ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೬ ನೋವು
ತಮಗಿಂತ ಹೆಚ್ಚಿನವಳಾದಳೆ ನಾಗಮ್ಮ ? ಹಾಗೆ ಯೋಚಿಸಿದವರಿಗೆ ಬೇರೆಯೂ ಒಂದಂಶ ಹೊಳೆಯಿತು. ಈ ಕಂದ ಎಳೆಯ ಮಗುವಲ್ಲ,ಬೆಳೆದ ಹುಡುಗಿ. ಹೆಂಗಸಿನೊಡನೆ ಆಡುವ ಮಾತು ಇದ್ದೀತು. ಜಲಬಾಧೆಯೊ, ಇನ್ನೇನು ಅವಸರವೊ, ಪಾಪ. ಗೌಡರು ಸರಕ್ಕನೆ ತಿರುಗಿ ಅಡುಗೆ ಮನೆಗೆ ಹೋದರು. ಅಲ್ಲಿಂದ ಹಿತ್ತಿಲ ಬಾಗಿಲಿಗೆ ನಡೆದರು. ಅಲ್ಲಿ ನಾಗಮ್ಮ ಬಣವೆಯಿಂದ ಒಣಹುಲ್ಲನ್ನೆತ್ತಿಕೊಂಡು ಹೋರಿಗಳತ್ತ ಹೋಗುತ್ತಲಿದ್ದರು. ಕಾತರ ತುಂಬಿದ ಸ್ವರದಲ್ಲಿ ಗೌಡರೆಂದರು : "ನಾಗೂ, ಸುಬ್ಬಿ ಕೂಗತಾ ಅವಳೆ.ಬಿರ್ರನೆ ಬಾ." ಎದೆಗೆ ಆತುಕೊಂಡಿದ್ದ ಹುಲ್ಲನ್ನು ಕೆಳಕ್ಕೆ ಚೆಲ್ಲಿ ನಾಗಮ್ಮ ಒಳಕ್ಕೆ ಓಡಿದರು.ತಂಗಿಯನ್ನು ಗೌಡರು ನಿಧಾನವಾಗಿ ಹಿಂಬಾಲಿಸಿದರು. ಪಡಸಾಲೆಯಲ್ಲಿದ್ದ ಅವರಿಗೆ, ಸುಭದ್ರೆ ಎದ್ದು ನಿಲ್ಲಲು ನಾಗಮ್ಮ ನೆರವಾಗುತ್ತಿದ್ದುದು ಕಂಡಿತು. ಸುಭದ್ರೆಗೆ ತೋಳಿನ ಆಸರೆಯಿತ್ತು ನಡೆಸುತ್ತ ಬಂದ ನಾಗಮ್ಮ, ಅಣ್ಣನನ್ನು ಉದ್ದೇಶಿಸಿ ಅ೦ದರು: - "ಏನಿಲ್ಲ. ಬಚ್ಚಲು ಮನೆಗೆ ಓಗ್ಬೀಕಂತೆ. ನೀನು ಮನಿಕ್ಕೊ." ಗೌಡರು ನಿಟ್ಟುಸಿರುಬಿಟ್ಟರು. ಮತ್ತೆ ಮಲಗುವುದು ಅವರಿಗೆ ಬೇಕಾಗಿರಲಿಲ್ಲ. ಗೋಡೆಯ ಗೂಟದಲ್ಲಿ ತೂಗಾಡುತ್ತಿದ್ದ ಅಂಗಿಯನ್ನು ತೊಟುಕೊಂಡು, ಅಂಗವಸ್ತ್ರವನ್ನು ಹೆಗಲ ಮೇಲೇರಿಸಿ, ಎಕ್ಕಡ ಮೆಟ್ಟಿಕೊಂಡು ಅವರು ಮನೆಬಿಟ್ಟರು. ತೋಟದ ಕಡೆಗೆ ನಡೆದರು. ಮಾದ ಎದ್ದಂತೆ ಕಾಣಿಸಲಿಲ್ಲ [ಮುನಿಯನನ್ನು ಮಣ್ಣು ಮಾಡುವ ಕೆಲಸ ಮುಗಿಸಿ ತಡವಾಗಿ ಆತ ಹಟ್ಟಿಗೆ ಮರಳಿರಬೇಕು]. ತೋಟವನ್ನು ಬಿಟ್ಟು ಗೌಡರು ಹೊಲಗಳತ್ತ ತಿರುಗಿದರು. ಅರುಣೋದಯದ ಫಲವಾಗಿ ದೂರದಲ್ಲಿ ಮೂಡಲು ರಕ್ತರಂಜಿತವಾಗಿತು, ಏರಿಯ ಮೇಲೆ ಹೆಜ್ಜೆ ಹಾಕಿದರು. ನೀರ ಕಾಲುವೆ ದಾಟಿ, ನದಿಯತ್ತ ಹೊರಳಿದರು. ಬೇಸಗೆಯಲ್ಲಿ ಬಡವಾಗಿ ಕಿರಿದಾಗಿ ಹರಿಯುತ್ತಿದ್ದ ಹೊಳೆ. ನದೀ ಪಾತ್ರ ತುಂಬ ಬಿಳಿಯ ಮರಳು, ಮೇಲು ದಿಕ್ಕಿನಲ್ಲಿ ನದಿಯ ದಡವನ್ನು ತಲಪಿದ ಗೌಡರು ಹೊಳೆಯುದ್ದಕ್ಕೂ ಕೆಳಕ್ಕೆ ದೃಷ್ಟಿ ಹಾಯಿಸಿದರು. ಮನುಷ್ಯರ ಮಾತಿನ ಧ್ವನಿ ಕೇಳಿಸಿತು. ['ಹಳ್ಳಿಯವರೆದ್ದಿದ್ದಾರೆ. ನೀರು ಒಯುತ್ತಿರಬೇಕು!'] ಬೀಸುತ್ತಿದ್ದ ತಣುಪು ಗಾಳಿಗೆ ಮೈಯೊಡ್ಡಿ ಗೌಡರು ನಿಂತಲ್ಲೆ ನಿಂತರು. ಒಂದಿನ ದಿನ ಮುನಿಯನನ್ನು ಕೊಲೆ ಮಾಡಿದ್ದರು, ಧೂರ್ತ ಹುಡುಗನೊಬ್ಬ ತಮ್ಮ ಮಗಳ ಅಪಕ್ವ ಮನಸ್ಸಿನ ಲಾಭ ಪಡೆಯಲೆತ್ನಿಸಿದ್ದ. ಆದರೂ ಕಣಿವೇಹಳ್ಳಿಯ ವಾತಾವರಣ ಪ್ರಶಾಂತವಾಗಿತ್ತು, ಇರುಳು ಕಳೆದು ಬೆಳಗಾದೊಡನೆಯೇ ನಿತ್ಯ ವ್ಯಾಪಾರದಲ್ಲಿ ಹಳ್ಳಿ ಮತ್ತೆ ನಿರತವಾಗಿತ್ತು... ...ಗೌಡರು ದೇಹಬಾಧೆ ತೀರಿಸಿಕೊಂಡರು. ಹರಿಯುತ್ತಿದ್ದ ನೀರನ್ನು ಅಂಗೈಗಳಿಂದ ಎತ್ನಿ ಮುಖಕ್ಕೆ ಎರಚಿ ಬರಿಯ ಬೆರಳಿನಿಂದ ಹಲ್ಲುಜ್ಜಿ ಮುಖ ಮಾರ್ಜನ ಮಾಡಿದರು.