ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಶರಸೇತು ಬಂಧನ
83

ಆಯ್ಕೆಯೋ, ಅವನ್ನು ಹಾಡುವ ಕ್ರಮವೊ ಇಡಿಯ ಪ್ರದರ್ಶನದ ರೂಪ ವನ್ನು ಬೇರೆ ಮಾಡಿ, ಆಶಯದ ಮೇಲೆ ಪರೀಣಾಮ ಬೀರುತ್ತದೆ. ಅದು ಪ್ರತ್ಯೇಕ ವಿಷಯ. ಈ ಸೂಕ್ಷ್ಮವನ್ನು ಬಿಟ್ಟು, ಪದ್ಯವನ್ನು ಸ್ಥಿರಪಾಠವಾಗಿ ಗ್ರಹಿಸಿದೆ.) ಗದ್ಯ, ಅಂತೆಯೇ ಅಭಿನಯ, ಚಲನ, ತಂತ್ರದ ಬಳಕೆ ಪದ್ಯಗಳಂತಲ್ಲ. ಅದು ದಿನಕ್ಕೊಂದು ಬಗೆಯಾಗಿ, ತೀರ ಭಿನ್ನ ಭಿನ್ನವಾಗಿ ರೂಪು ಗೊಳ್ಳುತ್ತದೆ. ರಂಗದಲ್ಲಿ, ಆಗಿಂದಾಗಲೇ ತಯಾರಾಗಿ, ಚಿತ್ರಿತವಾಗುತ್ತದೆ. ಇದು ಕಾಲ,ದೇಶ, ಪ್ರದರ್ಶನದ ಅವಧಿ, ಪ್ರೇಕ್ಷಕರ ನಿರೀಕ್ಷೆ, ಪ್ರತಿಕ್ರಿಯೆ, ಪ್ರೇಕ್ಷಕರಾಗಿರುವವರು ಯಾರು ಎಂಬುದನ್ನೂ, ಕಲಾವಿದನ ಹಿನ್ನೆಲೆ, ಅಭ್ಯಾಸ, ಸಂಸ್ಕಾರ, ಪ್ರತಿಭೆ, ಕಲ್ಪನೆಗಳನ್ನೂ, ಹಿಮ್ಮೇಳದ ಕೆಲಸ, ಸಹಕಲಾವಿ ದರನ್ನೂ, ಪ್ರದರ್ಶನದ ಒಟ್ಟು ಸಾಮಾಜಿಕ ಸನ್ನಿವೇಶ ಇದನ್ನೂ ಹೊಂದಿ ಕೊಂಡಿದೆ. ಹಾಗಾಗಿ, ಅರ್ಥಗಾರಿಕೆಯಲ್ಲಿ ದಿನಕ್ಕೊಂದು ಪಾಠ ಸಿದ್ಧವಾಗುತ್ತದೆ. ಇದು, ಮಾತುಗಾರಿಕೆ ಇರುವ, ಎಲ್ಲ ಸಾಂಪ್ರದಾಯಿಕ ರಂಗಭೂಮಿಗಳಿಗೂ, (ಹಾಗೆಯೇ ಕತೆ, ಗಾದೆ, ಒಗಟು, ಶಬ್ದ ಬಂಡಿ, ಹರಿಕತೆ, ಸವಾಲ್ ಜವಾಬ್ ಪ್ರದರ್ಶನ-ಇಂತಹವುಗಳಿಗೂ) ಅನ್ವಯಿಸುವ ಮಾತು. ಇಲ್ಲಿ ಒಟ್ಟು ಮೊತ್ತದಲ್ಲಿ (macro level) ಹಿಂದಿನ ಪಾಠಗಳ ಪುನರಾವೃತ್ತಿ, ಅದೇ ವಾಕ್ಯಗಳು ಎಲ್ಲ ಇದ್ದರೂ, ಸೂಕ್ಷ್ಮವಾದ ಮಟ್ಟದಲ್ಲಿ (Micro level) ಅದ್ಭುತವೆನಿಸುವ ವ್ಯತ್ಯಾಸಗಳಿವೆ. ಇದೇ ಸ್ವಂತ ಮಾತುಗಾರಿಕೆಯ ಸೃಷ್ಟಿಶೀಲತೆ. ಹಾಗಾಗಿ ಒಂದು ಮಟ್ಟದಲ್ಲಿ ಹೇಳುವುದಾದರೆ, ಇಂತಹ ಪದ್ಯಕ್ಕೆ ಇಂತಹ ಅರ್ಥ ಎಂಬುದೇ ಇಲ್ಲ. ಒಂದೊಂದೂ ಅರ್ಥವೇ. ಹೇಳಿದ್ದೆಲ್ಲ ಅರ್ಥವೇ (ಈ ಮಾತನ್ನು ವ್ಯಂಗ್ಯವಾಗಿ ಹೇಳಿಲ್ಲ. ಗಂಭೀರವಾದ ಕಲಾಸೃಷ್ಟಿಯ ನೆಲೆಯಲ್ಲಿ ಹೇಳಿದ್ದೇನೆ). ಆದುದರಿಂದಲೇ, ಒಂದೇ, ಸುಧನ್ವ ಕಾಳಗವನ್ನಾಧರಿಸಿ 'ಅ ಕಲಾವಿದನ ಸುಧನ್ವ ಬೇರೆ, 'ಬ' ಕಲಾವಿದನದು ಬೇರೆ-ಹೀಗೆ ಆಗುವುದು. ಇದು ಪ್ರಸಿದ್ಧವಷ್ಟೆ. ಹೀಗೆ ಅರ್ಥಗಾರಿಕೆಯಿಂದ ರೂಪುಗೊಳ್ಳುವ ಒಟ್ಟು ಸಾಹಿತ್ಯವೆಲ್ಲವೂ ಮೂಲವೇ, ಎಲ್ಲವೂ ಪಾಠಾಂತರವೇ, ಒಂದೊಂದು ಪ್ರದರ್ಶನವೇ ಒಂದೊಂದು ಪಾಠ.