ಪುಟ:ನಡೆದದ್ದೇ ದಾರಿ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮುಳ್ಳುಗಳು / ಮುಳ್ಳುಗಳು

೧೫

ಕೇಳಿದವನು ಪ್ರೊ.ದೇಸಾಯಿ.ಮರೆಯತೊಡಗಿದ ಹಳೆಯ ಕನಸಿನೆಡೆ
ಎಳೆಯುತ್ತಿವೆ ಇವನ ಮುಖದ ಮೇಲಿನ ಈ ಮುಗ್ಧತೆ, ನಿಷ್ಕಪಟ ಭಾವ-ಇದು
ಬರೇ ಛದ್ಮವೇಷವೆಂದು ತನಗೆ ಗೊತ್ತಿಲ್ಲವೆ? ಒಬ್ಬ ಗಂಡಸು ಹೀಗಿರಲು ಸಾಧ್ಯವೇ
ಇಲ್ಲ. ಆದರೆ ಇವನು ಎಲ್ಲರಿಗಿಂತ ಬೇರೆಯಾಗಿದ್ದಂತೆ ತೋರಿ ನನಗೆ ಮತ್ತೆ
ಮುಳ್ಳುಗಳಿಲ್ಲದ, ಹೂವುಗಳಿರುವ ದ್ವೀಪದ ಬಗ್ಗೆ ವಿಚಾರ ಮಾಡಲು
ಹಚ್ಚುತ್ತಾನಲ್ಲ! ಇವನ ಕಣ್ಣಲ್ಲೂ ಮುಳ್ಳುಗಳು ಕಂಡರೆ ಎಷ್ತು ಒಳ್ಳೆಯದು!
ಮುಳ್ಳುಗಳೆಂದರೆ ಜೀವನದ ಒಂದು ಅನಿವಾರ್ಯ ಭಾಗವೆಂದು ನಂಬಿ ಬಿಡುವದು
ಆಗ ಸುಲಭವಾಗುತ್ತಿತ್ತು. ಇವನನ್ನು ನೋಡಿದಾಗ, ಇವನೊಂದಿಗೆ ಇದ್ದಾಗೆಲ್ಲ,
ಮುಳ್ಳುಗಳಿಂದ ತಪ್ಪಿಸಿಕೊಳ್ಳುವದು ಸಾಧ್ಯವಾದರೂ ಆದೀತೆಂಬ ಅಸಹಾಯ,
ಬಲಹೀನ,ನಿರುಪಯೋಗಿ ಆಸೆಯೊಂದು ಹುಟ್ಟುತ್ತದೆ-ಬೇಡ ಬೇಡವೆಂದರೂ.
'ಆಸೆಯೇ ದುಃಖದ ಮೂಲ'ವೆಂದು ಹೇಳಿದ ಜ್ಜಾನಿಗಳು ಇಂಥದೇ ಆಸೆಯನ್ನು
ದೃಷ್ಟಿಯಲ್ಲಿಟ್ಟುಕೊಂಡಿದ್ದರೇನೋ!
"ಟೀಗೆ ಬರಲಿಕ್ಕೂ ಇಷ್ಟ ವಿಚಾರ ಮಾಡಬೇಕಾಗತದೇನ್ರೀ? ಬರ್ರಿ ಬರ್ರಿ
ಹೋಗೋಣ."
ಹೌದು-ವಿಚಾರ ಮಡುವದನ್ನು ಇನ್ನು ಬಿಟ್ಟುಬಿಡಬೇಕು. ಬರೇ ಕಾರ್ಯ
ಮಾಡಬೇಕು. ಕರ್ಮಯೋಗಿಯೊಗಬೇಕು....
ದೇಸಾಯಿಯ ವ್ಯಕ್ತಿತ್ವದಲ್ಲಿ ನಿಜವಾಗಿಯೂ ಎಂಥದೋ ಜಾದೂ ಇದೆ.
ಇಲ್ಲವಾದರೆ ಸುಮ್ಮನೆ ಅವನನ್ನು ಹಿಂಬಾಲಿಸುವ ಮನಸ್ಸು ತನಗೇಕೆ ಆಗುತ್ತಿತ್ತು?
"ಇವತ್ತ ನಮ್ಮ ಡಿಪಾರ್ಟಮೆಂಟಿನ್ಯಾಗ ಫಿಲ್ಮ ಶೋ ಅದ, ನೋಡ್ಲಿಕ್ಕೆ
ಬರೀರೇನು ಮಿಸ್ ಶಾಂತಿ?"
-ಚಹಾ ಕುಡಿಯುತ್ತಿದ್ದಾಗ ಕೇಳಿದ ಪ್ರೊ.ದೆಸಾಯಿ.
ಫಿಲ್ಮ ಶೋದಲ್ಲಿ ಏನಿರುತ್ತದೆ ಸುಡುಗಾಡು? ರಾತ್ರಿ ಎನಾದರೂ
ಪ್ರೋಗ್ರ್ಯಾಮ್ಸ್ ಇದ್ದಾಗ, ಅಥವಾ ಪಿಕ್ಚರು ನೋಡಲಿಕ್ಕೆ ಹೋದಾಗ ತಿರುಗಿ ಬರುವಾಗ
ಕತ್ತಲಾಗುವದೆಂದು 'ಅವನು' ಹಾಸ್ಟೆಲಿಗೆ ಕಳಿಸಲು ಬರುತ್ತಿದ್ದ. ಪಿಕ್ಚರಿನ ಸೊಗಸು
ಹೆಚ್ಚಿನದೋ?'ಅವನ' ಜೊತೆಯ ಸೊಗಸು ಹೆಚ್ಚಿನದೋ? ಎಷ್ಟೋ ಸಲ
ಬೇಕಂತಲೇ ರಾತ್ರಿ ಹಾಸ್ಟೆಲಿಗೆ ಹೋಗಲು ತಡಮಾಡಿದ ಪ್ರಸಂಗ ತರಿಸಿಕೊಂಡದ್ದೂ
ಉ೦ಟು. ತನಗೇಕೆ ಆಗ ಒಮ್ಮೆಯೂ 'ಅವನ' ಕಣ್ಣಮುಳ್ಳಿನ ಅರಿವು ಬರಲಿಲ್ಲ?
ಅಷ್ಟೊಂದು ಮಬ್ಬು ಮುಸುಕಿರಬಹುದು. ಅಥವಾ 'ಅವನೇ' ಅದನ್ನು
ವ್ಯಕ್ತಗೊಳಿಸಿರಲಿಕ್ಕಿಲ್ಲ.ಎನಾಯಿತೋ, ಅಂತೂ ಆಗ ಆದದ್ದೆಲ್ಲಾ ನೋವಿನ ನೆನಪು...