ಪುಟ:ನಾಸ್ತಿಕ ಕೊಟ್ಟ ದೇವರು.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಾವ ಜನ್ಮದ ಶಾಪ ?

೧೦೧

ಮನೆ ಹುಡುಕುತ್ತ ಆ ದಾರಿಯಲ್ಲಿ ಮೆಲ್ಲಗೆ ಬಂದಿದ್ದ ಟ್ಯಾಕ್ಸಿಯ ಚಾಲಕ ನಂಬರನ್ನು ಗುರುತಿಸಿ ಬ್ರೇಕು ಹಾಕಿದ್ದ. ಬಸವಳಿದಿದ್ದ ಟ್ಯಾಕ್ಸಿ ಹುಶ್ಶೆಂದಿತು.
ನಡೆದು ದಣಿದು ಮೃದುವಾಗತೊಡಗಿದ್ದ ಮೆದುಳಿಗೆ ವಿಶ್ವನಾಥಯ್ಯನವರೂ ಬ್ರೇಕುಹಾಕಿ, ಉಸ್ಸೆಂದು ಆರಾಮ ಕುರ್ಚಿಯ ಮೇಲೆ ಕುಳಿತರು.
ಒಳಗೆ ಪ್ರಸಾದ ತಾಯಿಯ ಪಾದಗಳಿಗೆ ನಮಿಸಿದ.
ಬಿಕ್ಕುತ್ತ ಆಕೆ, “ನಿಮ್ತಂದೆಯ ಆಶೀರ್ವಾದ ಕೇಳ್ಕೊ,” ಎಂದರು.
ಪ್ರಸಾದ ಹೊರಕ್ಕೆ ಬಂದು ಯಾಂತ್ರಿಕವಾಗಿ ತಂದೆಯ ಅಡಿಗಳಿಗೆ ನಮಿಸಿದ.
ಯಾವ ಭಾವವನ್ನೂ ವ್ಯಕ್ತಪಡಿಸದೆ ಗೊಗ್ಗರ ಗ೦ಟಲಲ್ಲಿ ಅವರೆಂದರು :
"ಏಳು. ”
ಅವರಾಕೆ ನುಡಿದರು:
"ಟೈಮಾಯ್ತಂತೆ, ಊಟಕ್ಕೆದ್ಬಿಡಿ. ಸ್ಟೇಷನಿಗೆ ಹೋಗೋದಿಲ್ವೆ? ”
ಗೋಡೆಯತ್ತ, ಕಿತ್ತು ಬಂದಿದ್ದ ಜಾಗವನ್ನು ದಿಟ್ಟಿಸಿ, ವಿಶ್ವನಾಥಯ್ಯ ಅ೦ದರು :
“ಅವನೇನು ಚಿಕ್ಕ ಮಗುವೆ? ದಾರಿ ತಿಳೀದೆ ಅವನಿಗೆ? ”
ಮುಖ ಗಂಟಿಕ್ಕಿ ಪ್ರಸಾದನೆಂದ :
"ಬೇಡಿ. ಯಾರೂ ಬರಬೇಕಾದ್ದಿಲ್ಲ.”
ಟ್ಯಾಕ್ಸಿಯವನು ಸೂಟ್ಕೇಸನ್ನೊಯ್ದ.
ಪ್ರಸಾದ ಕಿಟ್ಟನ್ನೆತ್ತಿಕೊಂಡು ಹೊಸ್ತಿಲ ಮೇಲೆ ನಿಂತು, "ಬರ್ತೀನಿ ಅಮ್ಮ. ಬರ್ತೀನಿ ಅಣ್ಣಯ್ಯ. ಗಿರಿಜಾ, ಬರ್ತೀನಿ,” ಎಂದ. " ಹೋಗ್ಬರ್ತೀನಿ ಅನ್ನೋ,” ಎಂದು ತಾಯಿ ಗೋಗರೆದರು.
“ಹ್ಞೂ. ಹೋಗ್ಬರ್ತೀನಿ.”
"ಹುಷಾರಿ, ಪ್ರಸಾದು. ”
"ಹೂನಮ್ಮಾ. ”
ಟ್ಯಾಕ್ಸಿಯೊಳಕ್ಕೆ ಪ್ರಸಾದ ಕುಳಿತ. ಗೇಟಿನ ಬಳಿ ಗಿರಿಜೆ ನಿಂತಳು. ಆಕೆಯ ಹಿಂದೆ ತಾಯಿ.