ಪುಟ:ಹಳ್ಳಿಯ ಚಿತ್ರಗಳು.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೨

ಹಳ್ಳಿಯ ಚಿತ್ರಗಳು

ಏನೂ ತೊಂದರೆಯಿಲ್ಲ. ತೊಂದರೆಯೆಲ್ಲಾ ಅವರಿಗೆಯೆ. ಮಹಾತ್ಮಾ ಗಾಂಧಿಯವರೋ ಯಾರೋ ಸತ್ಯಾಗ್ರಹವೆಂಬ ಒಂದು ಅಸ್ತ್ರವನ್ನು ಎಲ್ಲಾದಕ್ಕೂ ಎದುರಾಗಿ ಹಿಡಿದಿದ್ದಾರಂತೆ. ಹಾಗೆಯೇ ನಮ್ಮ ಜೋಡಿದಾರರು ಎಲ್ಲಾದಕ್ಕೂ ಎದುರಾಗಿ, ವಿಕಾರವಾಗಿ ಕೂಗಿ ಬಾಯ ಬಡದುಕೊಳ್ಳುವ ಒಂದು ಅಸ್ತ್ರವನ್ನು ಹಿಡಿದಿದ್ದಾರೆ. ಈ ಅಸ್ತ್ರವು ಮಾಡುವಂತಹ ಕೆಲಸವನ್ನೂ, ಸಾಧನೆಯನ್ನೂ, ಮತ್ತಾವ ಅಸ್ತ್ರವೂ ಮಾಡುವುದಿಲ್ಲವೆಂದು ಅವರ ದೃಢವಾದ ನಂಬುಗೆ.

ಒಂದು ದಿವಸ ಇವರ ಹೆಸರ ಗದ್ದೆಗೆ ಪೇಟೆಯಲ್ಲಿ ಯಾರೋ ಒಬ್ಬನ ಎಮ್ಮೆ ನುಗ್ಗಿತು. ಎಮ್ಮೆಯು, ಒಂದು ಕಡೆಯಿಂದ ಹೂವು ಕಾಯಿಗಳಿಂದ ತುಂಬಿದ ಪೈರನ್ನೆಲ್ಲಾ ಮೇಯುತ್ತಾ ಬಂದಿತು. ಪಾಪ ಕಷ್ಟಪಟ್ಟು ತಾವು ಬೆಳೆಸಿದ್ದ ಪೈರು ಹಾಳಾದುದನ್ನು ಕಂಡು ಜೋಡಿದಾರರಿಗೆ ಬಹಳ ದುಃಖವುಂಟಾಯಿತು. ಆ ಪುಣ್ಯಾತ್ಮ ಆ ಎಮ್ಮೆಯನ್ನು ಗದ್ದೆಯಿಂದ ಹೊರಕ್ಕೆ ಅಟ್ಟಲೇ ಇಲ್ಲ. ಅದು ಯಾರದೆಂದು ತಿಳಿದುಕೊಂಡು, ಅದನ್ನು ಅಲ್ಲೇ ಮೇಯುವುದಕ್ಕೆ ಬಿಟ್ಟು, ನೇರವಾಗಿ ಪೇಟೆಗೆ ಎಮ್ಮೆಯ ಒಡೆಯನ ಬಾಗಲಿಗೆ ಬಂದು, ಒಂದು ಸಲ ಬಾಯಿ ಬಡದುಕೊಂಡ. ಯಾರನ್ನೂ ಹೊಡೆಯಲಿಲ್ಲ ಬಯಲಿಲ್ಲ. ಉಳಿದವರಂತೆ ಎಮ್ಮೆಯ ಕಾಲು ಮುರಿಯಲಿಲ್ಲ. ಎಮ್ಮೆಯ ಯಜಮಾನನಿಗೆ ಅದಕ್ಕಿಂತ ಹೆಚ್ಚು ಶಿಕ್ಷೆಯು ಬೇಕಾಗಲಿಲ್ಲ. ಅಲ್ಲಿಂದ ಈಚೆಗೆ ಅವನು ಎಮ್ಮೆಯನ್ನು ಜೋಡಿದಾರರ ಗದ್ದೆ ಇರುವ ದಿಕ್ಕಿಗೇ ಬಿಡುತ್ತಿಲ್ಲ.

ಒಂದುಸಲ ಜೋಡಿದಾರರು -ನಕ್ಕೆ ಹೋಗಬೇಕಾಯಿತು. ಒಂದು ಗಾಡಿಯನ್ನು ಬಾಡಿಗೆಗೆ ಗೊತ್ತುಮಾಡಿದರು. ಆಗ ಮಳೆಗಾಲ. ಬಾಕಿ ಕಾಲಗಳಲ್ಲಿ ಒಂದು ಗಾಡಿ ೨ ರೂಪಾಯಿಗೆ ದೊರೆಯುತ್ತಿದ್ದಿತು. ಆದರೆ ಆ ದಿವಸ ಗಾಡಿಯವನು ಜೋಡಿದಾರರ ಅವಸರವನ್ನು ನೋಡಿ ಎದ್ದು ಹೋಗುವ ಮಾತು ಬಿದ್ದು ಹೋಗಲಿ ಅಂತ ಒಂದು ಗಾಡಿಗೆ ೧೦ ರೂಪಾಯಿ ಹೇಳಿಬಿಟ್ಟ. ೧೪ ಮೈಲಿಗೆ ೧೦ ರೂಪಾಯಿ. ೧೦ ರೂಪಾಯಿಗಳಿಗೆ ನಾಲ್ಕು ಗಾಡಿಗಳು ಬರುತ್ತಿದ್ದುವು. ಆದರೆ ಜೋಡಿದಾರರಿಗೆ ಹೆಚ್ಚಾಗಿ ಚೌಕಶಿ ಮಾಡಲು ಇಷ್ಟವಿರಲಿಲ್ಲ. ಅವರು “೯ ರೂಪಾಯಿಗೆ ಬರುತ್ತೀಯಾ?”