ಪುಟ:ಪರಂತಪ ವಿಜಯ ೨.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೧೨

೯೩




ಇವಳ ತಾಪವನ್ನು ನೋಡಿ, ಸತ್ಯಶರ್ಮನು ರತ್ನಾಕರಕ್ಕೆ ಪ್ರಯಾಣಮಾಡಿದನು. ಸತ್ಯಶರ್ಮನು ಹೊರಟುಹೋದ ಸ್ವಲ್ಪ ಹೊತ್ತಿನಲ್ಲಿ, ಕಾಮಮೋಹಿನಿಗೆ ಬರೆಯಲ್ಪಟ್ಟ ಮೇಲು ವಿಳಾಸವುಳ್ಳ ಒಂದು ಲಕೋಟು ಕಿಟಕಿಯಿಂದ ಮನೆಯೊಳಕ್ಕೆ ಬಿದ್ದಿತು. ಸತ್ಯಶರ್ಮನ ಹೆಂಡತಿಯು, ಅದನ್ನು ತೆಗೆದುಕೊಂಡು ಮೇಲುವಿಳಾಸವನ್ನು ನೋಡಿ, ಕಾಮಮೋಹಿನಿಗೆ ಕೊಟ್ಟಳು. ಅವಳು ಬಹಳ ಆತುರದಿಂದ ಲಕ್ಕೋಟನ್ನು ಒಡೆದು ಓದಿ, ಸಿಡಿಲಿನಿಂದ ಹೊಡೆಯಲ್ಪಟ್ಟಂತೆ ಮೂರ್ಛಿತಳಾದಳು. ಅದರಲ್ಲಿ ಬರೆದಿದ್ದುದೇನೆಂದರೆ:-
    ಕಾಮಮೋಹಿನಿ!
   ನಿನ್ನ ಗಂಡನು ರತ್ನಾಕರಕ್ಕೆ ಹೋಗಬೇಕೆಂದು ನನ್ನನ್ನು ಕರೆದನು. ಈ ಸ್ಥಳವು ಭೂತ ಪ್ರೇತ ಪಿಶಾಚಗಳಿಂದ ತುಂಬಲ್ಪಟ್ಟಿದೆಯೆಂಬುದಾಗಿಯೂ ಅಲ್ಲಿಗೆ ಹೋದರೆ ಪ್ರಾಣವೇ ಉಳಿಯಲಾರದೆಂಬುದಾಗಿಯೂ ನಾನು ಹೇಳಿದೆನು. ನನ್ನ ಮಾತುಗಳನ್ನು ಅವನು ನಿರಾಕರಿಸಿದನು. ರತ್ನಾಕರದ ಬಂಗಲೆಗೆ ಇವನು ಪ್ರಥಮತಃ ಪ್ರವೇಶಿಸಿದನು. ಕೂಡಲೆ ಒಂದು ಭಯಂಕರವಾದ ಭೂತವು ಬಂದಿತು. ಅದನ್ನು ನೋಡಿದ ಕೂಡಲೆ, ನಾನು ಭಯಪಟ್ಟು ಓಡಿಹೋದೆನು. ಪರಂತಪನು ಅದರೊಡನೆ ಕಾದುವುದಕ್ಕೆ ಉದ್ಯೋಗಮಾಡಿದನು. ಅದು ಅವನನ್ನು ಅಂತರಿಕ ಕೈ ಎತ್ತಿಕೊಂಡು ಹೋಗಿ ಅವನನ್ನು ಕೊಂದು ಬಿಸುಟಿತು. ಅವನ ಶವವು ರತ್ನಾಕರದ ಪಶ್ಚಿಮದಲ್ಲಿರುವ ಸಮುದ್ರಕ್ಕೆ ಬಿದ್ದು ಜಲಚರಗಳಿಗೆ ಆಹಾರ ವಾಯಿತು. ಮಿತ್ರನನ್ನು ಕಳೆದುಕೊಂಡ ನನಗೆ ಎಷ್ಟೋ ಸಂಕಟವಾಗುತ್ತದೆ. ಇಂಥ ಪತಿಯನ್ನು ಕಳೆದುಕೊಂಡ ನಿನ್ನ ದುಃಖಕ್ಕೆ ಪಾರವೇ ಇಲ್ಲ. ದೇವರು ನಿನ್ನನ್ನು ಕಾಪಾಡಬೇಕು. ಅವನಿಗೆ ಕ್ರಿಯಾದಿಗಳನ್ನು ಮಾಡಿ ಸದ್ಗತಿಯನ್ನು ಕಾಣಿಸು. ನಾನು ನನ್ನ ದೇಶಕ್ಕೆ ಹೋಗುವೆನು.
               ಅರ್ಥಪರ
  ಮೂರ್ಛೆ ಹೋಗಿದ್ದ ಕಾಮಮೋಹಿನಿಗೆ, ಸತ್ಯಶರ್ಮನ ಹೆಂಡತಿಯು ಅನೇಕ ಶೈತ್ಯೋಪಚಾರಗಳನ್ನು ಮಾಡಿದಳು. ಅವಳು ಸ್ವಲ್ಪ ಚೇತರಿಸಿ ಕೊಳ್ಳುತಲೂ, ಪುನಃ ಮೂರ್ಛೆ ಹೊಂದುತಲೂ, ರಾತ್ರಿ ಹನ್ನೆರಡು ಘಂಟೆಯ ವರೆಗೂ ಬಹಳ ವ್ಯಾಕುಲಪಡುತ, ಗಳಿಗೆಗೊಂದು ಸಲ ಮೂರ್ಛೆಯನ್ನೂ ಪ್ರಜ್ಞೆಯನ್ನೂ ಅನುಭವಿಸುತಿದ್ದಳು. ಕೊನೆಗೆ ಸತ್ಯಶರ್ಮನು ಪರಂತಪನ