ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಥಕಳಿ

ಕಥಕಳಿ ಇದು ಕೇರಳದಲ್ಲಿ ಕೇರಳದಲ್ಲಿ ಹುಟ್ಟಿ ಹುಟ್ಟಿ ಪ್ರಸಿದ್ಧಿಗೆ ಬಂದಿರುವ ವಿಶೇಷ ವಿಧಾನದ ನಾಟ್ಯಪ್ರಯೋಗವಾಗಿದೆ. ಮಲೆಯಾಳ ಭಾಷೆಯಲ್ಲಿ 'ಕಳಿ' ಎಂದರೆ ಆಟ ಅಥವಾ “ಕ್ರೀಡನೀಯಕ'ವೆಂಬ ಅರ್ಥವಿರುವುದು. 'ಆಟ' ಎಂದರೆ ಕುಣಿತ. ಕೇರಳೀಯರಲ್ಲಿ ಸರ್ವಸಾಮಾನ್ಯವಾಗಿ ಪುರಾಣದ ಕಥೆಗಳಿಗೆ 'ಕಥ' ಎಂಬ ವ್ಯವಹಾರವಿದ್ದುದರಿಂದ ಆ ಕಥಾಭಾಗಗಳನ್ನು ಸಾಭಿನಯವಾಗಿ ಆಡಿತೋರಿಸುವ ದೃಶ್ಯಪ್ರಯೋಗಕ್ಕೆ 'ಕಥಕಳಿ' ಎಂದೂ, ಅದಕ್ಕಾಗಿ ರಚಿಸಲ್ಪಟ್ಟಿರುವ ಗೀತರೂಪಕಗಳಿಗೆ 'ಆಟಕಥ'ಗಳೆಂದೂ ಹೆಸರಾಗಿದೆ. ಈ ಪ್ರಯೋಗವು ಕೇರಳದ ಜಾನಪದೀಯವಾದ ಅಥವಾ ಜಾನಪದ ಮೂಲ ದಿಂದ ವಿಕಾಸಗೊಂಡ ನಾಟ್ಯ ಸಂಪ್ರದಾಯವೆಂದು ಕೆಲವರು ಭಾವಿಸುತ್ತಾರೆ. ವಸ್ತುತಃ ಈ ಅಭಿಪ್ರಾಯ ಸರಿಯಲ್ಲ. ಪುರಾತನ ಪರಂಪರೆಯಿಂದಲೇ ಅಲ್ಲಿಯ ದೇವಾಲಯಗಳಲ್ಲಿ ನಾಟ್ಯ ಶಾಸ್ರೋಕ್ತ ವಿಧಿಪ್ರಕಾರ, ಶಾಸ್ತ್ರೀಯವಾಗಿ ಅಭಿನಯಿಸಲ್ಪಡುತ್ತಿದ್ದ 'ಚಕ್ಕಾ‌ ಕೂತ್ತು' ಹಾಗೂ 'ಕೂಡಿಯಾಟ್ಟಂ' ಎಂಬ ಸಂಸ್ಕೃತ ನಾಟಕಾಭಿನಯ ಪ್ರಯೋಗವೇ ಇದರ ಮೂಲವಾಗಿದೆ. ಅಲ್ಲಿಯ ದೇವಾಲಯಗಳಲ್ಲಿ ಅದಕ್ಕಾಗಿ ನೇಮಿಸಲ್ಪಡುತ್ತಿದ್ದ ನಾಟ್ಯವೃತ್ತಿ ಯವರಾದ 'ಚಕ್ಕಿಯಾರ್' ಎಂಬ ನಟವರ್ಗದವರಿಂದಲೇ ಅಭಿನಯಿಸಲ್ಪಡಬೇಕಾಗಿದ್ದ ಹಾಗೂ ದೇವಾಲಯಗಳ 'ಒಳಾಂಗಣ'ಗಳಿಗಷ್ಟೇ ಸೀಮಿತವಾಗಿದ್ದ ಆ ಸಂಸ್ಕೃತ ನಾಟ್ಯ ಪ್ರಯೋಗವು ಅಶಿಕ್ಷಿತರಾದ ಜನಸಾಮಾನ್ಯರಿಗೆ ಪ್ರಾಯಶಃ ಅಲಭ್ಯವಾಗಿದ್ದುದರಿಂದ, ಆ ಕಥಾಭಾಗಗಳನ್ನು ಮಲೆಯಾಳ ಭಾಷೆಯಲ್ಲಿ ಸರಳವಾದ ಗೀತರೂಪಕಗಳನ್ನಾಗಿ ರಚಿಸಿ, ಅದೇ ಶಾಸ್ತ್ರೀಯ ಸಂಪ್ರದಾಯದಲ್ಲಿ ಅವುಗಳನ್ನು ಸಾರ್ವಜನಿಕ ಕ್ಷೇತ್ರಗಳಲ್ಲಿ ಪ್ರದರ್ಶಿಸು ವಂತೆ ಕೇರಳದ ರಾಜಮಹಾರಾಜರುಗಳು ಹಾಗೂ ಸುಶಿಕ್ಷಿತರಾದ ನಂಬೂದರಿ ಬ್ರಾಹ್ಮಣ ವರ್ಗದವರು ಈ ಪ್ರಯೋಗವನ್ನು ರೂಢಿಗೆ ತಂದಿರುವುದಾಗಿದೆ.

