________________________________________ ಮಲ್ಲಪ್ಪ ವೀರಪ್ಪಾಜಿಯರಿಬ್ಬರೂ ಅವರ ಪಾದಗಳಿಗೆ ವಂದಿಸಿದರು.
ಸ್ವಾಮಿಗಳು ಮಲ್ಲಪ್ಪನೊಬ್ಬನನ್ನೇ ಉದ್ದೇಶಿಸಿ, ಅಂದರು:
"ಹೊರಡತೀಯಾ ಗೌಡ? ಒಳ್ಳೆದು, ಪ್ರಸಾದ ತಗೊಂಡು ಹೋಗು, ಶಿವ ಮೆಚ್ಚುವ ಕೆಲಸ ಮಾಡಿದೆ. ನಿರ್ಭಯವಾಗಿರು. ಆಳುವ ದೊರೆಯಲ್ಲಿ ಸಲಹುವ ದೈವದಲ್ಲಿ ಭಕ್ತಿ ಯಿಂದಿರು. ಧರ್ಮದ ದಾರಿ ಬಿಟ್ಟ ನಡೀಬ್ಯಾಡ, ಹೋಗು."
ಸಜಲನಯನನಾದ ಮಲ್ಲಪ್ಪ ಏನನ್ನೂ ಹೇಳಲಾಗದೆ, ಪಕ್ಕಕ್ಕೆ ಸರಿದು ಕೈಜೋಡಿಸಿ ನಿಂತ.
"ಸ್ವಾಮಿಗಳು ವೀರಪ್ಪಾಜಿಯನ್ನು ಕುರಿತು, "ಮಧಾಹ್ನ ಬಾ, ಮಗು. ನಿನ್ನ ಕೂಡೆ ಮಾತಾಡಬೇಕು" ಎಂದು ನುಡಿದು, ಹಾವುಗೆಗಳ ಸದ್ದು ಮಾಡುತ್ತ ಮುಂದಕ್ಕೆ ಹೋದರು.
"ಬನ್ನಿ ಭಕ್ತರೇ" ಎಂದ, ಸಿದ್ಧಲಿಂಗ.
....ಮಲ್ಲಪ್ಪನನ್ನು ಬೀಳ್ಕೊಡಲು, ವೀರಪ್ಪಾಜಿಯನೂ ಸಿದ್ಧಲಿಂಗನೂ ನದೀತಟದ ತನಕ ಬಂದರು.
"ನಾನು ಚರಜಂಗಮ. ಇವತ್ತು ಇಲ್ಲಿ ಶಿವ ಅಂದರೆ ನಾಳೆ ನಿನ್ನೂರಲ್ಲಿ ಹರ ಅಂದೇನು. ಗೌಡ, ಪಾದಪೂಜೆ ಮಾಡತೀ ತಾನೆ?" ಎಂದ ಸಿದ್ದಲಿಂಗ.
"ಅವಶ್ಯ ಬನ್ನಿ, ಅಯ್ಯನವರೆ, ನನ್ನದು ಹೊಸಳ್ಳಿ."
"ಹೊಸದು ಬ್ಯಾರೇನೋ? ಬರತೀನಪ್ಪ, ಬರತೀನಿ."
ವೀರಪ್ಪಾಜಿ ಅಗಲಿಕೆಯ ನೋವನ್ನು ಹತ್ತಿಕ್ಕಲೆತ್ನಿಸುತ್ತ ಅಂದ:
"ಹೋಗಿಬಾ ಮಲ್ಲಪ್ಪಣ್ಣ, ನನ್ನ ತಾಯಿಗೆ ಶರಣೆಂಬೆ. ಶಂಕರಪ್ಪನಿಗೆ ಶರಣೆಂಬೆ. ನಿನಗೆ ಶರಣೆಂಬೆ."
ಮಲ್ಲಪ್ಪ, ವೀರಪ್ಪನ ಮಾತುಗಳು ಮುಗಿಯುವುದಕ್ಕೆ ಮುನ್ನವೇ ಆತನ ಪಾದಗಳನ್ನು ಮುಟ್ದ್ಟಿದ್ದ. ವೀರಪ್ಪನೆಂದ:
"ಛೆ! ಛೆ! ಏಳಣ್ಣ, ಏಳು."
ಏಳುತ್ತ ಗದ್ಗದಿತನಾಗಿ ಮಲ್ಲಪ್ಪ ನುಡಿದ:
"ಮಹಾದೇವ ನಿಮಗೆ ಎಲ್ಲಾ ಕಾಲಕ್ಕೂ ರಕ್ಷೆಯಾಗಿರಲಿ, ಸೋಮಿಯೋರೆ."
"ಶಿವನಿಚ್ಛೆ ಇದ್ದರೆ ಆಯುಸ್ಸು ತೀರೋದರೊಳಗೆ ಮತ್ತೆ ಕೂಡೇವು, ಇನ್ನು ಹೊರಡು,ಅಣ್ಣ."
ರಕ್ತಸಂಬಂಧಿಗಳಲ್ಲದ ಲೌಕಿಕರಲ್ಲಾ ಇಷ್ಟೊಂದು ಒಲವೆ?-ಎಂದು ಅಚ್ಚರಿಪಡುತ್ತ ನಿಂತಿದ್ದ ಸಿದ್ದಲಿಂಗ, “ಆಗಲೆ ಬಿಸಿಲಾಯ್ತು." ಎಂದ.
ಪಾದಗಳನ್ನು ಪ್ರಯಾಸದಿಂದ ಕೀಳುತ್ತ ಒಂದು ಕೈಯಲ್ಲಿ ಕಂಬಳಿಯ ಗಂಟನ್ನೆತ್ತಿ ಕೊಂಡು, ಇನ್ನೊಂದರಲ್ಲಿ ಧೋತರವನ್ನು ಮೇಲಕ್ಕೆತ್ತಿ ಹಿಡಿದು, ಮಲ್ಲಪ್ಪ ನದಿಯೊಳಗೆ ಶಾಲಿರಿಸಿದ.
ಹತ್ತು ಹತು ಹೆಜ್ಜೆ ಮುಂದುವರಿದಾಗಲೆಲ್ಲ ಮಲ್ಲಪ್ಪ, ತಿರುಗಿ ನೋಡುತ್ತಿದ್ದ.
ಆತ ನದಿ ದಾಟಿ, ಕಿರುದಾರಿಯಲ್ಲಿ ನಡೆದು, ಪೊದೆಗಳಾಚೆಗೆ ಮರೆಯಾದವರೆಗೂ ವೀರಪ್ಪಾಜಿಯೂ ಸಿದ್ಧಲಿಂಗನೂ ಪಾವಟಿಗೆಗಳ ಮೇಲೆ ನಿಂತರು.