ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಕ್ತಿರಸಗಳಿಗೆ ಸಮತೋಲವಾದ ಅವಕಾಶಗಳಿದ್ದು ರಂಜನೆಯ ಅಂಶಕ್ಕೆ ಸಾಕಷ್ಟು ಪ್ರಾಧಾನ್ಯವಿದೆ.
ನಮ್ಮ ಪಾರಂಪರಿಕ ರಂಗಭೂಮಿಯಲ್ಲಿ ಬರುವ ಕಥೆಗಳು ಹೆಚ್ಚಾಗಿ ಪುರಾಣಗಳ (ಎಂದರೆ ಸಂಸ್ಕೃತ ಪುರಾಣಗಳು ಮತ್ತು ಜಾನಪದ ಮೂಲದ ಕಥಾನಕಗಳು) ಅಳವಡಿಕೆಗಳು. ಕನ್ನಡದಲ್ಲಿ, ಅವುಗಳನ್ನು ಹೆಚ್ಚಾಗಿ ವಿವಿಧ ಕನ್ನಡ ಕಾವ್ಯಗಳಿಂದ ಸ್ವೀಕರಿಸಲಾಗಿದೆ. ಅದರ ಮೂಲ ಯಾವುದೋ ಒಂದು ಪ್ರಾಚೀನ ಕಥಾ ಪುರಾಣ (Myth, Legend) ವಾಗಿರುತ್ತದೆ. ಪುರಾಣದ ಮೂಲೋದ್ದೇಶವು ಹಲವು ಬಗೆಯದಾಗಿರುತ್ತದೆ. ವೀರ ಅಥವಾ ಮಹಾಪುರುಷರ ವೈಭವೀಕರಣ, ಇತಿಹಾಸದ ಧಾರ್ಮಿಕ ವ್ಯಾಖ್ಯಾನ, ಮಹಿಮಾ ಕಥನ, ಕರ್ಮಾಂಗ ಅಥವಾ ಮತೀಯ ಕ್ರಿಯೆಯೊಂದರ ವಿವರಣೆ, ಸಮರ್ಥನೆ, ನೀತಿ ಉಪದೇಶ, -ಹೀಗೆ ಒಂದು ಅಥವಾ ಹಲವು ವಿಚಾರಗಳ ಮಿಶ್ರಣದಿಂದ ಪುರಾಣ ಸೃಷ್ಟಿಯಾಗುತ್ತದೆ. ಕಾಲ ಮತ್ತು ಹೇಳುವವನ ಮತಧರ್ಮ, ಅಭಿ ಪ್ರಾಯಗಳಿಗೆ ಅನುಸರಿಸಿ ಅದು ಬದಲಾಗುತ್ತ, ಪುನಃ ಪುನಃ ರಚಿತವಾಗುತ್ತ ಹೋಗಬಹುದು. ಆದರೂ ನಮಗಿಂದು, ಅರ್ಥತಃ ಅಂದರೆ ಅದರ ಆಶಯ ತಾತ್ಪರದಲ್ಲಿ ಅದು ಪ್ರಸ್ತುತ ಅಲ್ಲದಿರಬಹುದು. ಆದರೆ ಕಥೆ ನಮಗೆ ಪ್ರಸ್ತು ತವೇ ಆಗಿರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಮಗೆ Myth ಪ್ರಸ್ತುತ, ಅದರ Meaning ಅಲ್ಲ. ಹೊಸ ಅರ್ಥ ನಾವು ಕೊಡುತ್ತ ಹೋಗಬೇಕು. ಅದು ಕಲೆಯ ಸೃಷ್ಟಿಶೀಲತೆ. ಅದು ಕಲೆಯ ಸೃಷ್ಟಿಶೀಲತೆ. ಅದೇ ವಸ್ತುವಿನ ಬೆಳವಣಿಗೆ. ಇಂತಹ ಸಂದರ್ಭದಲ್ಲಿ “ಪುರಾಣಕ್ಕೆ ಈ ಅರ್ಥವುಂಟೆ ?” “ವಲದಲ್ಲಿ ಹಾಗಿಲ್ಲವಲ್ಲ” ? ಎಂಬಂತಹ ಪ್ರಶ್ನೆಗಳು ಸಂಗತವಲ್ಲ. ಪುರಾ ಣಕ್ಕೆ ಆ ಅರ್ಥವೂ ಉಂಟು ಅಥವಾ ಮಾಡುವುದಕ್ಕೆ ಸಾಧ್ಯ ಎಂದು ನಾವು ಸಂತೋಷಪಡಬೇಕು.

ಅನುಬಂಧ :


ಶರಸೇತು ಬಂಧನದ ಕಥೆಯ ಹಂತಗಳು ಹೀಗಿವೆ : ಅರ್ಜುನ ಹನು ಮಂತರ ಇದಿರಾಗುವಿಕೆ, ಘರ್ಷಣೆ, ಕೃಷ್ಣನ ಪ್ರವೇಶ, ಅವನ ಪ್ರಭಾವಲಯ ದಲ್ಲಿ ಇವರಿಬ್ಬರೂ ಒಂದು ಶಕ್ತಿಯಾಗುವುದು.