ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
96
ಮಾರುಮಾಲೆ

ತುರಂಗ ಭಾರತಕಾರನಿಗೂ, ಪ್ರಸಂಗಕರ್ತನಿಗೂ ಆನಂದರಾಮಾಯಣವೇ ಆಕರವೆಂದಿಟ್ಟುಕೊಂಡರೆ, ಇಬ್ಬರೂ ಮಾಡಿಕೊಂಡಿರುವ ಬದಲಾವಣೆಗಳು ಕುತೂಹಲಕರವಾಗಿವೆ. ಆನಂದ ರಾಮಾಯಣದ ಕತೆಯನ್ನು ಪ್ರಸಂಗಕರ್ತನು ಒಂದು ಸುವ್ಯವಸ್ಥೆಗೆ ತಂದುದನ್ನೂ, ರಂಗಭೂಮಿಯ ಮಾದ್ಯಮದ ಅನುಕೂಲತೆಗೆ ತಕ್ಕಂತೆ ರಚಿಸಿದುದೂ ಕಾಣುತ್ತದೆ. ರಾಮರೂಪದಿಂದ ಬರುವ ಕಲ್ಪನೆ, ಅರ್ಜುನ ಹನುಮಂತರ ಸಂವಾದದ ಕ್ರಮ, ಮೂರು ಸೇತುವೆಗಳ ಕಟ್ಟುವಿಕೆ, ಮುರಿಯುವಿಕೆ ಪೂರ್ತಿಯಾದ ಬಳಿಕ ಕೃಷ್ಣನ(ವಿಪ್ರನ) ಪ್ರವೇಶ ಈ ಅಂಶಗಳಲ್ಲಿ ಇದು ಸ್ಪಷ್ಟವಾಗುತ್ತದೆ. ವಸ್ತುವಿನ ಬೆಳವಣಿಗೆ ಕ್ರಮಬದ್ಧವಾಗಿ ಮೂಡಿದೆ.

ಪ್ರಸಂಗದಲ್ಲಿ-ಅಂದರೆ ಅದರ ಪದ್ಯಗಳ ಮೂಲಕ ರಚಿಸಿದ ಕತೆಯ ವಿವರದಲ್ಲಿ ಕಾಣುವ ಇನ್ನೊಂದು ಮುಖ್ಯ ವಿಚಾರ, ಪದ್ಯಗಳು ನೀಡುವ ಹಂದರ ಹೆಚ್ಚು ಮುಕ್ತ (open) ಆಗಿರುವುದು. ಎಂದರೆ, ಅರ್ಥಗಾರಿಕೆಯಲ್ಲಿ ಕಲಾವಿದನಿಗೆ ಅವಕಾಶಗಳನ್ನು ವಿಭಿನ್ನ ಧೋರಣೆಗಳನ್ನು ಅಳವಡಿಸಲು ಪ್ರಸಂಗವು ನೀಡುತ್ತದೆ. ಇದು ಒಂದು ಒಳ್ಳೆಯ ಪ್ರಸಂಗದ ಲಕ್ಷಣ. ಪದ್ಯಗಳು ಪಾತ್ರದ ಮಾತನ್ನು ಸ್ಥೂಲವಾಗಿ, ವಿವರಣೆಗೆ ಅವಕಾಶವಿರುವಂತೆ ಹೇಳಬೇಕಲ್ಲದೆ, ವಿವರವಾಗಿ ಅಲ್ಲ. ಹಾಗಿದ್ದಾಗ ಅರ್ಥಧಾರಿಗೆ ಹೆಚ್ಚಿನ ಅವಕಾಶ ಇರುತ್ತದೆ. ಶರಸೇತು ಬಂಧದಲ್ಲಿ ಅರ್ಜುನನು ರಾಮಸೇತುವನ್ನು ನೋಡಿದಾಗ :


“ಬಂದಲ್ಲಿ ರಘುವರ್ಯನಿಂದ ರಚಿಸಿದ ಸೇತು|ಬಂಧವನು
ಕಂಡು ನಸುನಗುತ” ಎಂದಷ್ಟೆ ಇದೆ. ಆ ನಗೆ ಏಕೆ, ಅದರ ಅರ್ಥವೇನೆಂದು ರೂಪಿಸುವುದು ಅರ್ಥಧಾರಿಗೆ ಬಿಟ್ಟುದು. ಹಾಗೆಯೇ ಅರ್ಜುನ ಹನುಮಂತರ ಮಾತುಗಳಲ್ಲಿ, ಸೇತುವನ್ನು ಕಟ್ಟುವಾಗ, ಮುರಿಯುವಾಗ-ಕೃಷ್ಣನ, ರಾಮನ ಪ್ರಸ್ತಾಪವಿಲ್ಲ. ಅದನ್ನು ಅರ್ಥಧಾರಿ, ಬೇಕೆನಿಸಿದರೆ ತರಬಹುದು, ಬಿರಬಹುದು. ಅಂದರೆ ಪಾತ್ರದ ಧೋರಣೆ, ಸ್ವಭಾವಗಳನ್ನು ರೂಪಿಸುವಲ್ಲಿ ಪ್ರಸಂಗದ ಪದ್ಯಗಳು ಸ್ಥೂಲ ಪ್ರೇರಣೆ ನೀಡುತ್ತವೆ ಹೊರತು, ಖಚಿ