ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ನೋವು ೧೨೫
ಉಳಿದಾಗ. ಸಂಪೂರ್ಣ ರಾಮಾಯಣವೊ, ವನವಾಸದ ತನಕವೊ ? ಅಂತೂ ತಾನೊಬ್ಬ ಕೆಟ್ಟವನು. ಒಡಹುಟ್ಟಿದವನೇ ಹಾಗೆ ಹೇಳಬೇಕಾದರೆ ಉಳಿದವರು ಏನೆನ್ನಬೇಡ ? ಪದ್ಮನಾಭ ನಿಟ್ಟುಸಿರುಬಿಟ್ಟ. ಹೊರಗೆ ಮಳೆ ಸುರಿಯತೊಡಗಿತು. ನಡುರಾತ್ರೆಯವರೆಗೆ ಮಳೆ ಚೆನ್ನಾಗಿ ಬಂತು. ಆಮೇಲೆ ಕಡಮೆಯಾಗಿ ನಿಂತು ಹೋಯಿತು. ದೊಡ್ಡಮ್ಮ ನಿದ್ದೆ ಹೋದುದು ಹೊರಗೆ ಸದ್ದೆಲ್ಲವೂ ಅಡಗಿದ ಬಳಿಕ. ಆವರೆಗೂ ಅವರು ಚಿಂತಿಸುತ್ತಲಿದ್ದರು : ಮದುವೆಯ ವಿಷಯದಲ್ಲಿ ಸ್ವಲ್ಪ ಅವಸರ ಮಾಡಿದಂತಾಯ್ತೆ ? ಪ್ರಶ್ನೆಗೆ ಅವರೇ ಉತ್ತರವೀಯುತ್ತಿದ್ದರು. ಇಲ್ಲ, ಅವಸರದ ಮಾತೇ ಇಲ್ಲ. ಈ ವರ್ಷವೇ ಇಬ್ಬರ ಮದುವೆಗಳನ್ನೂ ಮಾಡಿ ಮುಗಿಸುವುದು ಲೇಸು. ಪದ್ಮನೊಡನೆ ಮಾತನಾಡುವುದು ಉಳಿದಿತ್ತು. ಬೆಳಗ್ಗೆ ಎದ್ದೊಡನೆಯೇ ಆ ಕೆಲಸ ವನ್ನು ತಾವು ಮಾಡಬೇಕು...... ...ಬೆಳಗ್ಗೆ ಎದ್ದವರು, ಹೊಲದ ಆ ದಿನದ ದುಡಿಮೆಗೆ ಸಂಬಂಧಿಸಿ ಮಗನ ಯೋಚನೆ ಏನೆಂಬುದನ್ನು ಕೇಳಿ ತಿಳಿದು ಸಲಹೆ ನೀಡಿದರು. "ನೀನು ನಗರಕ್ಕೆ ಹೋಗೋನು. ಸ್ನಾನ ಉಪಾಹಾರ ಮುಗಿಸ್ಕೊಂಡು ಹೊರಡು. ಇಲ್ಲೀದೆಲ್ಲ ಗೋಪು ನೋಡ್ಕೊತಾನೆ," ಎಂದರು ಮಗನೊಡನೆ. ಅಡುಗೆ ಮನೆಗೆ ತೆರಳಿ ಹಿರಿಯ ಮೊಮ್ಮಗನ ಮಡದಿ ಭಾಗೀರಥಿಗೆ ನಿರ್ದೇಶಗಳನ್ನು ನೀಡಿದರು. ಬೇಗನೆ ಸ್ನಾನ ಮಾಡಿ ಕಿರಿಯ ಮೊಮ್ಮಗನನ್ನು ದೊಡ್ಡಮ್ಮ ದೇವರ ಮನೆಗೆ ಕರೆದರು, ಅದೇ ಆಗ ಮುಖಮಾರ್ಜನ ಮಾಡಿಕೊಂಡು ಪಡಸಾಲೆಗೆ ಮರಳುತ್ತಿದ್ದ ಪದ್ಮನಾಭ. "ಯಾಕೆ ದೊಡ್ಡಮ್ಮ ? ನನ್ನದಿನ್ನೂ ಸ್ನಾನ ಆಗಿಲ್ಲ," ಎಂದ. "ಪರವಾಗಿಲ್ಲ. ಒಳಗ್ಬಾ. ಚಿಕ್ಕ ಹುಡುಗರದೇನು ಮಹಾ ಮೈಲಿಗೆ?" ಎಂದರು ದೊಡ್ಡಮ್ಮ. ಪದ್ಮ ದೇವರ ಮನೆಯೊಳಕ್ಕೆ ಕಾಲಿರಿಸಿದಾಗ, "ಬಾ ಕೂತ್ಕೊ," ಎಂದರು. ದೊಡ್ಡಮ್ಮ ಈಗ ಮಾತನಾಡಲಿರುವುದು ಇಂಥದೇ ವಿಷಯ ಎಂದು ಊಹಿಸಿದ ಪದ್ಮನಾಭ, " ಏನು ಸಮಾಚಾರ ?" ಎಂದು ಕೇಳಿದ. "ನಾನೊಂದು ಕೇಳ್ತೀನಿ, ನಡಸ್ಕೊಡ್ತೀಯಾ ಪದ್ಮ ?" "........." "ಅಕಾ, ಸುಮ್ಮನಾದೆ. ನಿನ್ನನ್ನ ಯಾವತ್ತಾದರೂ ಏನಾದರೂ ನಾನು ಕೇಳಿದೀನಾ ?" "ನಾನು ಚಿಕ್ಕೋನು. ನನ್ನಲ್ಲಿ ಏನಿರುತ್ತೆ ದೊಡ್ಡಮ್ಮ ಕೊಡೋಕೆ ?" "ನಿನ್ನ ತಾಯಿ ಇದ್ದಿದ್ರೆ ಈ ಕೆಲಸ ಅವಳೇ ಮಾಡ್ತಿದ್ಲು. ಅವಳಿಲ್ಲಾಂತ ಈ ಇಳಿ ವಯಸ್ನಲ್ಲಿ......" "ಅದೇನು ಹೇಳ್ಬಿಡು, ದೊಡ್ಡಮ್ಮ."