ಪುಟ:ಭಾರತ ದರ್ಶನ.djvu/೪೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪೨

ಭಾರತ ದರ್ಶನ

ಸ್ವಾಭಾವಿಕವಾಯಿತು. ಜನರ ಸ್ವಯಂಪ್ರೇರಿತ ದಂಗೆಯನ್ನೂ, ಇತರರ ಶಾಂತಿಯುತ ಪ್ರದರ್ಶನಗಳನ್ನೂ ಅಡಗಿಸಬೇಕಾಯಿತು; ಅಲ್ಲದೆ ಆತ್ಮರಕ್ಷಣೆಯ ದೃಷ್ಟಿಯಿಂದ ಶತ್ರುಗಳೆಂದು ತನಗೆ ಕಂಡವರನ್ನೆಲ್ಲ ಅಡಗಿಸಬೇಕಾಯಿತು. ಜನರ ಉದ್ರೇಕಕ್ಕೆ ಕಾರಣ ಅರಿತು ಅರ್ಥಮಾಡಿಕೊಳ್ಳುವ ದೃಷ್ಟಿ ಸರಕಾರಕ್ಕೆ ಇದ್ದಿದ್ದರೆ ಈ ವಿಷಮ ಸನ್ನಿವೇಶವೇ ಬಾರದಂತೆ ಭಾರತದ ಪ್ರಶ್ನೆಯನ್ನೂ ಎಂದೋ ಬಿಡಿಸಬಹುದಾಗಿತ್ತು. ತನ್ನ ಅಧಿಕಾರಕ್ಕೆ ವಿರುದ್ಧ ನಿಂತ ಶಕ್ತಿಯನ್ನು ಒಂದು ಬಾರಿ ಪೂರ್ಣ ಅಡಗಿಸಬೇಕೆಂದು ಸರಕಾರ ಯೋಚಿಸಿಪೂರ್ಣ ಸಿದ್ಧತೆ ಮಾಡಿಕೊಂಡಿತ್ತು. ತಾನೇ ಮುಂದೆ ಬಂದು ಮೊದಲು ಏಟುಕೊಟ್ಟಿತ್ತು. ರಾಷ್ಟ್ರೀಯ, ಕಾಮಗಾರ ಮತ್ತು ರೈತರ ಚಳವಳಿಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಹಸ್ರಾರು ಜನ ಸ್ತ್ರೀ ಪುರುಷರನ್ನು ಸೆರೆಮನೆಗೆ ತಳ್ಳಿತ್ತು. ಆದರೂ ದೇಶವನ್ನೇ ಆವರಿಸಿದ ಈ ಜನತೆಯ ವಿಷ್ಣವ ಕಂಡು ಆಶ್ಚರ್ಯ ವಿಸ್ಮಯಗಳಿಂದ ದೇಶಾದ್ಯಂತ ಹರಡಿದ್ದ ಸರ್ಕಾರದ ದಬ್ಬಾಳಿಕೆಯ ಯಂತ್ರವು ಸಡಿಲಿ ಕುಸಿಯಿತು. ಆದರೆ ಅದರ ಸಾಧನ ಸಂಪತ್ತು ಅಪಾರವಿತ್ತು; ಅದೆಲ್ಲವನ್ನೂ ಉಪಯೋಗಿಸಿ ಹಿಂಸಾತ್ಮಕವೋ ಅಹಿಂಸಾತ್ಮಕವೋ ಎಲ್ಲ ದಂಗೆಯನ್ನೂ ಅಡಗಿಸಲು ನಿರ್ಧರಿಸಿತು. ಹೆದರಿಕೆಯಿಂದ ತಾವೂ ರಾಷ್ಟ್ರಾಭಿಮಾನಿಗಳೆಂದು ಹೇಳಿಕೊಳ್ಳುತ್ತಾ ಕೆಲವುಬಾರಿ ಸರಕಾರವನ್ನು ಟೀಕೆಮಾಡಿದ ಶ್ರೀಮಂತರು ಮತ್ತು ಬಂಡವಳಗಾರರು ದೇಶಾದ್ಯಂತ ಉದ್ದವಿಸಿದ ಈ ಪ್ರಚಂಡ ಚಳವಳಿಯನ್ನು ಕಂಡು ಭಯಗ್ರಸ್ತರಾದರು. ಈ ವಿಪ್ಲವದ ರಾಜಕೀಯ ಮತ್ತು ಸಾಮಾಜಿಕ ಸ್ವರೂಪ ಕಂಡು ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರಬಹುದೆಂದು ಭಾವಿಸಿದರು. ಸರಕಾರವು ದಂಗೆ ಅಡಗಿಸುವುದರಲ್ಲಿ ಯಶಸ್ವಿಯಾಗುತ್ತ ಬಂದಂತೆ ಈ ಸ್ವಾರ್ಥಿಗಳ ಮತ್ತು ಗೆದ್ದ ಎತ್ತಿನ ಬಾಲ ಹಿಡಿಯು ವವರ ತಂಡವು ಸರಕಾರಕ್ಕೆ ಬೆಂಬಲ ನಿಂತು ಸರಕಾರ ವಿರೋಧಿಸಿದವರನ್ನೆಲ್ಲ ನಿಂದಿಸ ತೊಡಗಿದರು.

ದಂಗೆಯ ಬಾಹ್ಯ ಚಟುವಟಿಕೆಗಳು ಅಡಗಿದ ನಂತರ ಅದರ ಮೂಲವನ್ನೂ ನಾಶಮಾಡಬೇಕಾಯಿತು. ಆದ್ದರಿಂದ ಬ್ರಿಟಿಷರ ಆಡಳಿತಾಧಿಕಾರಕ್ಕೆ ಯಾರೂ ಪ್ರತಿ ಮಾತನಾಡದಂತೆ ಸರ್ಕಾರದ ಸಮಸ್ತ ಶಕ್ತಿಯನ್ನೂ ಉಪಯೋಗಿಸಲಾಯಿತು. ಬೆಳಗಾಗುವುದರ ಒಳಗೆ ವಿಶೇಷ ಶಾಸನಗಳನ್ನು ಹೇರಲು ವೈಸ್ರಾಯ್ಗೆ ಪೂರ್ಣ ಅಧಿಕಾರವಿತ್ತು. ಅದರ ಎಲ್ಲ ವಿಧಾನ ಕ್ರಮವನ್ನೂ ಬದಿಗೆ ತಳ್ಳಲಾಯಿತು. ಬ್ರಿಟಿಷ್ ಸರಕಾರವೇ ಏರ್ಪಡಿಸಿದ ಫೆಡರಲ್ ಕೋರ್ಟ್ ಮತ್ತು ಹೈಕೋರ್ಟುಗಳ ತೀರ್ಪುಗಳನ್ನು ಸಹ ಅಧಿಕಾರಿವರ್ಗ ಅಲಕ್ಷೆಮಾಡಿತು. ಅವುಗಳಿಗೆ ಯಾವ ಗೌರವವನ್ನೂ ಕೊಡದೆ ಆ ತೀರ್ಪುಗಳ ವಿರುದ್ಧ ಹೊಸ ಶಾಸನ ಬಾಣಗಳನ್ನು ಸೃಷ್ಟಿಸಿದರು. ಸಾಕ್ಷ್ಯಶಾಸನ ಮತ್ತು ವಿಧಿಬದ್ಧ ಕ್ರಮಗಳ ಯಾವ ಬಂಧನವೂ ಇಲ್ಲದ ವಿಶೇಷ ನ್ಯಾಯಾಸ್ಥಾನಗಳನ್ನು ಏರ್ಪಡಿಸಿ ಸಹಸ್ರಾರು ಜನರಿಗೆ ದೀರ್ಘಕಾಲದ ಶಿಕ್ಷೆಯನ್ನೂ, ಕೆಲವು ಸಂದರ್ಭಗಳಲ್ಲಿ ಮರಣ ದಂಡನೆಯನ್ನೂ ವಿಧಿಸಲಾಯಿತು. ಈ ನ್ಯಾಯಾಸ್ಥಾನಗಳು ಶಾಸನವಿರುದ್ಧವೆಂದು ಆಮೇಲೆ ತೀರ್ಮಾನವೂ ಆಯಿತು. ಪೋಲೀಸರ ಅದರಲ್ಲೂ ಸಶಸ್ತ್ರ ವಿಶೇಷ ಪೋಲೀಸ ದಳದವರ ಮತ್ತು ಗುಪ್ತಚಾರರ ಅಧಿಕಾರಕ್ಕೆ ಮಿತಿಯೇ ಇಲ್ಲದೆ ಸರ್ಕಾರವೇ ಅವರ ಕೈಯಲ್ಲಿತ್ತು. ಯಾರ ಅಡ್ಡಿ ಅಥವ ಅಂಕೆ ಇಲ್ಲದೆ ನ್ಯಾಯವಿರುದ್ಧ ದುಷ್ಕೃತ್ಯಗಳನ್ನು ಏನು ಬೇಕಾದರೂ ಮಾಡಲು ಅವರಿಗೆ ಅವಕಾಶವಿತ್ತು. ಲಂಚ ಋಷುವತ್ತಿಗೆ ಮಿತಿಯೇ ಇರಲಿಲ್ಲ. ಶಾಲಾಕಾಲೇಜಿನ ಅಸಂಖ್ಯಾತ ಹುಡುಗರಿಗೆ ಅನೇಕ ಬಗೆಯ ಕ್ರೂರ ಶಿಕ್ಷೆ ಕೊಟ್ಟರು, ಮತ್ತು ಸಹಸ್ರಾರು ಯುವಕರಿಗೆ ಛಡಿ ಏಟನ್ನು ಕೊಟ್ಟರು. ಸರಕಾರದ ಪ್ರಶಂಸೆ ಒಂದು ಹೊರತು ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನೂ ನಿರೋಧಿಸಿದರು.

ಆದರೆ ಸರಳ ಹೃದಯರೂ ಬಡವರೂ ಆದ ಗ್ರಾಮಾಂತರಗಳ ರೈತರು ಎಲ್ಲರಿಗಿಂತ ಹೆಚ್ಚು ಸಂಕಟ ಕ್ಕೀಡಾದರು. ಶತಮಾನಗಳಿಂದ ಅವರ ನಿತ್ಯ ಜೀವನವೇ ಒಂದು ಗೋಳಿನ ಕಥೆಯಾಗಿತ್ತು. ಈಗ ಆಸೆಯಿಂದ ತಲೆ ಎತ್ತಿ ಹೊಸ ಕನಸು ಕಾಣುವ ಧೈರ್ಯಮಾಡಿದ್ದರು ; ರಾಷ್ಟ್ರೀಯ ಆಂದೋಲನದ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಭಾಗವಹಿಸುವಷ್ಟು ಎಚ್ಚತ್ತಿದ್ದರು; ಅದು ಹುಚ್ಚೋ, ತಪ್ಪೋ, ಸರಿಯೋ, ತಮ್ಮ ಸ್ವಾತಂತ್ರ್ಯ ಶಿಷ್ಠೆಯನ್ನಂತೂ ವ್ಯಕ್ತಗೊಳಿಸಿ, ಅವರು ಸೋತಿದ್ದರು; ಆ ಸೋಲಿನ ಭಾರವು ಅವರ ಕುಸಿದ ಹೆಗಲಿನ ಮುರಿದ ಎಲುಬುಗಳ ಮೇಲೆ ಬಿದ್ದಿತ್ತು. ಅನೇಕ ಕಡೆ ಇಡೀ ಹಳ್ಳಿಗಳಿಗೆ ಛಡಿ ಏಟಿನ