ಕಥೆ : ಒ೦ದು
ನಾಸ್ತಿಕ ಕೊಟ್ಟ ದೇವರು
ಆ ಯಾಲಕ್ಕಿ ತೋಟದ ಸ್ನೇಹಿತರ ಮನೆಯಲ್ಲಿ, ಎರಡು ತಿಂಗಳ ಕಾಲಎಣಿಕೆಗೆ ಸಿಗದ ಹಾಗೆ ಕಳೆದುಹೋಗಿತ್ತು. ಸಂಚಾರಜೀವಿಯಾದ ಸೀತಾ ಪತಿಯನ್ನು ದೂರದ ಹಾದಿಗಳು ತಿರುತಿರುಗಿ ಕರೆಯುತ್ತಿದ್ದುವು. ಕಲ್ಪನೆಯ ಹಕ್ಕಿ ದೂರ ದೂರಕ್ಕೆ ಹಾರತೊಡಗಿತ್ತು.
ಮನಸ್ಸಿನ ನೆಮ್ಮದಿ ಮರಳಿಬಂದ ಹಾಗಾಯಿತು ಎಂದು ಭಾವಿಸಿದಾಗಲೇ, ಆ ಬೆಳಗ್ಗೆ ನಡೆದ ಘಟನೆಯೊಂದು ಅವನ ಕಲಾಹೃದಯದಮೇಲೆ ಕಾದ ಬರೆ ಎಳೆಯಿತು.
ಆ ಕೆಲಸಗಾರರೋ ! ತುಳು ಮಾತು, ಮಲೆಯಾಳ ಮಾತು, ಕನ್ನಡ ... ದುಡಿದು ಬದುಕುವ ಆಸೆ ಕಟ್ಟಿಕೊಂಡು ಬಯಲು ಭೂಮಿ ಯಿ೦ದ ಮೈಸೂರಿನ ಆ 'ಘಟ್ಟ ಸೀಮೆ'ಗೆ ಬಂದಿದ್ದ ಬಡವರು. ಊರಲ್ಲಾದರೆ ಅವರು ದಿನಗೂಲಿಯ ಕೃಷಿಕೊಲಿಕಾರರು; ಇಲ್ಲವೆ ಒಪ್ಪೊತ್ತು ಊಟವೂದೊರೆಯದಂಥ ಉತ್ಪತ್ತಿ ಇರುವ ಪುಟ್ಟ ಹೊಲಗಳ 'ಒಕ್ಕಲು-ಯಜಮಾನರು.' ಇಲ್ಲಿಯೋ, ಸ್ವಂತದ ಶ್ರಮವನ್ನು ಮಾರಿ ಬದುಕುವ ಸ್ವತಂತ್ರರು ಅವರು.
ಆದರೆ ಆ ಸ್ವಾತಂತ್ರ್ಯ!
ಎರಡು ಬದಿಗಳಲ್ಲೂ ಎತ್ತರದ ಗಿಡಗಳಿದ್ದ ಕಣಿವೆಯಂಥ ಹಾದಿಯ ಲ್ಲಿಆ ಭಾನುವಾರ ಬೆಳಗ್ಗೆ ಸೀತಾಪತಿ ವಾಯುಸೇವನೆಗೆ ಹೊರಟಿದ್ದ. ಅದು ರಜಾ ದಿನ. ಮಾನವರ ಸುಳಿವೇ ಇಲ್ಲದೆ ಗಿಡಮರಗಳಿಗೆಲ್ಲ ಏಕಾಂತದ ಸುಖ ದೊರೆತಿತ್ತು ಆ ಹೊತ್ತು. ಕ್ರಮ ಕ್ರಮವಾಗಿ ಹೆಜ್ಜೆ ಇಡುತ್ತಾನಡೆಗೋಲನ್ನು ಬೀಸುತ್ತಾ ತಂಗಾಳಿಗೆ ಮೈಯೊಡ್ಡಿ ಸೀತಾಪತಿ ಸಾಗಿದ್ದ.
ಹಾಗೆ ಒಂದು ಮೈಲಿ ಸಾಗಿದ ಬಳಿಕ ವಾಪಸು ಹೋಗೋಣವೆಂದುಕೊಂಡ ಸೀತಾಪತಿ.