ಪುಟ:ನಾಸ್ತಿಕ ಕೊಟ್ಟ ದೇವರು.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೩೨

ನಾಸ್ತಿಕ ಕೊಟ್ಟ ದೇವರು

" ಅಣೆಕಟ್ಟು ಕಟ್ಟಿದ್ಮೇಲೆ ಮಹಾಪೂರ ಬರೋದಿಲ್ಲ. ಕಾಲಿವೆ ಕಡಿದು, ಊರೂರಿಗೆ ನೀರು ತಗೊಂಡು ಹೋಗ್ತಾರೆ. ಎಲ್ಲೆಲ್ಲೂ ಬೆಳೆ ಬೆಳೀತದೆ. ವಿದ್ಯುಚ್ಛಕ್ತಿ ಉತ್ಪಾದಿಸ್ತಾರೆ. ಮನೆ ಮನೆಗೆ ದೀಪ ಬರ್ತದೆ. ಕಾರ್ಖಾನೆಗಳು ಹುಟ್ಕೋತವೆ. ನದೀಲಿ ದೊಡ್ಡ ದೊಡ್ಡ ದೋಣಿಗಳು ಸಂಚಾರ ಮಾಡ್ತವೆ."
ರೇಗುತ್ತ ನಾನೆಂದೆ:
"ನಮ್ಮ ಅಳ್ಳಿ ಏನಾಗ್ತೇತೆ?”
"ಹಳ್ಳಿ ಮುಳುಗೋಗ್ತದೆ.”
"ಅ೦ಗ೦ತೀಯಾ ನೀನೂ ?”
"ಈ ಪುಸ್ತಕದಲ್ಲಿ ಬರೆದವರೆ.”
"ಉಚ್ಮುಂಡೆ ! ನಿನ್ನ ಪುಸ್ತಕನ ಸುಡ್ತು!”
ಹುಡುಗರು ಮೊದಲು ಕೆಟ್ಟರು. ವಯಸ್ಸಾದವರು ಆಮೇಲೆ. ಲೋಕ ತಲೆ ಕೆಳಗಾಗಿ ಹಾಳಾಗುತ್ತಿದ್ದುದನ್ನು ನೋಡಲು ನಾನೊಬ್ಬನೆ ಉಳಿದೆ ಎನಿಸಿತು...
ಭೂಮಿತಾಯಿ ಮುನಿದಳು. ಅರೆ ಹೊಟ್ಟೆ ಕೆಡವಿದಳು.
... ವರ್ಷ ಒಂದಾಯಿತು. ಅನಂತರವೂ ಒ೦ದು. ನದಿಗೆ ಅಡ್ಡವಾಗಿ ಮರಳಿನ ಗೋಡೆ ಕಟ್ಟಿ, ಅದರ ಹಾದಿಯನ್ನೆ ಬದಲು ಮಾಡಿದರು. ಎರಡೂ ಕಡೆಗಳಿಂದ ಬಂದಿದ್ದ ಅಣೆಕಟ್ಟು ನಡುವೆ ಕೂಡಿಕೊಂಡಿತು. ನೀರು ನಿಂತಿದ್ದ ಕೆರೆಯಾಯಿತು. ನದಿ ಆಳವಾಯಿತು.
ಆಗ ಬಲ್ಲಿದನಾಗಿದ್ದ ರಾಮನನ್ನು, ಕೆಣಕಿ ಕೇಳಿದೆ:
"ಅಳ್ಳಿಗಳನ್ನ ಯಾವತ್ತು ಮುಣುಗಿಸ್ತಾರೆ?”
"ಇನ್ನೇನು ಮುಣುಗೋಗ್ತವೆ.”
"ಉಂ! ಅನುಮಂತರಾಯನ ಗುಡಿಯೊಳಕ್ಕೆ ನೀರು ನುಗ್ಲಿ. ಆಮ್ಯಾಕೆ ಯೇಳ್ತೀನಿ !"
ಗುಡಿಯೊಳಕ್ಕೆ ನೀರು ನುಗ್ಗಿತು. ಗುಡಿ ಮುಳುಗಿತು. ಹನುಮಂತರಾಯ ಆಕ್ಷೇಪಿಸಲಿಲ್ಲ. ಕೆರೆ ಸರೋವರವಾಯಿತು. ಸರೋವರ ನೀರ ಸಾಗರವಾಯಿತು. ದೇವರು ತುಟಪಿಟ್ಟೆನ್ನಲಿಲ್ಲ.