ಪುಟ:ನಾಸ್ತಿಕ ಕೊಟ್ಟ ದೇವರು.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಾವ ಜನ್ಮದ ಶಾಪ?

೮೭

ಸಂಭಾಷಣೆಯನ್ನು ಕೇಳಿಸಿಕೊಂಡಿದ್ದ ಗಿರಜೆಯ ಮುಖ ಅಲ್ಲಿ ಬೆಳಗುತ್ತಿತ್ತು.
ಅವಳೆಂದಳು:
"ಜರ್ಮನಿಗೆ ನೀನು ಹೋಗೋದು ನಿಜವೆ ಪ್ರಸಾದು? ಓ! ಎಷ್ಟು ಚೆನ್ನಾಗಿರುತ್ತೆ!”
ಪ್ರಸಾದ, ತಂಗಿ ವ್ಯಕ್ತಪಡಿಸಿದ ಪ್ರತಿಕ್ರಿಯೆಗಾಗಿ ತಾನು ಕೃತಜ್ಞ ಎನ್ನುವಂತೆ ನಸುನಕ್ಕ.
ಸಂತಸವನ್ನು ತಾಯಿಗೆ ತಿಳಿಸಲು ಗಿರಿಜೆ ಒಳಕ್ಕೋಡಿದಳು. ಉಣ್ಣುತ್ತ ಕುಳಿತಿದ್ದ ತಾಯಿಯ ಮುಂದೆ ನಿಂತು, “ಅಮ್ಮಾ ! ಪ್ರಸಾದು ಜರ್ಮನಿಗೆ ಹೋಗ್ತಾನಂತೆ,” ಎಂದಳು.
ಮಗಳು ಆಡುತ್ತಿದ್ದ ಮಾತು ವಿಶ್ವನಾಥಯ್ಯನವರಿಗೆ ಕೇಳಿಸುತ್ತಿತ್ತು. ಹುಚ್ಚು ಹುಡುಗಿ-ಎಂದುಕೊಂಡರು ಅವರು.
ಮಗ ವಿದೇಶಕ್ಕೆ ಹೋಗುವನೆಂಬ ವಾರ್ತೆ ಸಿಹಿ ಭಕ್ಷ್ಯವಲ್ಲ-ಎಂದು ತಾಯಿ ಕಾತರಗೊಂಡು, ಬೇಗ ಬೇಗನೆ ಊಟ ಮುಗಿಸಿ ಎದ್ದರು.
ಪರಿಸ್ಧಿತಿ ತನ್ನ ಹಿಡಿತದಲ್ಲಿಲ್ಲ ಎಂದು ವಿಶ್ವನಾಥಯ್ಯನವರಿಗೆ ಸಂಕಟವಾಯಿತು. ಗಿಡವಾಗಿ ಬಗ್ಗಿತ್ತೆ? ಅವರಿಗೆ ನೆನಪಿಲ್ಲ. ಜೀವನದ ದಿನನಿತ್ಯದ ಜಂಜಾಟದಲ್ಲಿ ಮಕ್ಕಳನ್ನು ಕುರಿತು ಅವರು ಹೆಚ್ಚಿನ ಯೋಚನೆಯನ್ನೇ ಮಾಡಿರಲಿಲ್ಲ. ಈಗ ಬಿಡುವಿದೆಯೆಂದು ಮರವನ್ನು ಬಗ್ಗಿಸಲು ಹೊರಟಿದ್ದರು.
ಗಂಟಲು ಗೊಗ್ಗರ ಧ್ವನಿ ಹೊರಡಿಸಿ, "ಪ್ರಸಾದ್,” ಎಂದಿತು.
"ಬಂದೆ ಅಣ್ಣಯ್ಯ."
ಮಗನ ಮಾತಿನಲ್ಲಿ ಮಾರ್ದವತೆಯಿತ್ತು. ತಾನು ಗೆದ್ದುದು ಖಚಿತವಾದಾಗ ಆತ ಉದಾರಿಯಾಗಿದ್ದ.
ಆ ಕಾರಣದಿಂದ, ಬಾಗಿಲ ಚೌಕಟ್ಟಿನೊಳಗೆ ತುಸು ಭಿನ್ನವಾದ ಚಿತ್ರ ಈಗ ಕಂಡಿತು.
ದೈನ್ಯ ನೋಟದಿಂದ ಮಗನನ್ನು ದಿಟ್ಟಿಸಿ ವಿಶ್ವನಾಥಯ್ಯ ಅಂದರು :
"ನೀನು ಹೇಳಿದ್ದೆಲ್ಲ ನಿಜ ಅನ್ನು.”
"ಹುಂ."
"ನಿನ್ನ ತಂಗಿಯ ಮದುವೆಯೊಂದು ಆಗಬೇಕಲ್ಲಪ್ಪ."