ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ನೋವು ೩೫
"ಸುಬ್ಬಿಗೆ ಜ್ವರ ಎಂಗೈತೆ?”
"ಬಿಟ್ಟೆ ಇಲ್ಲ," ಎಂದರು ನಾಗಮ್ಮ.
ತೆರೆದ ಕಣ್ಣುಗಳಿಂದ ಛಾವಣಿ ನೋಡುತ್ತ ಸುಮ್ಮನಿದ್ದರು ಗೌಡರು,
ನಾಗಮ್ಮನೇ ಅಂದರು:
"ಅಯ್ಯೋರ ಮನೆಗೋಗಿ ಅವುಸದಿ ತರಬೇಕು."
ಗೌಡರು ಏನನ್ನೂ ಹೇಳಲಿಲ್ಲ.
ಸ್ವಲ್ಪ ಹೊತ್ತಿನಲ್ಲಿಯೇ ಕೊಟ್ಟಿಗೆಯ ಕೆಲಸಕ್ಕೆಂದು ಮನೆಯ ಆಳು ಕರಿಯನೂ ಅವನ ಹೇಂಡತಿಯೂ ಬಂದರು.
ಹಕ್ಕಿಗಳು ಚಿಲಿಪಿಲಿಗುಟ್ಟಿದುವು ದನಕರುಗಳು ಅಂಬಾ ಎಂದುವು. ಕೋಳಿಗಳು, ನಮ್ಮ ಕರ್ತವ್ಯ ನಾವು ನಿರ್ವಹಿಸಿದ್ದೇವೆ, ನೀವು ಎದ್ದಿದೀರಿ, ತುಂಬಾ ಸಂತೋಷ-ಎನ್ನುವಂತೆ
ಮತ್ತೊಮ್ಮೆ ಕೊ ಕೊ ಕೋ ಎಂದು ರಾಗವೆಳೆದುವು.
ನಿದ್ರಾವಸ್ಥೆಯನ್ನು ಕಳೆದು ಏಳುತ್ತಿದ್ದ ಜಗತ್ತಿನ ಬಗೆಬಗೆಯ ಧ್ವನಿಗಳಿಗೆ ಕಿವಿಗೊಡುತ್ತ ಗೌಡರು ಮಲಗಿದರು.
ಶ್ರೀನಿವಾಸಯ್ಯನನ್ನು ತಾವು ಕಾಣುವುದು ಖಂಡಿತ. ಅದೂ ವಿಲಂಬವಿಲ್ಲದೆ ಈ ದಿನವೇ. ಆದರೆ ಅದೇ ಮನೆಗೆ ಹೋಗಿ ಆ ಮಹಾತಾಯಿಯ ಮುಂದೆ ನಿಂತು, ಮಗಳಿಗೆ ಜ್ವರ, ಔಷಧಿ ಕೊಡಿ, ಎಂದು ಹೇಗೆ ಕೇಳಲಿ? ಈ ಜ್ವರ ಇಳಿದು ಸುಭದ್ರೆ ಓಡಾಡುವಂತಿದ್ದರೆ ಚೆನ್ನಾಗಿ ರುತ್ತಿತ್ತು. ಅವಳಿಗೂ ಬುದ್ದಿ ಮಾತು ಹೇಳುವುದಿದೆಯಲ್ಲ?
ಇನ್ನು ಏಳಬೇಕು ಎಂದು ಎರಡು ಮೂರು ಸಾರೆ ಅಂದುಕೊಂಡರು ಗೌಡರು. ಆದರೆ
ದೇಹ 'ನನ್ನಿಂದಾಗದು' ಎನ್ನುತ್ತಿತು.
"ಅತ್ತೇ..."
ಸುಭದ್ರೆ ಮಲಗಿದ್ದ ಕೊಠಡಿಯಿಂದ ಅವಳ ಧ್ವನಿ ಕ್ಷೀಣವಾಗಿ ಕೇಳಿಬಂತು. ಮಗಳದೇ ಸ್ವರ ಎಂದು ಅರಿತ
ಗೌಡರ ಕಿವಿ ನಿಮಿರಿತು.
ಆವರೆಗೂ ಏಳಲಾಗದೆ ಮಲಗಿದ್ದ ಗೌಡರು ತಕ್ಷಣವೆ ಎದ್ದರು. ಏನು ಬೇಕಾಗಿದೆಯೋ ಮಗುವಿಗೆ?-ಎನ್ನುತ್ತ ಆ ಕೋಣೆಯತ್ತ ಧಾವಿಸಿದರು. ಬುಡ್ಡಿ ದೀಪದ ಮಬ್ಬು ಬೆಳಕಿನಲ್ಲಿ ಮಗಳ ಮುಖ ಗೌಡರಿಗೆ ಕಾಣಿಸಿತು. ಹುಟ್ಟಿದ್ದಾಗಲೇ ತಾಯಿಯನ್ನು ಕಳೆದುಕೊಂಡ ತಬ್ಬಲಿ ಕೂಸು. ಇಷ್ಟು ವರ್ಷ ಬೆಳೆಸಿ ದೊಡ್ಡದು ಮಾಡಿ ಇನ್ನೊಂದು ಮನೆಗೆ ಕಳಿಸಬೇಕು ಎನ್ನುಷ್ಟರಲ್ಲೆ – ಹೀಗೆ. ಗೌಡರ ಕರುಳು ತುಡಿಯಿತು.
“ಏನ್ಸೇಕು ಮಗೂ?”
"ಅಪಾ..."
“ಏನಮ್ಮಿ ?”
( ಎಷ್ಟೊಂದು ಕಾಲವಾಯಿತು ಮಗಳನ್ನು ಹೀಗೆ ತಾವು ಸಂಬೋಧಿಸಿ ? )
"ಅತ್ತೆಮ್ಮನ್ನ ಕರೀರಿ."
ಏನೋ ಕುಟುಕಿದಂತಾಯಿತು ಗೌಡರಿಗೆ. ತಮ್ಮೊಡನೆ ಹೇಳಲಾರದ ವಿಷಯವೆ ?