ಪುಟ:ಬಸವಣ್ಣನವರ ವಚನಸಂಪುಟ - ೧.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪ್ರಕಾಶಕರ ಮಾತು


ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ


ಸಮಗ್ರ ವಚನ ಸಂಪುಟಗಳ ಪರಿಷ್ಕೃತ ಆವೃತ್ತಿ ಪ್ರಕಟಣೆ ಕರ್ನಾಟಕ ಸಾಂಸ್ಕೃತಿಕ ಇತಿಹಾಸದಲ್ಲಿ ನಡೆದಿರುವ ಒಂದು ದಿವ್ಯಘಟನೆ. ವಚನಸಾಹಿತ್ಯದ ಪ್ರಕಟಣೆಗೆ ಸುಮಾರು ಎಂಬತ್ತು ವರ್ಷಗಳ ಇತಿಹಾಸವಿದೆ. ವಚನಪಿತಾಮಹ ಶ್ರೀ ಫ. ಗು. ಹಳಕಟ್ಟಿ ಅವರಿಂದ ಪ್ರಕಟಣೆಯ ದಿವ್ಯಘಟನೆ ಆರಂಭಗೊಂಡಿತು. ಇದೀಗ ಡಾ. ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದ ಮೂಲಕ ಸಹಸ್ರಮಾನದ ಸೂರ್ಯೋದಯದ ವೇಳೆಗೆ ಇದು ಒಂದು ಪೂರ್ಣ ಘಟ್ಟಕ್ಕೆ ಬಂದಿದೆ. ಶರಣ ಸಾಹಿತ್ಯದ ಪ್ರಕಟಣೆಯ ಇತಿಹಾಸದಲ್ಲಿ ಇದು ಚಾರಿತ್ರಿಕ ಘಟನೆಯೇ ಸರಿ. ಈ ನಡುವೆ ವಚನಸಾಹಿತ್ಯದ ಸಹಸ್ರಾರು ಬಿಡಿ ಪ್ರಕಟಣೆಗಳು ಹೊರಬಂದಿವೆ. ವಿಶ್ವವಿದ್ಯಾಲಯಗಳು, ಖಾಸಗಿ ಸಂಸ್ಥೆಗಳು, ಮಠಗಳು, ಶಿಕ್ಷಣ ಕೇಂದ್ರಗಳು, ಖಾಸಗಿ ಪ್ರಕಾಶಕರು, ಆಸಕ್ತ ಲೇಖಕರು ಬಿಡಿಬಿಡಿಯಾಗಿ ವಚನಸಾಹಿತ್ಯದ ಪ್ರಕಟಣೆಗಳನ್ನು ಹೊರತಂದಿದ್ದಾರೆ. ನಾವು ಪ್ರೀತಿಯಿಂದ ಇವರನ್ನೆಲ್ಲ ಈ ಹೊತ್ತಿನಲ್ಲಿ ನೆನೆಯುವುದು, ಆ ಪಾತ್ರಃಸ್ಮರಣೀಯರ ಹಾದಿಯಲ್ಲಿ ಮುನ್ನಡೆಯುವುದು ನಮ್ಮ ಸಾಂಸ್ಕೃತಿಕ ಕರ್ತವ್ಯ.

ಸಮಗ್ರ ವಚನ ಸಂಪುಟಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ೧೯೯೩ರಲ್ಲಿ ಪ್ರಕಟಗೊಂಡಿದ್ದವು. ಆ ಸಂಪುಟಗಳು ಪ್ರಕಟವಾದ ವರ್ಷವೇ ಕನ್ನಡಿಗರ ಮನೆಯನ್ನು ಸೇರಿಕೊಂಡವು. ಆದರೆ, ಸಂಪುಟಗಳ ಬೇಡಿಕೆ ಮಹಾಜನರಿಂದ ಇದ್ದೇ ಇತ್ತು. ಆನಂತರ ಕರ್ನಾಟಕ ಸರ್ಕಾರ ಪರಿಷ್ಕೃತ ಆವೃತ್ತಿಗೆ ತಾತ್ವಿಕ ಒಪ್ಪಿಗೆ ನೀಡಿತು. ಹೀಗೆ ಒಪ್ಪಿಗೆ ನೀಡಿದ ಸಂಸ್ಕೃತಿ ಸಂಪನ್ನರೂ ಮುಖ್ಯಮಂತ್ರಿಗಳೂ ಆದ ಸನ್ಮಾನ್ಯ ಶ್ರೀ ಎಸ್. ಎಂ. ಕೃಷ್ಣ ಅವರನ್ನು ತುಂಬು ಹೃದಯದಿಂದ ಈ ಪ್ರಕಟಣೆಯ ದಿವ್ಯಘಟನೆಯ ಹೊತ್ತಿನಲ್ಲಿ ಸ್ಮರಿಸಿಕೊಳ್ಳುತ್ತೇನೆ. ಅನಂತರ ನಾಡಿನ ಶ್ರೇಷ್ಠ ವಿದ್ವಾಂಸರಾದ ಡಾ. ಎಂ. ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ವಚನ ಸಂಪುಟಗಳ ಪರಿಷ್ಕೃತ ಆವೃತ್ತಿ ಸಿದ್ಧಗೊಂಡವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಸಂಪುಟಗಳನ್ನು ಪ್ರಕಟಿಸಬೇಕಿತ್ತು. ಆದರೆ, ಆ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಒಪ್ಪಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಔದಾರ್ಯ; ಅದನ್ನು ಪಡೆದು ಪ್ರಕಟಿಸುತ್ತಿರುವುದು ಪುಸ್ತಕ ಪ್ರಾಧಿಕಾರದ ಭಾಗ್ಯ. ಈ ಭಾಗ್ಯಕ್ಕೆ ಕಾರಣರಾದವರು ಕನ್ನಡ ಮತ್ತು ಸಂಸ್ಕೃತಿ