ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
136
ಮಾರುಮಾಲೆ

ಪದ್ಯಗಳಿಗೆ ಅರ್ಥವನ್ನು ಹೇಳುವಾಗ, ಪದ್ಯದ ಅರ್ಥವನ್ನು (ಅಂದರೆ ಸರಳ ಅನುವಾದವನ್ನು ಮಾತ್ರ ಹೇಳದೆ, ತನಗೆ ಅದರಿಂದ ಆಗುವ 'ಅರ್ಥ' ವನ್ನು ಹೇಳುವುದು ಅರ್ಥದಾರಿಯ ಕೆಲಸ 'ಪ್ರಸಂಗ ನಿಷ್ಠೆ'ಯೇ ಅರ್ಥ ದಾರಿಯ ಮಾತುಗಾರಿಕೆಗೆ ಮಾನದಂಡವಲ್ಲ (ಸ್ಪಷ್ಟತೆಗಾಗಿ ಬಂದು ಮಾತು : ಪ್ರದರ್ಶನ ಸಾಗಲು ಪ್ರಸಂಗವನ್ನು ತಾಂತ್ರಿಕವಾಗಿ ಅನುಸರಿಸಲೇ ಬೇಕು. ಅದರ ಜಾಡು ಹಿಡಿದೇ ಮಾತನಾಡಬೇಕು.ಎತ್ತುಗಡೆ, ನಿಲುಗಡೆಗಳಲ್ಲಿ ಪದ್ಯದ ಶಬ್ದಗಳು ಬರಬೇಕು. ಪ್ರಸಂಗ ನಿಷ್ಠೆ' ಯೊಂದೇ ಸಾಲದು ಎಂದರೆ, ಪ್ರಸಂಗದ ಕಾವ್ಯವನ್ನು ಬಿಟ್ಟು ಏನೇನೋ ಹೇಳುತ್ತ ಹೋಗಬೇಕೆಂದಲ್ಲ).

ಅಂದರೆ, ಪದ್ಯಗಳಲ್ಲಿ ನೇರವಾಗಿ ಇಲ್ಲದ, ಆದರೆ ವಸ್ತುವಿನಲ್ಲಿ ಸಂದರ್ಭ ದಲ್ಲಿ (ಪ್ರಸಂಗದ 'ಪ್ರಸಂಗ'ದಲ್ಲಿ) ಇರುವ ವಿಭಿನ್ನ ಸಾಧ್ಯತೆಯನ್ನು ಪರಿಶೀಲಿ ಸುವ ಕೆಲಸ ಮಾತುಗಾರನದು. ಇದು ನಡೆದಿರುವುದರಿಂದಲೇ, ಒಂದೇ ಒಂದು 'ಕೃಷ್ಣ ಸಂಧಾನ', ಒಂದೇ 'ಭೀಷ್ಮಾರ್ಜುನ' ಪ್ರದರ್ಶನಗಳಲ್ಲಿ ನೂರಾರು ರೂಪ ಪಡೆಯುತ್ತದೆ. ನೂರುವರ್ಷ ಹಿಂದೆ ಅರ್ಥ ಹೇಳುತ್ತಿದ್ದ ಒಬ್ಬ ಅರ್ಥದಾರಿ, ಇಂದಿನ ಕೃಷ್ಣ ಸಂಧಾನವನ್ನು ಕೇಳುವಂತಾದರೆ, ಅವನಿಗೆ ಅದರಲ್ಲಿನ ಪಾತ್ರಗಳು 'ಗುರುತು ಸಿಗದಷ್ಟು ಭಿನ್ನವಾಗಿ ತೋರಬಹುದು. ಕಾಲ, ಅಧ್ಯಯನ ಸಂಸ್ಕಾರ, ಪ್ರತಿಭೆಗಳಿಂದಾದ ವ್ಯತ್ಯಾಸ ಅದು.

ಕರ್ಣಪರ್ವ (ಗೆರೆಸೊಪ್ಪೆ ಶಾಂತಪ್ಪಯ್ಯ)-ಪ್ರಸಂಗವನ್ನೇ ಗಮನಿಸಿ, ಇಂದು ಅರ್ಥದಾರಿಗಳಿಂದ ಚಿತ್ರಿತವಾಗುತ್ತಿರುವ ಕರ್ಣನ ದುರಂತ, ಇಕ್ಕಟ್ಟು, ಪ್ರಭುಭಕ್ತಿ; ಕೃಷ್ಣಮಾಯೆ-ಇವುಗಳಾವುವೂ ಪ್ರಸಂಗದಲ್ಲಿಲ್ಲ (ಕೊನೆಯ ಭಾಗದ ಕೆಲವು ಪದ್ಯಗಳ ಹೊರತು). ಆದರೆ ಇದಕ್ಕೆಲ್ಲ ಅವಕಾಶ ಕರ್ಣಪರ್ವದ ವಸ್ತುವಿನಲ್ಲಿ ಇದೆ. ಅರ್ಥದಾರಿ ಎಂಬ ಕಲಾವಿದನಿಗೆ ಹಿನ್ನೆಲೆಯಾಗಿ ಮೂಲ ಸಂಸ್ಕೃತ (ಅಥವಾ ಇತರ ಕಾವ್ಯ) ಕನ್ನಡ ಕಾವ್ಯ, ಯಕ್ಷಗಾನ ರಂಗದ ಪರಂಪರೆ ಯಿಂದ ಬಂದ ಮಾತಿನ ದ್ರವ್ಯ ಮತ್ತು ಅವನು ಬಳಸುತ್ತಿರುವ ಪ್ರಸಂಗವೆಂಬ ಹಾಡುಗಬ್ಬ ಇಷ್ಟು ಇವೆ. ಪ್ರೇಕ್ಷಕ (ಅಂದರೆ ಪ್ರೇಕ್ಷಕ ನಿರೀಕ್ಷೆ) ಇದ್ದಾನೆ. ಸ್ವಂತ ಪ್ರತಿಭೆ ಮುಖ್ಯವಾಗಿ ಇದೆ. ಸಹಕಲಾವಿದನಿದ್ದಾನೆ.