ಪುಟ:ನಾಸ್ತಿಕ ಕೊಟ್ಟ ದೇವರು.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಂಟಿ ನಕ್ಷತ್ರ ನಕ್ಕಿತು

೧೨೯

ಕೆಟ್ಟ ಸುದ್ದಿಯನ್ನು ಕೇಳಿದ ಆ ದಿನ, ತನ್ನ ಓರಗೆಯವರೆಷ್ಟೋ ಜನ ನಕ್ಕಿದ್ದರು.
—'ಆದರೆ ಹೋದರೆ, ಅಜ್ಜಿಗೆ ಮೀಸೆ ಬಂದರೆ...!'
—'ಐ—ಬಿಡಿ !'
ಗಾಳಿಯಲ್ಲಿ ಸುದ್ದಿ, ತೇಲಿ ಬಂದಿತ್ತು–ತೇಲಿ ಹೋಗಿತ್ತು.
ಸ್ವಲ್ಪ ಸಮಯದ ಅನಂತರ, ಅದನ್ನೆಲ್ಲರೂ ಮರೆತಿದ್ದ ಹೊತ್ತಿಗೆ, ಹೊಸ ಜನ ಅಲ್ಲಿಗೆ ಬಂದರು—ಹ್ಯಾಟು ಬೂಟು ತೊಟ್ಟ ಅಪರಿಚಿತರು. ಅವರ ಹಿಂದೂ ಮುಂದೂ ಓಡಾಡಿದರು ಗ್ರಾಮಾಧಿಕಾರಿಗಳು.
—' ಹಳ್ಳಿಯನ್ನು ಬಿಟ್ಟು ಹೋಗ್ಬೇಕು.'
—[' ಆಹಾ! ಎಲ್ಲಿಗೆ? ಯಾರಪ್ಪನ ಮನೆಗೆ? ']
—' ಏ ಗೌಡ! ನೀನೊಬ್ಬನೇ ಅಲ್ಲ ಕಣಯ್ಯ!'
— ' ರೀ, ಗೌರವ ಕೊಟ್ಟು ಮಾತನಾಡಿ.'
—' Oh! I see!'
—' ಒಟ್ಟು ಹನ್ನೆರಡು ಹಳ್ಳಿ ಖಾಲಿಯಾಗ್ತವೆ.'
—' ಅನ್ನೆರಡು ಅಳ್ಳಿ?'
—' ಹೂ. ದೇಸಾಯರು, ಜೋಡೀದಾರ್ರು, ಇನಾಂದಾರ್ರು— ಎಲ್ರೂ ಒಪ್ಕೊಂಡಿದಾರೆ. ಸಣ್ಣ ಪುಟ್ಟ ಆಸ್ತಿ ಪಾಸ್ತಿ ಇರೋ ನಿಮ್ಮದೇನಪ್ಪ ಇನ್ನು?'
ಮಹಾ ಬುದ್ಧಿವಂತರೇ ಸರಿ. ಚತುರೋಪಾಯಗಳೂ ಗೊತ್ತಿದ್ದುವು ಅವರಿಗೆ. ಪರಿಹಾರ- ಹಣ. 'ಬೇರೆ ಕಡೆ ಭೂಮಿ ಕೊಂಡ್ಕೋಬಹುದು.' ಅಥವಾ ಹೊಲಕ್ಕೆ ಬದಲು ಹೊಲ. [ಬಂಜರು ಭೂಮಿಗೇನು ಬರಗಾಲ?] ಸಾವಿರಾರು ಜನರಿಗೆ ಕೆಲಸ ಬೇರೆ.
"ಕೆಲಸ? ಎಂಥ ಕೆಲಸ?”
"ಕೂಲಿ ಕೆಲಸ."
"ಕೂಲಿ—? ನಾವು ರೈತರು. ಕೂಲಿ-ನಾಲಿ ಮಾಡೋವರಲ್ಲ!”
"ಈ ರೈತರಿಗೆ ಒಂದೂ ಅರ್ಥವಾಗೋದಿಲ್ಲ."