಾಹರಣೆಗಳುಂಟು. ಅದೇ ಮೇರೆಗೆ ಬ್ರಹ್ಮ ವಿಷ್ಣು ಮಹೇಶ್ವರ ಮೂರ್ತಿಗಳನ್ನೂ ಒಂದೆಡೆಯಲ್ಲಿ ಕಾಣಬಹುದು.
ಈ ಕೆಳಗಿನ ಶ್ಲೋಕವು ನಮ್ಮ ಧಾರ್ಮಿಕ ಸಹಿಷ್ಣುತೆಯನ್ನು ಚೆನ್ನಾಗಿ ಹೊರಪಡಿಸುತ್ತದೆ.

यं शैवाः समुपासते शिव इति ब्रह्मेति वेदान्तिनो|
 बौद्धाः बुद्ध इति प्रमाणपटवः कर्तेति नैयायिकाः॥
अहश्चेति ह जैनशासनपराः कर्मेति मीमांसकाः|

 सायं वो विदधातु इच्छितफलं श्रीशवस्सर्वदा॥

ಸಾರಾಂಶ:-"ಶೈವರು ಶಿವನಂದೂ ವೇದಾಂತಿಗಳು ಬ್ರಹ್ಮನೆಂದೂ ಬೌದ್ದರು ಬುದ್ಧನೆಂದೂ ಪ್ರಮಾಣ ಪಟುಗಳಾದ ನೈಯಾಯಿಕರು ಕರ್ತನೆಂದೂ ಜೈನರು ಅರ್ಹನೆಂದೂ ಮೀಮಾಂಸಕರು ಕರ್ಮವೆಂದೂ - ಹೀಗೆ ನಾನಾ ಜನರು ನಾನಾ ವಿಧವಾಗಿ ಉಪಾಸನೆಗೈಯುವ ಶ್ರೀ ಕೇಶವನು ನಮಗೆ ಸದಾ ವಾಂಛಿತ ಫಲವನ್ನೀಯಲಿ.”

ಇದು ಬೇಲೂರಲ್ಲಿಯ ಒಂದು ಶಿಲಾಲೇಖದೊಳಗಿನ ಶ್ಲೋಕವು.
ಧರ್ಮ ಸಹಿಷ್ಣುತೆಯ ಮತ್ತೊಂದು ಬೋಧಪ್ರದವಾದ ಉದಾಹರಣೆಯನ್ನು ಕೊಟ್ಟು ಈ ಪ್ರಕರಣವನ್ನು ಮುಗಿಸುವೆವು.
೧೩೬೮ ನೆಯ ವರ್ಷದಲ್ಲಿ ವಿಜಯನಗರದೊಳಗೆ ಬುಕ್ಕಮಹಾರಾಯನು ಆಳುತ್ತಿರಲು, ಜೈನರು ವೈಷ್ಣವರಿಂದ ತಮ್ಮ ಧರ್ಮಾಚರಣಕ್ಕೆ ವ್ಯತ್ಯಯವುಂಟಾಗುವುದೆಂದು ಅವನಿಗೆ ದೂರು ಹೇಳಿಕೊಂಡರು. ಆಗ, ಬುಕ್ಕರಾಯನು ಎರಡು ಪಂಥದ ಮುಖಂಡರನ್ನೂ ಕರೆಯಿಸಿ, ಪ್ರತಿಯೊಬ್ಬರು ತಮ್ಮ ತಮ್ಮ ಧರ್ಮದಂತೆ ನಡೆಯಬೇಕು, ಒಬ್ಬರು ಮತ್ತೊಬ್ಬರ ಧರ್ಮಾಚರಣೆಗೆ ಅಡ್ಡ ಬರಬಾರದು.” ಎಂದು ವಿಧಿಸಿದನು. ಅಲ್ಲದೆ, ಅವನು ಸ್ವತಃ ಜೈನರ ಕೈಯಲ್ಲಿ ವೈಷ್ಣವರ