೫೩
ಉ೦ಡೇವು?"
“ನಿಜ ಕಣೋ. ಅದಕ್ಕೇ ನಾನು ಹೇಳೋದು. ಊರಿಗೇ ಬೆಂಕಿ ಬಿದ್ದಿದೆ ಅನ್ನೋ ಹಾಗೆ ಆಡ್ಬೇಡ. ಏನೋ ಒಂದು ಮಾತಾಯ್ತು. ಅದನ್ನ ಮರೆತು ಬಿಡ್ಬೇಕು."
"ಹು೦.ಪದ್ಮನಿಗೆ ನಾಲ್ಕು ಬಾರಿಸಿದ್ಮೇಲೆ ಮರೆಯೋದು ಸುಲಭವಾಗುತ್ತೆ."
“ ಅದನ್ನ ನನಗೆ ಬಿಟ್ಬಿಡು, ಶೀನ."
"ಕಿರಿಯ ಮೊಮ್ಮಗ ಅಂತ ನೀನು ಮುದ್ದಿಸಿ ಮುದ್ದಿಸಿ ಅವನು ಹಾಳಾಗಿ ಹೋಗಿದಾನೆ."
"ಇರಬಹುದು. ಹಾಳಾಗಿ ಹೋಗಿದ್ದರೆ ನಾನೇ ಸರಿಪಡಿಸ್ತೀನಿ."
" ಹಾಗಾದರೆ ನಾನು ಕೈ ಬಿಟ್ಟೆ. ನೀನುಂಟು, ನಿನ್ನ ಮೊಮ್ಮಗನುಂಟು. ಏನು ಬೇಕಾದರೂ ಮಾಡ್ಕೊಳ್ಳಿ."
"ನೀನು ಸುಮ್ನಿದ್ದು ಬಿಡು, ಶೀನ. ಎಲ್ಲಾ ಸರಿಹೋಗುತ್ತೆ."
“ಆಗಲಮ್ಮಾ, ಆಗಲಿ."
ದೊಡ್ಡಮ್ಮನ ಮನಸ್ಸು ಆತಂಕಕ್ಕೆ ಒಳಗಾಗಿರಲಿಲ್ಲ ಎಂದಲ್ಲ. ಆದರೆ ಆ ದುಗುಡವನ್ನು ಹೊರಗೆ ತೋರಿಸಿಕೊಳ್ಳುವಂತಿತ್ತೆ ? ಮನೆಯೊಳಗಿನ ಸಣ್ಣ ವಿಷಯ (ಹೋಗಲಿ,ದೊಡ್ಡದೇ ಆದರೂ) ಮನೆಯೊಳಗೇ ಇತ್ಯರ್ಥವಾಗಬೇಕು; ಆಳುಗಳು ಆಡಿಕೊಳ್ಳುವಂತಾಗಬಾರದು. ಉಗುರಿನಿಂದ ಆಗುವುದಕ್ಕೆ ಕೊಡಲಿ ಎತ್ತಬೇಕೆ?
ಮಗನೊಡನೆ ದೇವರ ಮನೆಯಲ್ಲಿ ಮಾತು ಆದ ಸ್ವಲ್ಪ ಹೊತ್ತಿನಲ್ಲಿ ಹಿತ್ತಿಲ ಬಾಗಿಲಿನಿಂದ ಪದ್ಮನಾಭ ಒಳಬಂದುದನ್ನು ದೊಡ್ಡಮ್ಮ ಕಂಡರು.
ಪಡಸಾಲೆಯಲ್ಲಿದ್ದ ಶ್ರಿನಿವಾಸಯ್ಯನವರ ಕಣ್ಣುಗಳು ಮಗನನ್ನು ನೋಡಿ ಕಿಡಿಕಾರಿದುವು.ಅತೀವ ತಿರಸ್ಕಾರದ ಭಾವನೆಯಿಂದ ಅವರ ಮುಖದ ಸ್ನಾಯುಗಳು ಮಿಸುಕಿದುವು.
ತಂದೆ-ಅಜ್ಜಿಯ ಸಂವಾದ ಪದ್ಮನಾಭನಿಗೆ ಕೇಳಿಸಿರಲಿಲ್ಲವಾದರೂ, ತನ್ನ ಬದುಕಿನ ದುರ್ಭರ ಘಳಿಗೆಯೊಂದು ಒದಗಿ ಬಂದುದನ್ನು ಅವನು ಅರಿತಿದ್ದ. ಸ್ವಲ್ಪ ಹೊತ್ತಿನ ಮಟ್ಟಿಗೆ ಮನೆಯಿಂದ ಹೊರಹೋಗುವುದೊಳಿತೆಂದು ಬಟ್ಟೆ ಬರೆ ಹಾಕಿಕೊಳ್ಳತೊಡಗಿದ.
ಅಷ್ಟರಲ್ಲಿ ದೊಡ್ಡಮ್ಮ ಒಳಕ್ಕೆ ಬಂದರು. ತಮ್ಮ ಹಿಂದೆ ಬಾಗಿಲು ಮುಚ್ಚಿ ಅಗಣಿ ಹಾಕಿದರು.
"ಎಲ್ಲಿಗೆ ಹೊರಟೆ?" ಎಂದು ಅವರು ಕೇಳಿದರು.
"ಎಲ್ಲಿಗೂ ಇಲ್ಲ, ಹೀಗೇ..."
"ಇವತ್ತು ಕೆಟ್ಟ ದಿವಸ ಪದ್ಮ. ಮನೆ ಬಿಟ್ಟು ಹೋಗ್ಬೇಡ."
"........."
ಉಡುಪು ಬದಲಾಯಿಸುವ ಕೆಲಸವನ್ನು ಪದ್ಮನಾಭ ಅರ್ಧಕ್ಕೇ ನಿಲ್ಲಿಸಿದ.
"ನನಗೆ ಎಪ್ಪತ್ತೈದು ದಾಟಿತು, ಪದ್ಮ."
" ಬಳಸು ಮಾತು ಯಾಕೆ ದೊಡ್ಡಮ್ಮ? ಏನಿದೆಯೋ ಹೇಳಿ ಬಿಡು.”
" ಇನ್ನು ಹೆಚ್ಚು ವರ್ಷ ನಾನು ಬದುಕೋದಿಲ್ಲ, ಮಗೂ."
"........"
"ಇಷ್ಟು ಕಾಲ ನನಗೆ ಅದು ಬೇಕು ಇದು ಬೇಕು ಅಂತ ನಾನು ಬಾಯಿ ಬಿಟ್ಟು ಕೇಳಿಲ್ಲ...