ಪುಟ:ನಾಸ್ತಿಕ ಕೊಟ್ಟ ದೇವರು.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೮

ನಾಸ್ತಿಕ ಕೊಟ್ಟ ದೇವರು

ತಂಗಿಯನ್ನು ದಿಟ್ಟಿಸಿ ನೋಡಿ ಪ್ರಸಾದನೆಂದ:
“ಅಣ್ಣಯ್ಯನ ಮದುವೆ ಏರ್ಪಾಟಿಗೆ ನಾನು ಒಪ್ಪಲಿಲ್ಲ ಅಂತ ನಿನಗೆ ಬೇಸರವಿಲ್ಲ ತಾನೆ?”
ತಡಮಾಡದೆ ಗಿರಿಜಾ ಅಂದಳು :
“ಖಂಡಿತ ಇಲ್ಲ, ಪ್ರಸಾದು.”
ಹಾಗೆ ಅ೦ದಳಾದರೂ ಅವಳ ಒಳದನಿ ಕುಟುಕಿತು :
'ಇವನ ಬದುಕಿನ ತಿರುಗಣಿಗೆ ನಿನ್ನ ಬದುಕಿನ ತಿರುಗಣಿ ಆತುಕೊಂಡಿದೆ. ಅದು ಚಲಿಸಿದಾಗ ನಿನ್ನದರ ಚಲನೆ.'
ಒಳಗಿನ ಕಡಿತದಿಂದ ನೋವಾಗಿ, ಮುಖಬಾಡಿಸಿ, ಗಿರಿಜಾ ನೆಲ ನೋಡಿದಳು.
“ಹುಡುಗ ನಿನಗೆ ಇಷ್ಟವಾಗದೇ ಇದ್ದರೆ ನೀನು ಒಪ್ಕೊಬೇಡ, ಗಿರಿಜಾ.”
ವಸ್ತುಸ್ಥಿತಿಯನ್ನು ಮರೆತು ಉತ್ತರ ನೀಡುವುದು ಎಷ್ಟು ಸುಲಭ !
“ಇಲ್ಲ, ಪ್ರಸಾದು.”
“ಅಣ್ಣಯ್ಯನಿಗಾಗಲೀ ಅಮ್ಮನಿಗಾಗಲೀ ಗೊತ್ತಾಗೋದಿಲ್ಲ. ಅವರದು ಹಳೇ ಕಾಲದ ಯೋಚನೆ. ಒಂದು ಗಂಡನ್ನೂ ಒಂದು ಹೆಣ್ಣನ್ನೂ ಅಂತೂ ಇಂತೂ ಗಂಟುಹಾಕೋದು. ಇವರು ಸಂಸಾರ ಹೂಡಿ ಮಕ್ಕಳನ್ನ ಪಡೆಯೋದು. ಆ ಮೊಮ್ಮಕ್ಕಳನ್ನ ಎತ್ತಿ ಆಡಿಸಿ ವೃದ್ದ ತಾಯಿತಂದೆ ಕಣ್ಣು ಮುಚ್ಚೋದು. ಅವರ ದೃಷ್ಟೀಲಿ ಅದು ಸಾರ್ಥಕ ಜೀವನ.”
“ಇದೆಲ್ಲಾ ನನ್ನ ತಿಳಿವಳಿಕೆಗೆ ಮೀರಿದ್ದು.”
“ಮೀರಿದ್ದಲ್ಲವೇ ಅಲ್ಲ. ನೀನು ವಿದ್ಯಾವಂತೆ. ನನ್ನ ಅಭಿಪ್ರಾಯ ಏನು ಗೊತ್ತೆ? ಮನೇಲಿ ಕೂತು ವ್ಯರ್ಥವಾಗಿ ಕಾಲ ಕಳೆಯೋ ಬದಲು ನೀನು ಕೆಲಸಕ್ಕೆ ಸೇರಿಕೋಬೇಕು. ನಿನಗೆ ಇಷ್ಟವಾಗೋ ವರ ದೊರೆತಾಗ ಮದುವೆಯಾಗ್ಬೇಕು. ಏನಂತೀಯಾ ?”
“ಅಣ್ಣಯ್ಯ ಒಪ್ತಾರಾ, ಪ್ರಸಾದು ?”
"ಒಪ್ಪಿಸ್ಬೇಕು. ಯಾವುದು ಸರೀಂತ ನಮಗೆ ತೋರುತ್ತೋ ಅದನ್ನು ನಾವು ಮಾಡಿಯೇ ತೀರ್ಬೇಕು. ನಾಲ್ಕು ದಿವಸ ಬಡಕೋತಾರೆ. ಆಮೇಲೆ ಸುಮ್ಮನಾಗ್ತಾರೆ.”