ಪುಟ:ನಾಸ್ತಿಕ ಕೊಟ್ಟ ದೇವರು.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಂಟಿ ನಕ್ಷತ್ರ ನಕ್ಕಿತು

೧೩೧

ಮೊದಮೊದಲು, ಎಲ್ಲೋ ಕೇಳಿದ ಯಾವುದೋ ಸುದ್ದಿ ಎನ್ನುವ ಹಾಗೆ - ಬಳಿಕ ಉತ್ಸಾಹದಿಂದ - ನನ್ನ ಮಗ ರಾಮನೇ ಬಂದು ಹೇಳುತ್ತಿದ್ದ:
"ಎಲ್ರೂ ಬಂದ್ಬಿಟ್ಟವ್ರೆ. ನದೀಲಿ ತಳ ಎಷ್ಟು ಆಳಕ್ಕೈತೆ ಅಂತ ಭೈರಿಗೆ ಕೊರೆದು ನೋಡ್ತವ್ರೆ. ದೊಡ್ಡೊಡ್ಡ ಲಾರಿಗ್ಳು ಬಂದವೆ—ಅತ್ತಿಪ್ಪತ್ತು. ಮಿಸ್ನುಗಳು ಯಂತ್ರಗಳೂ ಬಂದ್ಬಿಟ್ಟವೆ. ಅದೇನೋ ಕ್ರೇನೂಂತ ತಗೊಂಡ್ಭಂದವ್ರೆ ಅಪ್ಪಾ. ತೆಂಗಿನಮರದಂಗೆ ಎತ್ತರಕ್ಕೈತೆ. ಎಂಗ್ಬೇಕಾದರೂ ತಿರುಗ್ತೇತೆ. ಕೈಯಿಂದ ಕಡ್ಡೀನ ಇಂಗೆತ್ತಿ ಅಂಗ್ಮಡ್ಗಾಕಿಲ್ವಾನಾವು?— ಅಂಗೇನೆ, ಎಸ್ಟ್ ಬಾರದ್ಸಾಮಾನಿದ್ರೂ ಒಂದ್ಕಡೆಯಿಂದ ಇನ್ನೊಂದ್ಕಡೆಗಿಡ್ತೇತೆ."
ನಮ್ಮ ನದಿ. ಬೇಸಗೆಯಲ್ಲಿ ಕಿರುಬೆರಳಿನಷ್ಟು ನೀರು. ಮಳೆ ಬಂದಾಗ ಕೆರಳಿದ ಮಹಾಕಾಳಿ. ಏನಾದರೇನು? ಮನುಷ್ಯ ಮಾಡುವ ತಪ್ಪಿಗೆ, ಅದು ದೇವರು ಕೊಡುವ ಶಿಕ್ಷೆ. ಅಂಥ ದೇವರ ಶಕ್ತಿ ಯೊಡನೆ ಈ ಜನರ ಸೆಣಸಾಟ. ನಾಸ್ತಿಕರು! ಹುಂ!
ರಾಮನೆಂದ :
"ಹಾಫೀಸರ್ ಗಳಲ್ಲಿ ಬಿರಾಮರು, ಲಿಂಗವಂತರು, ಒಕ್ಕಲಿಗರು, ಸಾಬರು, ಕಿರಸ್ತಾನರು—ಎಲ್ಲ ಜಾತಿಯವರೂ ಅವರೆ. "
ಕಟ್ಟುನಿಟ್ಟಾಗಿ ನಾನೆಂದೆ :
" ಅವರ ಜತೆ ನೀನು ಸೇರ್ಕೋಬ್ಯಾಡ. "
ದಿನ ಕಳೆದ ಹಾಗೆ ಜನರೆಲ್ಲ ಅವರ ಜತೆ ಸೇರಿದರು. ಕೆಲಸದ ಜಾಗಕ್ಕೆ ಅಂಟಿಕೊಂಡೇ ಊರು ಹುಟ್ಟಿತು. ಎಲ್ಲೆಲ್ಲಿಂದಲೊ ಜನರು ಬಂದರು. ಸಾವಿರ—ಹತ್ತು ಸಾವಿರ— ಇಪ್ಪತ್ತು ಸಾವಿರ ಜನ. ಹೆಣ್ಣಾಳು, ಗಂಡಾಳು. ಹಟ್ಟಿಗಳನ್ನು ಕಟ್ಟಿದರು. ಜತೆಯಲ್ಲೆ ಹೋಟೆಲು ಬಂತು... ದಿನಸಿನಂಗಡಿ, ಹೆಂಡದಂಗಡಿ ... ಮಣ್ಣು ಅಗೆಯುವವರು, ಕಲ್ಲು ಒಡೆಯುವವರು ... ಮನುಷ್ಯರು, ಯಂತ್ರಗಳು. ಕಿವಿ ಕಿವುಡಾಗುವ ಹಾಗೆ ಹಗಲೆಲ್ಲ ಸದ್ದು. ಮಣ್ಣುತೋಡಿ ಕಲ್ಲಿರಿಸಿದರು. ಕಲ್ಲು, ಗಾರೆ; ಕಲ್ಲು ಗಾರೆ.
'ಮಳೆ ಬರಲಿ, ಆಗ ತಿಳೀತದೆ,' ಎಂದುಕೊಂಡೆ.
ಮಳೆ ಬಂತು. ಕಟ್ಟಿದ್ದು ಮಿಸುಕಲಿಲ್ಲ.
ನವರಾತ್ರಿಯ ರಜೆಯಲ್ಲಿ ಮನೆಗೆ ಬಂದ ಕೃಷ್ಣನೆಂದ :