ಪುಟ:ನನ್ನ ಸಂಸಾರ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಪೀಠಿಕೆ.

ಇದು ಈಶ್ವರಲೀಲೆಯನ್ನು ವಿಚಿತ್ರಘಟನಾವಳಿಗಳ ಮೂಲಕ ಪ್ರದರ್ಶಿಸುವ ನೀತಿಬೋಧಕವಾದ ಕಾಲ್ಪನಿಕ ಕಾದಂಬರಿಯು ವೀರರಸ ಶಾಂತರಸಗಳೇ ಈ ಗ್ರಂಥದಲ್ಲಿ ಪ್ರಧಾನಗಳಾಗಿವೆ. ಅನೇಕ ಚಮತ್ಕಾರವಾದ ವರ್ಣನೆಗಳೂ ನೀತಿಬೋಧೆಗಳೂ ಅಲ್ಲಲ್ಲಿ ಅಡಕವಾಗಿವೆ. ಇದು ಮುದ್ರಣಕ್ಕೆ ಪ್ರಾರಂಭವಾಗಿ ೩ ವರ್ಷಗಳಾದರೂ ಅನೇಕ ತೊಂದರೆಗಳಿಂದ ಮಧ್ಯಕಾಲದಲ್ಲಿ ನಿಲ್ಲಿಸಲ್ಪಟ್ಟಿದ್ದುದಕ್ಕಾಗಿ ವಿಷಾದಿಸಬೇಕಾಗಿದೆ. ಕಥಾಭಂಗವಾಗಬಾರದೆಂದು ಯೋಚಿಸಿ ಕಾದಂಬರೀಸಂಗ್ರಹ ಮಾಸಪತ್ರಿಕೆಯ ಸಂಪಾದಕರಾದ ಮ|| ಸಿ. ವೆಂಕಟರಮಣಶಾಸ್ತ್ರಿಗಳು, ಈ ರೋಹಿಣಿಯನ್ನು ಅಮೋಘವಾದ ತಮ್ಮ ಮಾಸಪತ್ರಿಕೆಯಲ್ಲಿ ಸಂಪೂರ್ಣವಾಗಿ ಪ್ರಕಟಿಸಿದುದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿರುವೆನು. ಗುಣಜ್ಞರು ಈ ಗ್ರಂಥದಲ್ಲಿರುವ ಸುಗುಣಗಳನ್ನು ಸ್ವೀಕರಿಸಿ ಪ್ರೋತ್ಸಾಹಿಸಿ ಮುಂದೆಯೂ ಇಂತಹ ಗ್ರಂಥರಚನೆಗೆ ಅವಕಾಶಗಳನ್ನು ಕಲ್ಪಿಸಿಕೊಡುವರೆಂದು ನಂಬಿದ್ದೇನೆ. ಈ ಗ್ರಂಥವನ್ನು ಬರಿಯುವ ಕಾಲದಲ್ಲಿ ಮೈಸೂರು ಮಹಾರಾಣಿಯವರ ಕಾಲೇಜು ಅ|| ಮಾಸ್ಟರಾಗಿದ್ದು, ಸದ್ಯಃ ತುಮಕೂರು ಎಂಪ್ರೆಸ್ ಗರ್ಲ್ಸ್ ಹೈಸ್ಕೂಲಿನ ಸಹಾಯೋಪಾಧ್ಯಾಯರಾಗಿರುವ ಮ|| ನಾರಾಯಣಶಾಸ್ತ್ರಿಗಳು ಬಹಳ ಸಹಾಯಮಾಡಿರುವುದರಿಂದ ಅವರಿಗೆ ನಾನು ಕೃತಜ್ಞನಾಗಿದೇನೆ.

ಮೈಸೂರು ಟ. ಕೆ. ನಂಜುಂಡಯ್ಯ, 1916 ನೇ ಆಗಸ್ಟ್.