ಪುಟ:ನಾಸ್ತಿಕ ಕೊಟ್ಟ ದೇವರು.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಾವ ಜನ್ಮದ ಶಾಪ ?

೯೯

“ನಿಜ ಅನ್ನು. ಆದರೂ, ಅವರ ಮನಸ್ಸು ನೋಯಿಸೋದು ಅಂದರೆ ಯಾಕೋ ಸಂಕಟವಾಗುತ್ತಪ್ಪ.”
“ ಅದಕ್ಕೇ ಅನ್ನೋದು ಹೆಂಗರುಳು ಅಂತ.”
ಮಕ್ಕಳಿಬ್ಬರೇ ಮಾತನಾಡಿಕೊಳ್ಳುತ್ತಿದ್ದುದು ಕಿವಿಗೆ ಬಿದ್ದ ಅವರ ತಾಯಿ ಹೊರಗೆ ಬಂದರು. ಕೆಂಪಡರಿ ಊದಿಕೊಂಡಿದ್ದ ಕಣ್ಣುಗಳು ಆಕೆ ಒಳಗೆ ಅಳುತ್ತಿದ್ದರೆಂದು ಸಾಕ್ಷ್ಯ ನುಡಿದುವು.
ಪ್ರಸಾದ ಕೇಳಿದ:
“ಅಳ್ತಿದ್ದೆಯೇನಮ್ಮ?” ಅವರು ಸೆರಗಿನ ಅಂಚಿನಿಂದ ಮತ್ತೊಮ್ಮೆ ಕಣ್ಣುಗಳನ್ನು ಒತ್ತಿಕೊಂಡರು.
"ಇಲ್ವಲ್ಲ... ಕೆಟ್ಟ ಹೊಗೆ.”
ಪ್ರಸಾದ ನಕ್ಕ.
“ನಿಜ, ಅಮ್ಮ. ಇದು ಹೊಗೆ ತುಂಬಿದ ಮನೆ. ಕಿಟಕಿಗಳು ಮುಚ್ಚೇ ಇರುತ್ವೆ. ಕಿಟಕಿಗಳ್ನ ಸ್ವಲ್ಪ ತೆರೀಬೇಕು. ಅಲ್ವಾ ಅಮ್ಮ?”
“ಚಳಿಗಾಲ ಅಲ್ವೇನೋ? ”
ಗಿರಿಜೆಯ ಕಡೆ ನೋಡಿ, ಇಂಥವರಿಗೆ ಏನಾದರೂ ಮನವರಿಕೆ ಯಾಗೋದು ಸಾಧ್ಯವೆ? ಎಂಬರ್ಥದಲ್ಲಿ ಪ್ರಸಾದ ತಲೆಯಾಡಿಸಿದ.
ಆತನ ತಾಯಿ ಅಂದರು :
“ಇವರು ಬಂದಿಲ್ವಲ್ಲಾ ಇನ್ನೂ.”
ಪ್ರಸಾದ ಕೈಗಡಿಯಾರದತ್ತ ದೃಷ್ಟಿಹರಿಸಿದ.
“ಇನ್ನು ಹತ್ತು ನಿಮಿಷ ನೋಡಿ, ಆಮೇಲೆ ಊಟಕ್ಕೇಳ್ತೀನಿ.”
“ಹಾಗೇ ಮಾಡಪ್ಪ. ನೀನು ಇವತ್ತೇ ಹೋಗ್ಬೇಕು, ಅಲ್ವೆ?”
“ಹೂನಮ್ಮ. ಇನ್ನು ಹದಿನೈದು ನಿಮಿಷಗಳಲ್ಲಿ ಟ್ಯಾಕ್ಸಿ ಬರುತ್ತೆ.”
“ಸ್ಟೇಷನಿಗೆ ಇವರೂ ಬಾರ್ತಾರೋ ಏನೋ !”
ಗಿರಿಜಾ ಅಂದಳು :
“ಅಣ್ಣಯ್ಯನ ಜತೆ ನಾನೂ ಹೋಗಿಬರಬೌದು.”
ಪ್ರಸಾದನೆಂದ :
“ಸುಮ್ಮನೆ ಯಾಕೆ ಶ್ರಮ?”