ತಿರುವಾಂಕೋಡಿನ ವಂಚಿ ರಾಜವಂಶಕ್ಕೆ ಸೇರಿದ, ಉತ್ತರ ಕೇರಳದ ಕೊಟ್ಟಾರಕರ ಎಂಬ ಶಾಖೆಯಲ್ಲಿ ಅರಸಾಗಿದ್ದ ಬಾಲವೀರ ಕೇರಳವರ್ಮನೆಂಬ ರಾಜನೇ ಕಥಕಳಿಯ ಆದ್ಯ ಪ್ರವರ್ತಕನಾಗಿದ್ದನು. ದಶರಥನ ಪುತ್ರಕಾಮೇಷ್ಟಿ ಯಾಗದ ಮೊದಲ್ಗೊಂಡು ರಾವಣವಧೆಯ ವರೆಗಿನ ರಾಮಾಯಣ ಕಥೆಯನ್ನು, ಪುತ್ರಕಾಮೇಷ್ಟಿ, ಸೀತಾಸ್ವಯಂವರ, ವಿಚ್ಛಿನ್ನಾಭಿಷೇಕ, ಖರವಧ, ವಾಲಿವಧ, ತೋರಣ ಯುದ್ಧ, ಸೇತುಬಂಧನ, ಯುದ್ಧ ಎಂಬ ಎಂಟು ಪ್ರಕರಣಗಳಾಗಿ ವಿಂಗಡಿಸಿ, 'ರಾಮನಾಟ್ಟಂ' ಎಂಬ ಹೆಸರಿನಿಂದ ವಿರಚಿಸಿದ 'ಆಟಕಥ'ಗಳೇ ಮೊತ್ತಮೊದಲಿನ ಕಥಕಳಿ ಪ್ರಬಂಧಗಳಾಗಿವೆ. ಕೇರಳದ ರಾಜರ ಸೈನಿಕ ವರ್ಗದವರಲ್ಲಿ ಪ್ರಸಿದ್ಧರಾದ 'ನಾಯರ್' ಜಾತಿಯವರು, ಅವರ ಆರಾಧ್ಯದೇವತೆಯಾದ ಭಗವತಿಯ ಆರಾಧನೆಯಲ್ಲಿ ನಡೆಯತಕ್ಕ 'ಪಡಯಾಟ್ಟಂ' ಎಂಬ ವೀರನೃತ್ತಕ್ಕೆ ಹೆಸರಾದವರಾಗಿದ್ದುದರಿಂದ ಕೊಟ್ಟಾರಕರದ ರಾಜನ 'ರಾಮನಾಟ್ಟಂ' ಪ್ರಬಂಧಗಳನ್ನು ಮೂಲತಃ ಅವರೇ ಪ್ರಯೋಗಕ್ಕೆ ತಂದಿರುವುದೆಂಬ ಪ್ರತೀತಿ ಇದೆ. ಮುಂದೆ ಪ್ರಾಯಶಃ ಒಂದು ಶತಮಾನದ ವರೆಗೂ ಕೊಟ್ಟಾರಕರನ ಪ್ರಬಂಧಗಳಷ್ಟೇ ಈ ಆಟದ ಕಥಾರೂಪಕ ಗಳಾಗಿದ್ದುದರಿಂದ ಅಂದು ಈ ಪ್ರಯೋಗವು 'ರಾಮನಾಟ್ಟಂ' ಎಂದೇ ಕರೆಯಲ್ಪಡುತ್ತಿದ್ದು ದಾಗಿ ತಿಳಿಯುವುದು. ಕ್ರಮೇಣ ಮಹಾಭಾರತಾದಿ ಇತರ ಕಥಾರಚನೆಗಳು ಹುಟ್ಟಿ