ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
103

ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ :
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ !
ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು;
ಇನ್ನೆಂದಿಗೆ ಮೋಕ್ಷವಹುದೋ ಕೂಡಲಸಂಗಮದೇವಾ!
ಸಂಸಾರಸಾಗರದ ತೆರೆ ಕೊಬ್ಬಿ
ಮುಖದ ಮೇಲೆ ಅಲೆಯುತಿದ್ದುದೇ ನೋಡಾ !
ಸಂಸಾರಸಾಗರಉರದುದ್ದವೇ ? ಹೇಳಾ !
ಸಂಸಾರಸಾಗರ ಕೊರಲುದ್ದವೇ ? ಹೇಳಾ !
ಸಂಸಾರಸಾಗರ ಸಿರಿದುದ್ದವಾದಬಳಿಕ ಏನ ಕೇಳುವೆನಯ್ಯಾ?
ಅಯ್ಯಾ ಅಯ್ಯಾ ! ಎನ್ನ ಹುಯ್ಯಲ ಕೇಳಯ್ಯಾ
ಕೂಡಲಸಂಗಮದೇವಾ ನಾನೇವೆನಯ್ಯಾ ?
ಎಂದೋ ಸಂಸಾರದ ದಂದುಗ ಹಿಂಗುವದು ?
ಎಂದೋ ಮನದಲ್ಲಿ ಪರಿಣಾಮವಹುದೆನಗೆಂದೋ ?
ಎಂದೋ ಕೂಡಲಸಂಗಮದೇವಾ ಇನ್ನೆಂದೋ ?
ಪರಮಸಂತೋಷದಲ್ಲಿಹುದೆನಗೆಂದೋ ?
ಎಂಬುದಾಗಿ ಅವರು ಒಳ್ಳೆಯ ಕಳವಳಗೊಂಡು ಸಂಗಮನಾಥನನ್ನು ಕೇಳುವರು ಮತ್ತು ತನ್ನನ್ನು ನಡುನೀರಿನಲ್ಲಿ ಇಳಿಬಿಡದೆ, ಶಿವಪಥದಲ್ಲಿ ಇರಿಸಲು ಬಿನ್ನವಿಸುವರು. ಇಷ್ಟೇ ಅಲ್ಲ. ಶಿವನು ತನ್ನನ್ನು ಕಾಡಿಹನೆಂದು ಶರಣರಿಗೆ ದೂರು ಹೇಳುವರು :
ಹುಟ್ಟೆಂದು ಲೋಕದಲ್ಲಿ ಹುಟ್ಟಿಸಿ ಇಳಿಯಬಿಟ್ಟೊಡೆ
ನಿಮ್ಮ ನಗುವರಯ್ಯಾ
ಶಿವಬಟ್ಟೆಯೊಳೆನ್ನನು ಇರಿಸಯ್ಯಾ ! ಹರನೇ ಹೊಲಬುಗೆಟ್ಟೆನು
ಬಟ್ಟೆಯ ತೋರಯ್ಯಾ !
ಹುಯ್ಯಲಿಟ್ಟೆನು “ಗಣಂಗಳು ಕೇಳಿರಯ್ಯಾ
ಕೂಡಲಸಂಗಮದೇವಯ್ಯಾನೆನ್ನ ಕಾಡಿಹನಯ್ಯಾ