ಪುಟ:ನಾಸ್ತಿಕ ಕೊಟ್ಟ ದೇವರು.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಯಾವ ಜನ್ಮದ ಶಾಪ?

೮೫

ಮಾತಿಲ್ಲದ ಗಂಭೀರ ವಾತಾವರಣದಲ್ಲಿ ಊಟ ಮುಗಿಯಿತು.
ಕೈ ಮುಖ ತೊಳೆದುಕೊಂಡು ವಿಶ್ವನಾಥಯ್ಯ ನೇರವಾಗಿ ಜಗಲಿಗೆ ಬಂದು,
" ಪ್ರಸಾದ್, ಇಲ್ಲಿ ಬಾ,"
-ಎ೦ದು ಕರೆದರು.
ಪ್ರಸಾದ ಕೊಠಡಿಯ ಬಾಗಿಲ ಚೌಕಟ್ಟಿನಲ್ಲೊಂದು ಪ್ರತಿಮೆಯಾಗಿ ನಿಂತ.
ಮಗನನ್ನು ನೋಡುತ್ತ ವಿಶ್ವನಾಥಯ್ಯನಿಗೆ ಅನಿಸಿತು:
"ಗಿಡವಾಗಿತ್ತು ಮೊನ್ನೆವರೆಗೆ, ಈಗ ಮರವಾಗಿದೆಯಲ್ಲ . . .”
ಪ್ರಕಾಶವಾಗಿ ಅವರೆಂದರು :
" ನನಗೆ ರಿಟೈರಾಯ್ತು.”
ಬೀಗಿಗೊಂಡಿದ್ದ ಮುಖಭಾವವನ್ನು ಶಿಥಿಲಗೊಳಿಸದೆಯೇ ಪ್ರಸಾದನೆಂದ:
" ಆಗುತ್ತೇಂತ ಆವತ್ತೇ ಬರೆದಿದ್ದಿರಲ್ಲ?”
"ಹ್ಞ. ಇನ್ನು ಮನೆಯ ಜವಾಬ್ದಾರಿ ನೀನು ಹೊತ್ಕೋಬೇಕು.”
"..."
"ಸುಮ್ಮನಿದೀಯಲ್ಲ?"
"ನೀವು ಏನು ಕೇಳ್ತಿದೀರೀಂತ ಸ್ಪಷ್ಟವಾಗಿಲ್ಲ. ತಿಂಗಳಿಗೆ ಈಗ ನೂರು ರೂಪಾಯಿ ನಾನು ಕಳಿಸ್ತಾ ಇಲ್ವೆ ?”
" ದುಡ್ಡು-ದುಡ್ಡು ! ಸಂಸಾರ ಬಂಧನ ಅಂದರೆ ಆರ್ಥಿಕ ವ್ಯವಹಾರ ಅಂತ ತಿಳಿಕೊಂಡೆಯೇನಯ್ಯ?"
ಅಷ್ಟು ಹೇಳಿ ವಿಶ್ವನಾಥಯ್ಯ ಹುಬ್ಬು ಹಾರಿಸಿದರು, ಹಿರಿತನದ ಹೆಮ್ಮೆಯಿಂದ.
ತಂದೆಯ ಮಾತು ವಾತಾವರಣದಲ್ಲಿ ಲೀನವಾದ ಮೇಲೂ ಸ್ವಲ್ಪ ಹೊತ್ತು ಸುಮ್ಮನಿದ್ದು, ಪ್ರಸಾದನೆಂದ :
" ಒಂದು ಮಾತು ಹೇಳ್ತೀನಿ. ಕೋಪಿಸ್ಕೋಬೇಡಿ, ಅಣ್ಣಯ್ಯ. ಐವತ್ತೈದು ಆದರಾಯ್ತು; ಇನ್ನು ಮಾಡುವಂಥಾದ್ದು ಏನೂ ಇಲ್ಲ ಅಂತ ನಮ್ಮ ಜನ ತಿಳಕೋತಾರೆ. ಇದು ಈ ದೇಶದ ದೌರ್ಭಾಗ್ಯ. ಇಲ್ಲದ ಚಿಂತೆ ಕಲ್ಪಿಸಿಕೊಂಡು ನೀವು ಸುಮ್ನೆ ಕೊರಗ್ತೀರಿ. ಎಪ್ಪತ್ತು ದಾಟಿದರೂ ನಿತ್ಯ ದುಡಿಯುವ ವಿದೇಶಿಯರನ್ನ ನಾನು ಕಂಡಿದೇನೆ.”