ಪುಟ:ಹಳ್ಳಿಯ ಚಿತ್ರಗಳು.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಗೆಯ ನೀತಿ

೧೦೧

ಊರಿಂದ ಇನ್ನೊಂದು ಸಾರಿ ಬರುವಾಗ ಒಂದು ತಾಮ್ರದ ತಂಬಿಗೆ ತಂದೊಡ್ತೀನಿ. ಹೂ ಈಗಲೇ ಬೀದಿಗೆ ಎಸೆ" ಎಂದರು. ಕಿಟ್ಟುವು ಹೂಜಿಯನ್ನು ತಗೆದುಕೊಂಡು ಹೊರಕ್ಕೆ ಬಂದನು. ಅದು ಬಹಳ ಚೆನ್ನಾಗಿತ್ತು. ೩ ದಿವಸ ಮುಂಚೆ ಅದಕ್ಕೆ ೫ ಆಣೆ ಕೊಟ್ಟಿದ್ದನು. ಅದನ್ನು ಬಿಸಾಡಲು ಅವನಿಗೆ ಮನಸ್ಸು ಬರಲಿಲ್ಲ. ಬಾಗಿಲಿನಲ್ಲಿ ನಿಂತಿದ್ದ ಮನೆಯ ಯಜಮಾನನ ಮಗನನ್ನು ಕಂಡು "ಇದನ್ನು ಒಳಗೆ ಇಟ್ಟಿರು. ಸಾಯಂಕಾಲ ತೆಗೆದುಕೊಳ್ಳುತ್ತೇನೆ” ಎಂದು ಹೇಳಿ ಕೊಟ್ಟು, ಒಳಕ್ಕೆ ಬಂದನು. ಅವನನ್ನು ನೋಡಿ ಅವರ ತಂದೆಯವರು “ನಾನು ಇನ್ನೊಂದು ಸಲ ಬಂದಾಗ, ಅಂತಾದ್ದು ಏನಾದರೂ ನೀನು ಇಲ್ಲಿ ಇಟ್ಟಿದ್ದರೆ, ಅದನ್ನೂ ನಿನ್ನ ತಲೆಯನ್ನೂ ಒಂದೇ ಏಟಿಗೆ ಒಡೆದುಬಿಡುತ್ತೇನೆ ಎಂದರು.

ಆ ದಿವಸ ಕಿಟ್ಟುವು ನರಹರಿಯ ಬೆನ್ನು ಹತ್ತಲಿಲ್ಲ. ತಂದೆಯವರ ಊಟಕ್ಕೆ ಬಾಳೆಯ ಹಣ್ಣು ಮತ್ತು ಬೆಲ್ಲವನ್ನು ತರಲು ಅವನು ಅಂಗಡಿಗೆ ಹೋಗಿದ್ದ. ನರಹರಿಯು ಆಗತಾನೆ ಊಟಮಾಡಿಕೊಂಡು ಒಂದು ಕೊಠಡಿಯಲ್ಲಿ ಕುಳಿತಿದ್ದ. ಗಂಟೆ ೧೦ ಆಗಿತ್ತು. ಕಿಟ್ಟುವಿನ ತಂದೆಯೂ ಕೊಠಡಿಯಲ್ಲಿಯೇ ಕುಳಿತಿದ್ದರು. ಕಿಟ್ಟುವು ಹಣ್ಣು ತಂದನಂತರ ಅವರು ಅವನನ್ನು ಕುರಿತು “ನೀನು ಹೋಗಿ ಊಟಮಾಡಿಕೊಂಡು ಬಾ, ಸ್ಕೂಲಿಗೆ ಹೊತ್ತಾಗುತ್ತೆ" ಎಂದರು. ಕಿಟ್ಟುವು 'ಷರ್ಟನ್ನು' ಬಿಚ್ಚದೆ ಊಟಕ್ಕೆ ಹೊರಟುದನ್ನು ನೋಡಿ, "ಏನು ಹಾಳು ಹೋಟಲೋ, ಜಾತಿ ಕುಲ ಏನೂ ಇಲ್ಲ. ಇಂಗ್ಲಿಷ್ ವಿದ್ಯೆ ಬಂದು ನಮ್ಮ ಧರ್ಮ ಹಾಳಾಯ್ತು,” ಎಂದರು. ಕಿಟ್ಟುವು ಪದ್ಧತಿಯಂತೆ,

"ನಮ್ಮ ಹೋಟೆಲಿನಲ್ಲಿ ಹಾಗೆಲ್ಲಾ ಇಲ್ಲ. ಬಹಳ ಮಡಿ, ಎಂತಹ ವೈದಿಕರು ಬೇಕಾದರೂ ಊಟಮಾಡಬಹುದು” ಎಂದು ಹೇಳಿ ಹೊರಟು ಹೋದ.

ಅವನು ಹೋದ ಒಂದು ಘಳಿಗೆಯ ಮೇಲೆ ಕಿಟ್ಟುವಿನ ತಂದೆ, ನರಹರಿಯನ್ನು ಕುರಿತು.

ಹೋಟಲು ಬಹಳ ಮಡಿಯಾಗಿದೆ ಅನ್ತಾನಲ್ಲ? ಎಲ್ಲಿ, ಹೋಗಿ ನೋಡಿ ಬರೋಣ ಬಾ” ಎಂದರು. ನರಹರಿಗೆ ಇಷ್ಟವಿಲ್ಲದಿದ್ದರೆ ಅವರು