ಪುಟ:ನಾಸ್ತಿಕ ಕೊಟ್ಟ ದೇವರು.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೦

ನಾಸ್ತಿಕ ಕೊಟ್ಟ ದೇವರು

"ಹುಂ!"
"ಈ ಹಳ್ಳಿಗಳೆಲ್ಲ ನೀರಿನ ಕೆಳಗೆ ಮುಳುಗುತ್ವೆ ಗೌಡರೆ!”
"ನೀರಿನ ಕೆಳಗೆ? ಮುಳುಗುತ್ವೆ?”
“ಹೌದು: ಸಾವಿರ ಎಕರೆ ಮುಳುಗಿದರೇನ್ರಿ? ಲಕ್ಷ ಎಕರೆ ಭೂಮಿಗೆ ನೀರು ಸಿಗುತ್ತೆ. ಅಷ್ಟೇ ಅಲ್ಲ—”
"ಸಾಕು ! ಸಾಕು !"
ಸಿಡಿಮಿಡಿಗೊಂಡ ತಾನು ದಡದಡನೆ ಅಲ್ಲಿಂದ ಹೊರಟುಬಿಟ್ಟಿದ್ದ. ರಾಮ ಮಾತ್ರ, ಆ ಜನರ ಜತೆಯಲ್ಲೇ, ಮಾತುಗಳಿಗೆ ಕಿವಿಗೊಡುತ್ತ, ನಿಂತಿದ್ದ. ಹುಚ್ಮುಂಡೆ! ಕತ್ತಲಾಗುವ ಹೊತ್ತಿಗೆ ಮನೆಗೆ ಬಂದ.
"ಅಲ್ಲೇನೊ ಮಾಡ್ತಿದ್ದೆ ಇಷ್ಟೊತ್ತು?”
"ಇಕಾ, ಕಾಜಗ ಕೊಟ್ಟವ್ರೆ. ಇದರೊಳಗೆಲ್ಲಾ ಪಿರಿಂಟ್ ಮಾಡೈತೆ.”
"ಪಿರಿಂಟ್ ಮಾಡೈತೆ — ಮಣ್ಣು !”

****

ಮುಂದೆ ಆಗಬೇಕಾಗಿದ್ದುದು ಆಗಿಯೇಹೋಯಿತು. ರಾಮ ಪಲ್ಲವಿ ನುಡಿದ :
"ನಡಿ, ಓಗಾನ. ಎಲ್ಲಾರಿಗಾಗೋದು ನಮಗೂ ಆಗ್ತೇತೆ."
ಹೊಲವನ್ನು ಮಾರಲಿಲ್ಲ ನಾನು. ಬದಲಿ ಭೂಮಿಯನ್ನು ಕೊಟ್ಟರು. ಮೂರೆಕರೆಗೆ ಮೂರೆಕರೆ. ನದಿಯ ದಂಡೆಯಲ್ಲಿ ಅಲ್ಲ. ಕೆಳಕ್ಕೆ, ಒಳಕ್ಕೆ.
ಹುಟ್ಟಿ ಬೆಳೆದ ಹಳ್ಳಿಯ ಹನುಮಂತರಾಯನ ಗುಡಿಯ ಮುಂದೆ ನಿಂತು ನಾನೆಂದೆ:
"ಓಗ್ಬರ್ತೀವಪ್ಪಾ. ಅಳ್ಳಿ ಮುಣಿಗಿಸ್ಬೌದು. ನಿನ್ನನ್ನ ಮುಣಿಗಿಸೋ ಕಾತದಾ? ಮನಿಸ್ಯರು ತಿಳೀದೆ ತಪ್ಮಾಡ್ತಾ ಅವರೆ. ಕ್ಸಮ್ಸಪ್ಪಾ ...”
ವಲಸೆ ಬಂದವರನ್ನು ಅಣಕಿಸಿತು ಬರಿದಾಗಿದ್ದ ಹೊಸ ಮಣ್ಣು. ಆ ನೆಲಕ್ಕೆ ಕೈ ಬಡೆದು, ಅಂಥ ಸ್ಥಿತಿಗೆ ನಮ್ಮನ್ನು ತಂದವರಿಗೆ ನಾನು ಶಾಪವಿತ್ತೆ; ಹಣೆ ಚಚ್ಚಿಕೊಂಡು ಮನದಣಿಯೆ ಅತ್ತೆ.
...ಆ ದಿವಸದಿಂದ ಇವತ್ತಿನವರೆಗೆ—ಈ ಮೂರು ವರ್ಷಗಳ ಕಾಲ—ಏನನ್ನೆಲ್ಲಾ ಕಂಡೆ ನಾನು!