ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾಳದಲ್ಲಿ ಅಂದರೆ ಕಾರ್ಕಳ ತಾಲೂಕಿನ ಘಟ್ಟದ ಬುಡದ ಕೊನೆಯ ಗ್ರಾಮದಲ್ಲಿ ಜನಿಸಿದ ಪ್ರಭಾಕರ ಜೋಶಿ ಅವರನ್ನು ಕರಾವಳಿಯವರೆನ್ನದೆ, ಪ್ರಾದೇಶಿಕ ಭೇದವಿಲ್ಲದೆ, ಕರಾವಳಿಯಿಂದಲೂ, ಬೆಂಗಳೂರಿನಿಂದಲೂ, ಮೈಸೂರಿನಿಂದಲೂ ಬಂದ ವಿದ್ವಾಂಸರು, ಕಲಾಪ್ರೇಮಿಗಳು ಮನದುಂಬಿ ಗೌರವವನ್ನು ವ್ಯಕ್ತಪಡಿಸಿದ ಚಂದವನ್ನು ನೋಡುವುದೇ ಈ ಎರಡು ದಿನಗಳ ಭಾಗ್ಯ.
ಇವತ್ತು ಜೋಶಿ ದಂಪತಿ ಪಾಲಿಗೆ ಬಂದ ಬಲುದೊಡ್ಡ ಸುಕೃತವೆಂದರೆ ಅವರನ್ನು ತಮ್ಮದೇ ಊರವರು ಕೂಡಾ ಸತ್ಕರಿಸಿದರು ಎಂಬುದು. 'ಜೋಶಿ ವಾಗರ್ಥ ಗೌರವ'ದ ಎರಡು ದಿನಗಳ ಈ ಮಹತ್ತರ ಕಾರ್ಯಕ್ರಮವನ್ನು ನಡೆಸುವಲ್ಲಿ ಮುಖ್ಯ ಪಾತ್ರ ವಹಿಸಿದವರಲ್ಲಿ ಜೋಶಿಯವರ ಹುಟ್ಟೂರಾದ ಮಾಳ, ತೆಳ್ಳಾರು ಮತ್ತು ನೆರೆಯ ಮುಂಡಾಜೆ, ಶಿಶಿಲ ಮೊದಲಾದೆಡೆಯ ಚಿತ್ಪಾವನ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮಹನೀಯರು, ಜೊತೆಗೆ ಮೈಸೂರಿನ ಸನ್ನಿತ್ರರು ಇರುವುದು - ವಿಶಿಷ್ಟ ಯೋಗ.
ಒಂದು ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ತನ್ನ ಸಾಧನೆ ಮೂಲಕ ಇಡಿಯ ರಾಜ್ಯದ ಕಣ್ಮಣಿಯಾಗುವ ಹಾಗೆ ಎತ್ತರಕ್ಕೆ ತಲುಪಿ ಎಲ್ಲಡೆ ಮಾನ ಸಂಮಾನ ಗಳಿಸುವುದಿದ್ದರೂ ತನ್ನ ಹುಟ್ಟೂರಿಗೆ ತಲುಪಿದಾಗ ತನ್ನ ಊರಿನ ಎಂದಿನ ಅವಜ್ಞೆ ಇದಿರಾಗುವುದನ್ನು ಯಾರೂ ಗಮನಿಸನಬಲ್ಲರು. ಅದೇ ಊರವರು ಆತನನ್ನು ಮನ್ನಿಸಿದಾಗ ಅತ್ಯಂತವಾದ ಆನಂದ ಸಾಧಕನಿಗಾಗುತ್ತದೆ. ಊರವರ ಕಡೆಯಿಂದ ಆಗಬಹುದಾಗಿದ್ದ ಒಂದು ಕೊರತೆಯನ್ನು ನೀಗಿಸಿದುದಕ್ಕಾಗಿ ನಾನು ಮಾಳ ಮತ್ತು ಹತ್ತಿರದ ಊರುಗಳ ಚಿತ್ಪಾವನ ಸಾಮಾಜಿಕರನ್ನು ಅವರ ಹೆಸರನ್ನು ಇಲ್ಲಿ ಸ್ಮರಿಸಲೇ ಸೀತಾರಾಮ್ ಭಟ್ ದಾಮ್ಲ, ಎಂ.ಬಿ. ಡೋಂಗ್ರೆ, ರಘುಪತಿ ತಾಮಣ್‌‌, ಡಾ. ಗೋಪಾಲ ಮರಾಠ, ಕೆ. ಶ್ರೀಕರ ಭಟ್ ಮರಾಠ, ಶ್ರೀಮತಿ ವೀಣಾ ಡೋಂಗ್ರೆ ಇನ್ನೂ ಹಲವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಡಾ.ಎಸ್.ಸುಧೀರ ಶೆಟ್ಟಿ ಮತ್ತು ನನ್ನನ್ನು ಈ ಸ್ಥಾನದಲ್ಲಿ ಕುಳ್ಳಿರಿಸಿದ ಅಪರಾಧಿ, ಕಾರ್ಯದರ್ಶಿ ವಿದ್ವಾನ್ ಗ.ನಾ. ಭಟ್ಟ ಅವರ ಸಾಹಸ ಸಣ್ಣದಲ್ಲ ಎಂಬುದನ್ನು ದಾಖಲಿಸುತ್ತೇನೆ.
ರಾಮಾಯಣದಲ್ಲಿ ಒಂದು ಮಾತು ಬರುತ್ತದೆ. ರಾಮ, ಸೀತೆ, ಲಕ್ಷ್ಮಣರು ಅಯೋಧ್ಯಾಮುಖರಾಗಿ ಬರುತ್ತಿದ್ದರೆಂದು ಹನುಮಂತ ನೀಡಿದ ವಾರ್ತೆಗೆ ಭರತನ ಪ್ರತಿಕ್ರಿಯಾ ವಾಕ್ಯವಿದು.
ಕಲ್ಯಾಣೀ ಬತ ಗಾಥೇಯಂ ಲೌಕಿಕೀ ಪ್ರತಿಭಾತಿ ಮೇ ।
ಏತಿ ಜೀವಂತಮಾನಂದೋ ನರಂ ವರ್ಷಶತಾದಪಿ ॥
“ಮನುಷ್ಯ ನೂರು ವರ್ಷ ಬದುಕಿದರೆ ಒಮ್ಮೆಯಾದರೂ ಆನಂದದ ಸಂದರ್ಭವನ್ನು ಕಾಣದಿರಲಾರ” ಎಂದು ಎಂದು ಇದರ ತಾತ್ಪರ್ಯ.

ತಮ್ಮ ಜೀವಿತದದ ಎಪ್ಪತ್ತು ವರ್ಷಗಳನ್ನು ದಾಟಿದ ವೇಳೆಗೆ ಜೋಶಿ ಅವರಿಗೆ ಈ ಉನ್ನತವಾದ ಆದರ-ಸಮ್ಮಾನ ಪ್ರಾಪ್ತವಾಗಿದೆ. ಇವರೇ ಇತರರ ಜತೆಯಲ್ಲಿ ಮುಂದೆ

ವಾಗರ್ಥ ಗೌರವ / 46