ಪುಟ:ಪರಂತಪ ವಿಜಯ ೨.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೯

೭೯


ಅರ್ಥಪರ- ಈ ದಿನ ಹನ್ನೊಂದುಘಂಟೆಯ ವೇಳೆಯಲ್ಲಿ ಆ ವುಯಿಲನ್ನು ರಿಜಿಸ್ಟರ್ ಮಾಡಿಸುವುದಕ್ಕಾಗಿ ಹೋಗಿದ್ದೆವು. ಇದಕ್ಕೆ ಮೊದಲೇ ನಾನು ಕಛೇರಿಯ ನೌಕರರಿಗೆಲ್ಲ ಅಲ್ಪಸ್ವಲ್ಪ ದ್ರವ್ಯವನ್ನು ಕೊಟ್ಟು, ಆ ದಿನ ಸಾವಕಾಶ ಮಾಡಿಕೊಂಡು ಬರುವಂತೆ ಹೇಳಿದ್ದನು. ಇದರಂತೆ ಅವರೂಬ್ಬರೂ ಕಾಲಕ್ಕೆ ಸರಿಯಾಗಿ ಬಂದಿರಲಿಲ್ಲ. ಅಲ್ಲಿನ ಅಧಿಕಾರಿ ಮಾತ್ರ ಬಂದಿದ್ದನು. ಆ ಪರಂತಪನೂ ನಾನೂ ಹೋಗಿ ಅವನ ವಶಕ್ಕೆ ಉಯಿಲನ್ನು ಕೊಟ್ಟೆವು. ಪರಂತಪನ ಪ್ರತ್ಯಮಾರ್ಥವಾಗಿ, ನಾನು ಆ ವುಯಿಲಿನ ಪೂರ್ವಾಪರಗಳನ್ನೆಲ್ಲ ಅಲ್ಲಿನ ಅಧಿಕಾರಿಗೆ ತಿಳಿಸಿ, ಪುನಃ ಬರುವುದಾಗಿ ಹೇಳಿ, ಅವನನ್ನು ಕರೆದುಕೊಂಡು ಹೊರಟು ಬಂದೆನು. ಈಗ ಒಂದು ಲಕ್ಷ ರೂಪಾಯಿಗಳಾದರೆ, ಅದನ್ನು ರಿಜಿಸ್ಟ್ರಾರಿಗೆ ಕೊಟ್ಟು ಆ ಕಾಗದವನ್ನು ತೆಗೆದುಕೊಂಡು ಬರಬಹುದು.
ಶಂಬರ- ನಗದು ಹಣವು ನನ್ನ ಹತ್ತಿರದಲ್ಲಿಲ್ಲ. ಜವಾಹಿರಿನಗಗಳನ್ನು ಕೊಡುತ್ತೇನೆ. ಇದನ್ನು ಎಲ್ಲಾದರೂ ಇಟ್ಟು ಹಣವನ್ನು ತೆಗೆದುಕೊಂಡು ಹೋಗು (ಎರಡು ಲಕ್ಷ ರೂಪಾಯಿ ಬೆಲೆಯುಳ್ಳ ಪದಕವನ್ನು ಕೊಟ್ಟನು).
ಅರ್ಥಪರನು ಅದನ್ನೂ ತೆಗೆದುಕೊಂಡು ಹೋಗಿ ಬಚ್ಚಿಟ್ಟು, ರಿಜಿಸ್ಟ್ರಾರರ ಬಳಿಗೆ ಹೋಗಿ, ದಾಖಲೆಗೋಸ್ಕರ ಆ ವುಯಿಲು ಬೇಕಾಗಿದೆಯೆಂದು ಹೇಳಿ, ಅದನ್ನು ತಂದು ಶಂಬರನ ವಶಕ್ಕೆ ಕೊಡಲು, ಶಂಬರನು ಅದನ್ನು ಪೆಟ್ಟಿಗೆಯಲ್ಲಿ ಭದ್ರಪಡಿಸಿಟ್ಟನು.
ಅನಂತರ, ಅರ್ಥಪರನು, ಆ ದಿನ ಮಧ್ಯಾಹ್ನಾತ್ಪರ ತಾನು ಪರಂತಪನನ್ನು ರತ್ನಾಕರಕ್ಕೆ ಕರೆದುಕೊಂಡು ಬರುವುದಾಗಿಯೂ ಅಲ್ಲಿ ತಕ್ಕ ಸನ್ನಾಹಗಳನ್ನು ಮಾಡಿಕೊಂಡಿದ್ದು ಅವನನ್ನು ಹಿಡಿದು ಏಕಾಂತವಾದ ಸ್ಥಳದಲ್ಲಿಡಬೇಕೆಂಬುದಾಗಿಯ ಶಂಬರನಿಗೆ ತಿಳಿಸಲು, ಅವನು ಅದಕ್ಕೆ ತಕ್ಕ ಸನ್ನಾಹಗಳನ್ನು ಮಾಡಿಸಿದನು.

♠♠ ♠♠