ಪುಟ:ಭವತೀ ಕಾತ್ಯಾಯನೀ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

37

ದಂತೆ ಅಕ್ಷರಶಃ ಕಡೆತನಕ ನಡೆದಳು. ಮೈತ್ರೇಯಿಯೂ ಕಾತ್ಯಾಯನಿಯ ವಿಷಯವಾಗಿ ಮಾತ್ಸರ್ಯತಾಳಲಿಲ್ಲ. ಅವರ ಪರಸ್ಪರರ ಪ್ರೇಮಭಾವವು ಕಡೆತನಕ ಅಖಂಡವಾಗಿ ಉಳಿಯಿತು. ನಿಸ್ಪೃಹರಾದ ಮಹಾತ್ಮರ ಆಚರಣೆಯು ಹೀಗೆಯೇ ಸರಿ. ಇಂಥ ಉದಾತ್ತಭಾವದ ಪತ್ನಿಯರ ಸಹವಾಸದಿಂದ ಯಾಜ್ಞವಲ್ಕ್ಯರ ಗೃಹಸ್ಥಾಶ್ರಮ ಆನಂದಕರವಾಗಿಯೂ, ಲೋಕಾದರಣೀಯವಾಗಿಯೂ ನಡೆಯಿತು. ಸಾಧಾರಣವಾಗಿ ಮೂವತ್ತು ವರ್ಷದ ವಯಸ್ಸಿನಲ್ಲಿ ಮೈತ್ರೇಯಿಯ ಲಗ್ನವಾದ ಆ ಮಹಾತ್ಮರು ವೃದ್ಧಾ ಪ್ಯವು ಪ್ರಾಪ್ತವಾಗುವವರೆಗೆ ಗೃಹಸ್ಥಾಶ್ರಮಿಗಳಾಗಿದ್ದರು . ಅವರು ತಮ್ಮ ಪತ್ನಿಯರೊಡನೆ ಆಧ್ಯಾತ್ಮಿಕ ವಿಷಯವನ್ನು ಕುರಿತು ದಿನಾಲು ಚರ್ಚಿಸುತ್ತಿದ್ದರು. ಮೈತ್ರೇಯಿಯೊಡನೆ ಕಾತ್ಯಾಯನಿಯ ಆಧ್ಯಾತ್ಮಿಕ ಜ್ಞಾನವೂ ದಿನದಿನಕ್ಕೆ ಹೆಚ್ಚಹತ್ತಿ, ಆಕೆಯ ಸಂಸಾರಾಸಕ್ತಿಯು ದಿನದಿನಕ್ಕೆ ಕಡಿಮೆಯಾಗಹತ್ತಿತು. ಒಂದುದಿನ ಯಾಜ್ಯವಲ್ಕ್ಯರು ಹೋಮಶಾಲೆಯಲ್ಲಿ ಕುಳಿತಿದ್ದರು. ಅವರ ಮುಖಮುದ್ರೆಯು ಶಾಂತವೂ, ತೇಜಸ್ವಿಯೂ ಇದ್ದದ್ದರಿಂದ ಪಂಚಾಗ್ನಿಯಿಂದ ಯುಕ್ತವಾದ ಆ ಹೋಮಶಾಲೆಯಲ್ಲಿ ಆರನೆಯ ಅಗ್ನಿಯಂತೆ ಅವರು ಒಪ್ಪುತ್ತಿದ್ದರು . ಸ್ವಾಹಾ-ಸ್ವಧೆಯರಂತೆ ಇದ್ದ ಅವರ ಇಬ್ಬರು ಪತ್ನಿಯರು ಬಳಿಯಲ್ಲಿ ಕುಳಿತಿದ್ದರು. ಸಾಯಂಕಾಲದ ಹೋಮವು ಅದೇ ಮುಗಿದು, ಸ್ಧ೦ಡಿಲದಿಂದ ಹೊರಡುವ ಹೋಮ ಧೂಮವು ಅಲ್ಲಿಯೇ ಸುತ್ತುತ್ತಿದ್ದರಿಂದ, ಹವಿರ್ಗಂಧವು