ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೨೪ ನೋವು
"ರಾಮ--ಚಂದ್ರ," ಎಂದ.
ಕಿಟಿಕಿಯಿಂದ ಗಾಳಿ ತಣ್ಣಗೆ ಬೀಸಿತು, ಅಕಾಶದಲ್ಲಿ ಮಿಂಚು ಕೋರೈಸಿ, ಅದರ ಪ್ರಭೆ
ಕಿಟಿಕಿಯ ಮೂಲಕ ಒಂದು ಕ್ಷಣ ಕೊಠಡಿಯನ್ನು ಹೊಕ್ಕಿತು.
"ಮಳೆ ಬರುತ್ತೆ ಗಜಾನನ. ಕಿಟಿಕಿ ಈಗ್ಲೇ ಮುಚ್ಚೋಣವೊ, ಆಮೇಲೊ ?” ಎಂದ
ಗೋವಿಂದ.
"ಬರಲಿ ಬಿಡಿ. ಇರಿಚಲು ಬೀಸಿದರೆ ಮುಚ್ಚಿದರಾಯ್ತು," ಗಜಾನನ ಉತ್ತರಿಸಿದ.
ಪದ್ಮನಾಭನಿಗೆ ನಿದ್ದೆ ಬರಲಿಲ್ಲ. ತನಗೆ ಹುಚ್ಚು ಹಿಡಿಸಿದ ಕಾಲೇಜಿನ ಪ್ರಮದೆ, ಪ್ರಮದೆ
ಯಂತೆ ಕಂಡ ಕಣಿವೇಹಳ್ಳಿಯ ಸುಬ್ಬಿ... ಅಲ್ಲಾ ಈ ಮೋಹನರಾಯರ ಮಗಳು ಈ ಇಬ್ಬರ
ಪ್ರತಿರೂಪವಾಗಬಲ್ಲಳೇನು ? ಮದುವೆ, ಮದುವೆ... ಬೇಡ ನನಗೆ ಎಂದರೇನಾದೀತು ?
ಬಲಾತ್ಕಾರದಿಂದ ಬಾಸಿಂಗ ಕಟ್ಟುವರೆ ಇವರು ?
ಈ ಹಳ್ಳಿಯೊಂದು ಸೆರೆಮನೆ. ಇಲ್ಲಿಂದ ಪಾರಾಗಬೇಕು.
ಆದರೆ ಅಧ್ಯಯನದಲ್ಲಿ ತನಗೆ ಆಸಕ್ತಿಯೇ ಉಳಿದಿಲ್ಲವಲ್ಲ ? ಇನ್ನೊಂದು ವರ್ಷವನ್ನು
ಕಳೆಯಬೇಕಲ್ಲ ಹೇಗಾದರೂ ! ಒಮ್ಮೆ ಪದವೀಧರನಾದೆನೆಂದರೆ ಗೆದ್ದ ಹಾಗೆ.
ಅಲ್ಲ-–ಪದವೀಧರನಾಗದೆ ಇದ್ದರೆ ಏನಂತೆ ?
ತಾವು ಶ್ರೀಮಂತರು. ಆದರೆ ತನ್ನ ಕೈಯಲ್ಲಿ ಹಣವಿಲ್ಲ. ನಗರಕ್ಕಲ್ಲ—-ದೂರ ಇನ್ನೆಲ್ಲಿ
ಗಾದರೂ ಹೋಗಿ ಬಿಡಬೇಕು ; ಗಣೇಶಭವನದ ಅಪ್ಪನಂತಹ ಹೋಟೆಲಲ್ಲಿ ರೂಮು ಮಾಡಿ
ಕೊಂಡು ಇರಬೇಕು ...
ಒಬ್ಬನೇ ಹೋಗಲೆ ? ಒಬ್ಬನೇ ? ಪ್ರಮದೆ ಬರುವಳೆ ತನ್ನ ಜತೆ ? ಸುಬ್ಬಿ ?
ಜೋಡಿದಾರರ -- ಅಲ್ಲ, ಜಮೀನ್ದಾರರ -– ಮನೆಯಲ್ಲಿ ಜೋಡಿ ಮದುವೆ.
ಪ್ರಮದೆಯಂಥದೇ ಹೆಣ್ಣಿನ ಕೈ ಹಿಡಿದು ತಾನು ಈ ಹಳ್ಳಿಯನ್ನೇ ಬಿಟ್ಟುಬಿಟ್ಟರೆ -–
ಪಕ್ಕದ ಹಾಸಿಗೆಯಿಂದ ಗುಸುಗುಸು.
ಗಜಾನನ :
"ನಿಮ್ಮ ತಮ್ಮನಿಗೆ ನಿದ್ದೆ ಬಂತೋ ಹ್ಯಾಗೆ ?"
ಗೋವಿಂದ:
"ಅವನು ದಿಂಬಿಗೆ ತಲೆ ಸೋಂಕಿದ ತಕ್ಷಣ ನಿದ್ದೆ ಮಾಡೋ ಪುಣ್ಯ ಪುರುಷ."
"ಅಲ್ರೀ ಗೋವಿಂದರಾವ್ – ಮದುವೆ ಮಾತೆತ್ತಿದರೆ ಸಾಕು, ನಿಮ್ಮ ತಮ್ಮ ಸಿಡಿ
ಮಿಡಿಯಾಗ್ತಾನಲ್ಲ. ಯಾಕೆ ?”
"ಅದೊಂದು ರಾಮಾಯಣ. ಈಗ ಬೇಡ ಆ ವಿಷಯ. ನೀನು ಮಲಕೋ."
"ಬೆಳಗ್ಗೆ ನಿಮ್ಮ ತಂದೇನೂ ಬರ್ತಾರೆ ಹಾಗಾದ್ರೆ."
"ಹ್ಞ. ಒಂಭತ್ತಕ್ಕೆ ಇಲ್ಲಿಂದ ಗಾಡಿ ಬಿಡೋಣ. ಹತ್ತು ಘಂಟೆ ಬಸ್ಸು ಸಿಗಬಹುದು."
"ಹಹ್ಞ. ನಡಕೊಂಡು ಹೋಗೋದಕ್ಕೆ ನೀವು ಗಾಡಿಬಿಡೋದು ಅಂತೀರಲ್ಲ, ಹಹ್ಞ!"
-–ಅದೊಂದು ರಾಮಾಯಣ. ಪದ್ಮನಾಭ ತನ್ನನ್ನು ಕೇಳಿದ : ಯಾರು ರಾವಣ ?
ನೀನೇ ತಾನೆ ? ಸುಬ್ಬಿಯನ್ನು ಅಪಹರಿಸಿಕೊಂಡು ಅಶೋಕವನಕ್ಕೆ ತೆರಳಿದವನು ನೀನೆಯೆ ?
-–ಈಗ ಬೇಡ ಆ ವಿಷಯ. ಮತ್ತೆ ಯಾವಾಗ ? ತಾನಿಲ್ಲದಿದ್ದಾಗ. ಅವರಿಬ್ಬರೇ