ಪುಟ:ನಾಸ್ತಿಕ ಕೊಟ್ಟ ದೇವರು.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೬

ನಾಸ್ತಿಕ ಕೊಟ್ಟ ದೇವರು

ವಿಶ್ವನಾಥಯ್ಯನ ಮೂಗು ಕುಣಿಯಿತು. ಸಹನೆಯ ಕಟ್ಟೆಯೊಡೆದು ತಾವಿನ್ನು ಕನಲಿ ರುದ್ರನಾಗುವುದು ಖಂಡಿತ ಎಂದು ಅವರಿಗೆ ಭಾಸವಾಯಿತು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಸಿಟ್ಟಿನ ಬತ್ತಳಿಕೆಯಿಂದ ವ್ಯಂಗ್ಯ ಮಾತುಗಳನ್ನು ಆರಿಸಿಕೊಳ್ಳುತ್ತ ಅವರೆಂದರು:
"ವಿದೇಶದಿಂದ ಯಾವತ್ತು ಬಂದೆಯಪ್ಪ?”
ಪ್ರಸಾದನ ಪಾಲಿಗೆ ಇದು ಗೆಲುವಿನ ಘಳಿಗೆ.
"ಮುಂದಿನ ತಿಂಗಳು ಹೊಗ್ತೀನಿ, ಜರ್ಮನಿಗೆ.”
ಅಡಿ ತಪ್ಪಿ ಜೋಲಿ ಹೊಡೆದಂತಾಯಿತು ವಿಶ್ವನಾಥಯ್ಯನವರಿಗೆ.
"ಏನಂದೆ ?”
"ನಮ್ಮ ಸಂಸ್ಥೆಯವರು ಉಚ್ಚ ಶಿಕ್ಷಣಕ್ಕೆ ನನ್ನನ್ನು ಕಳಿಸಬೇಕೂಂತ ರ್ತೀಮಾನಿಸಿದಾರೆ.”
"ಅವರೇ ತೀರ್ಮಾನಿಸಿದರೊ? ಹೆತ್ತ ಹಿರಿಯರು ಮಾಡಬೇಕಾದ ನಿರ್ಧಾರ ಇನ್ನು ಏನೂ ಇಲ್ಲ ಅನ್ನು."
"ಸುದ್ದಿ ಕೇಳಿ ಸಂತೋಷಪಡ್ತೀರಾಂತಿದೆ.”
"ಸಂತೋಷವೇ ಕಣಯ್ಯ. ಎರಡು ವರ್ಷ ಯಾತಕ್ಕೆ? ಇಪ್ಪತ್ತು ವರ್ಷ ಜರ್ಮನೀಲೇ ಇರು.”
ತಬ್ಬಿಬ್ಬಾಗದೆ ಪ್ರಸಾದನೆಂದ:
" ಪ್ರಯಾಣದ ದಿನ ಗೊತ್ತಾದ್ಮೇಲೆ ಒಮ್ಮೆ ಬಂದು ಹೋಗೋಣಾಂತಿದ್ದೆ. ಸರಿ. ತಂತಿಕೊಟ್ಟಿರಿ. ಈಗಲೇ ಬಂದೆ. ಆಶೀರ್ವಾದ ಮಾಡಿ ಕಳಿಸ್ಕೊಡಿ. ಇನ್ನು ಭೇಟಿ ಎರಡು ವರ್ಷ ಆದ್ಮೇಲೆ.”
ಒರಗುವ ಕುರ್ಚಿಯಲ್ಲಿ ವಿಶ್ವನಾಥಯ್ಯನವರ ಮೈ ಮುದುಡಿತು. ಗಂಟಲೊಣಗಿದಂತೆ, ಉಸಿರು ಕಟ್ಟಿದಂತೆ, ಬವಳಿ ಬಂದಂತೆ ಅವರಿಗೆ ಅನಿಸಿತು.
ತಂದೆ ಏನಾದರೂ ಹೇಳಬಹುದೆಂದು ಪ್ರಸಾದ ಎರಡು ನಿಮಿಷ ಕಾದು ನೋಡಿದ. ಅವರ ಮೌನ ಈತನನ್ನು ವಿವಂಚನೆಗೆ ಗುರಿ ಮಾಡಿತು. ತಂದೆಯ ಕುಗ್ಗಿದ ಜೀವವನ್ನು ಕಂಡು ಒಂದು ಕ್ಷಣ ಕನಿಕರವೆನಿಸಿತು. ತಾನು ಹೇಳಿದುದನ್ನು ಜೀರ್ಣಿಸಿಕೊಳ್ಳಲು ಅವರಿಗೆ ಕಾಲಾವಕಾಶಬೇಕು ಎಂದು ತೋರಿ, ಆತ ಒಳಕ್ಕೆ ಸರಿದ.