ಹೋಮಶಾಲೆಯಲ್ಲೆಲ್ಲ ಇಡಗಿತ್ತು. ಯಜಮಾನನ ಇಚ್ಛೆಯಂತೆ ಹೋಮ ಧೂಮವು ದೇವತೆಗಳನ್ನು ಸಂತೋಷಪಡಿಸುವದಕ್ಕಾಗಿ ಸ್ವರ್ಗಲೋಕಕ್ಕೆ ಹೋಗುತ್ತಲಿತ್ತು. ಹೀಗೆ ದೇವತೆಗಳನ್ನು ಸಂತೋಷಪಡಿಸಿ ಅವರು ಆನಂದದಿಂದ ಕುಳಿತಿರಲು, ಯಾಜ್ಞವಲ್ಕ್ಯರು ತಮ್ಮ ಪ್ರೀಯಪತ್ನಿಯರನ್ನು ಕುರಿತು- "ಈ ವರೆಗೆ ನಾನು ನಿಮ್ಮ ಯೋಗದಿಂದ ಗೃಹಸ್ತಾಶ್ರಮದ ವೈಭವದಲ್ಲಿದ್ದೆನು. ಈಗ ವೃದ್ದಾಪ್ಯವು ಪ್ರಾಪ್ತವಾಗಿರುವದರಿಂದ, ಚತುರ್ಥಾಶ್ರಮವನ್ನು ಸ್ವೀಕರಿಸುವದು ಅವಶ್ಯ ವಾಗಿರುತ್ತದೆ; ಆದ್ದರಿಂದ ಏನಾದರೂ ನಿಮ್ಮ ವ್ಯವಸ್ಥೆಯನ್ನು ಮಾಡಬೇಕಾಗಿರುವುದು. ಈ ವರೆಗೆ ನಾನು ಸಂಪಾದಿಸಿರುವ ಧನವನ್ನು ನೀವಿಬ್ಬರೂ ಹಂಚಿಕೊಂಡು ಸುಖದಿಂದ ಕಾಲಹರಣ ಮಾಡಿರಿ." ಎಂದು ಹೇಳಿದರು. ಅವರ ಆಶ್ರಮಸ್ವೀಕಾರದ ವಿಚಾರವು ಅವರ ಇಬ್ಬರು ಪತ್ನಿಯರಿಗೂ ಯೋಗ್ಯವಾಗಿ ತೋರಿತು. ಅವರು ಹಟಮಾರಿತನದಿಂದ ತಮ್ಮ ಪತಿಯನ್ನು ಸಂಸಾರದ ಬಲೆಯಲ್ಲಿ ಬಿಗಿಯುವ ಗೊಡವಿಗೆ ಹೋಗಲಿಲ್ಲ. ಕಾತ್ಯಾಯನಿಯ ಮೊದಲಿನ ಸಂಸಾರಾಸಕ್ತಿಯು ಸಂಪೂರ್ಣವಾಗಿ ಅಳಿದು ಹೋಗಿತ್ತು. ಮೈತ್ರೇಯಿಯಂತು ಮೊದಲಿನಿಂದಲೇ ವಿರಕ್ತಳಾಗಿದ್ದಳು. ಅವರಿಬ್ಬರೂ ತಮ್ಮ ಪತಿಯನ್ನು ಕುರಿತು- "ಭಗವನ್, ತಮ್ಮ ಮನೆಯಲ್ಲಿ ಧನವೇನಿರುತದೆಂಬದು ನಮಗೆ ಗೊತ್ತೇ ಇರುತ್ತದೆ: ಆದರೆ ಆ ಧನದಿಂದ ನಮಗೆ ಅಮರರಾಗಲಿಕ್ಕೆ ಬರಬಹುದೋ?

ಯಾಜ್ಞವಲ್ಕ್ಯ-–ಛೇ, ಛೇ, ಹೀಗೆ ಹೇಗೆ ಕೇಳುವಿರಿ? ಎಲ್ಲಿಯಾದರೂ ಧನ

ದಿಂದ ಅಮರತ್ವವು ಪ್ರಾಪ್ತವಾಗಬಹುದೆ? ಧನವಂತರಿಗೆ ಆಗುವ ಸುಖವು ಮಾತ್ರ ನಿಮಗೆ