ಪುಟ:ನಾಸ್ತಿಕ ಕೊಟ್ಟ ದೇವರು.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೨

ನಾಸ್ತಿಕ ಕೊಟ್ಟ ದೇವರು

ಪ್ರಸಾದನೆಂದ :
"ಗಿರಿಜಾ ಬೈ ಬೈ.”
ನಾಲಗೆಯ ತುದಿಗೆ ಬಂದರೂ ಪದಗಳನ್ನು ಉಚ್ಚರಿಸಲಾಗಿದೆ ಗಿರಿಜಾ ಅಂಗೈಯನ್ನು ಆಡಿಸಿದಳು.
ಟ್ಯಾಕ್ಸಿ ಹೊರಟಿತು.

ರೂರ್ಕೆಲಾ ತಲಪಿ ಕೆಲ ದಿನಗಳಾದ ಬಳಿಕ ಪ್ರಸಾದನಿಂದ ಒಂದು ಕಾಗದ ಬಂತು. ಇನ್ನೊಂದು, ಜರ್ಮನಿಯನ್ನು ಆತ ಮುಟ್ಟಿದಮೇಲೆ.
ಎರಡೂ ಗಿರಿಜೆಗೆ.
ವಿಶ್ವನಾಥಯ್ಯ ನಂಬಲಾರರು, ನಂಬದೆ ಇರಲಾರರು.
ಸುಳ್ಳಲ್ಲ, ನಿಜ. ಪ್ರಸಾದ ಜರ್ಮನಿಗೆ ಹೋದುದು ನಿಜವೇ.
ದಾರಿಯಲ್ಲೊಂದು ಸಂಜೆ ನರಸಿಂಗರಾಯರು ಅವರನ್ನು ತಡೆದು ನಿಲ್ಲಿಸಿ ಕೇಳಿದರು :
"ವಿಶ್ವನಾಥಯ್ಯ, ನಿಮ್ಮನ್ನ ಒಂದು ವಿಷಯ ಕೇಳ್ಬೇಕೂಂತ ಅವತ್ನಿಂದ ಅಂದ್ಕೊಂಡಿದೀನಿ. ನೀವು ಕೈಗೇ ಸಿಗ್ತಾ ಇಲ್ಲ.”
ನಗಲು ಪ್ರಯತ್ನಿಸಿ ವಿಶ್ವನಾಥಯ್ಯ ಕೇಳಿದರು:
"ಹೆಹ್ಹೆ. ಏನು ವಿಷಯ?”
"ನಿಮ್ಮ ಮಗ ಜರ್ಮನಿಗೆ ಹೋದ್ನಂತೆ, ಹೌದೆ?”
"ಹ್ಞ."
"ಚಂದ್ರಶೇಖರಯ್ಯ ಇಲ್ವೆ?-ಮೇಷ್ಟ್ರು. ಆತನಿಂದ ತಿಳೀತು."
"...."
ಮಾತಿಗೆ ಬರಗಾಲವೆ? ವಿಶ್ವನಾಥಯ್ಯ ಮೌನ ತಳೆದರೆಂದು ಬಿಡುವವರೆ ನರಸಿ೦ಗರಾಯರು?