ಪುಟ:ಪರಂತಪ ವಿಜಯ ೨.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೫

೪೫


ಯವನ್ನು ತಿಳಿದುಕೊಳ್ಳದೆ, ನನ್ನಲ್ಲಿ ನೀನು ಅತ್ಯಂತಾನುರಾಗವನ್ನು ತೋರಿದುದು ನನಗೆ ಬಹಳ ಆಶ್ಚರ್ಯವನ್ನುಂಟುಮಾಡುತ್ತದೆ. ವಿವಾಹಮಾಡಿಕೊಳ್ಳುವ ವಧೂವರರು, ಪರಸ್ಪರಾನುರಕ್ತರಾಗಿರಬೇಕು; ಅಥವಾ, ಉದಾಸೀನರಾಗಿಯಾದರೂ ಇರಬೇಕು ನೀನು ನನ್ನಲ್ಲಿಟ್ಟಿರುವ ಅತ್ಯಂತಾನುರಾಗಕ್ಕೆ ಸರಿಯಾಗಿ ನಿನ್ನಲ್ಲಿ ನನಗೆ ಲೇಶಮಾತ್ರವಾದರೂ ಪ್ರೀತಿಯಿಲ್ಲ; ಕೊನೆಗೆ ಉದಾಸೀನತೆಯೂ ಕೂಡ ಇಲ್ಲ. ಪರಂತು, ನಿನ್ನ ಸಂಭಾಷಣೆಯನ್ನೂ, ಸಹವಾಸವನ್ನೂ, ಕೊನೆಗೆ ನೀನು ವಾಸಮಾಡುವ ಪಟ್ಟಣದಲ್ಲಿ ವಾಸವನ್ನೂ ಕೂಡ ಮಾಡಬಾರದೆಂದು, ನಾನು ದೃಢವಾಗಿ ಸಂಕಲ್ಪಿಸಿರುವೆನು. ಪ್ರಾಣವನ್ನಾದರೂ ಬಿಡುವೆನೇ ಹೊರತು, ನಾನು ನಿನ್ನನ್ನು ವಿವಾಹ ಮಾಡಿಕೊಳ್ಳುವವಳಲ್ಲ. ನನ್ನಲ್ಲಿ ವ್ಯಾಮೋಹವನ್ನು ಬಿಟ್ಟು ನಿನಗೆ ಅನುರೂಪಳಾದ ಸ್ತ್ರೀಯನ್ನು ಹುಡುಕಿ ವಿವಾಹ ಮಾಡಿಕೊಂಡು ಸುಖವಾಗಿರು. ಈ ನನ್ನ ಬುದ್ಧಿವಾದವನ್ನು ಕೇಳಿದರೆ, ಇದರಿಂದ ನಮ್ಮಿಬ್ಬರಿಗೂ ಒಳ್ಳೆಯದಾಗುವುದು; ಇಲ್ಲದ ಪಕ್ಷದಲ್ಲಿ, ನಾವಿಬ್ಬರೂ ನಮ್ಮ ಬಂಧು ಬಳಗಗಳೊಡನೆ ಬಹಳ ಸಂಕಟಕ್ಕೆ ಗುರಿಯಾಗಬೇಕಾಗುವುದು. ಚೆನ್ನಾಗಿ ಪರ್ಯಾಲೋಚಿಸಿ, ನನ್ನ ಮೇಲಿನ ಆಶೆಯನ್ನು ಪರಿತ್ಯಾಗಮಾಡಿ, ನಿನಗೆ ಅನುರೂಪಳಾದ ಸ್ತ್ರೀಯನ್ನು ಪಡೆದುಕೊಂಡು, ನೀನು ಸುಖವಾಗಿ ಬಾಳುವೆಯೆಂದು ನಂಬಿರತಕ್ಕ,
                      ನಿನ್ನ ಸಹೋದರಿಯಾದ
                         ಕಾಮಮೋಹಿನಿ.
  ಈ ಕಾಗದವನ್ನು ಓದಿದ ಕೂಡಲೆ, ಶಂಬರನಿಗೆ ಬಹುಕ್ಲೇಶವುಂಟಾಯಿತು. ಈ ಕ್ಷೇಶವು ಕ್ರಮಕ್ರಮವಾಗಿ ಪೂರ್ವಾಪರಜ್ಞತೆಯನ್ನು ತಪ್ಪಿಸಿತು.
ಶಂಬರ-ಸುಮಿತ್ರನೆ !ಇವಳಿಗೆ ನನ್ನಲ್ಲಿ ಇಷ್ಟು ದ್ವೇಷವಿರಲಿಲ್ಲ. ಈ ಲೇಖನವನ್ನು ನೋಡಿದರೆ, ಇವಳ ಮನಸ್ಸು ಬಹಳ ಕ್ರೂರವಾಗಿ ಮಾರ್ಪಡಿಸಲ್ಪಟ್ಟಿದೆಯೆಂದೂ ಇದಕ್ಕೆ ಪರಂತಪನು ಮುಖ್ಯ ಕಾರಣವೆಂದೂ ತೋರುತ್ತದೆ. ಇವನು ನಮ್ಮ ಮನೆಗೆ ಬಂದಾರಭ್ಯ, ಇವಳ ನಡತೆಯಲ್ಲಿ ಬಹಳ ಬದಲಾವಣೆಯುಂಟಾಗಿದೆ. ಇವನಿಗೆ ತಕ್ಕ ಪ್ರತೀಕಾರವನ್ನು ಮಾಡುತ್ತೇನೆ.
  ರೋಷವೇಶದಿಂದ ಪಿಸ್ತೂಲನ್ನು ತೆಗೆದು, ಅದನ್ನು ಸರಿಯಾಗಿ ಬಾರ್ಮಾಡಿಕೊಂಡು ಹೊರಡುವುದಕ್ಕೆ ಉದ್ಯುಕ್ತನಾದನು.