ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಿರಸ್ಮರಣೆ
ಕೋರನಿಗೆ ಕೆಡುಕೆನಿಸಿತು. ಅವನು ಬಹಳ ಹೊತ್ತು ತಲೆ ಕೆರೆಯುತ್ತಾ ನಿಂತಿದ್ದು, ಕೊನೆಗೆ ಹೇಳಿದ: "ನಾನೊಂದು ವಿಷಯ ಹೇಳಲಾ?" ಎಂದೂ ಹೀಗೆ ಕೇಳಿದವನಲ್ಲ ಕೋರ. ಮಾಸ್ತರಿಗೆ ಆಶ್ಚರ್ಯವೇ ಆಯಿತು. ಅವರೆಂದರು: "ಹೇಳು. ಏನು ವಿಷಯ?" "ಎಲ್ಲಿಯೂ ಜಾಗ ಇಲ್ಲಾಂತ ಹೇಳ್ತಿದ್ರಿ-" ಕೋರನ ಮನಸ್ಸಿನಲ್ಲಿದ್ದುದೇನೆಂಬುದು ಮಾಸ್ತರಿಗೆ ಹೊಳೆದು, ಸಂತೋಷದಿಂದ ಅವನ ಕಣ್ಣುಗಳು ಮಿನುಗಿದುವು. ಆದರೂ ಆತನ ಬಾಯಿಯಿಂದಲೇ ಆ ಮಾತನ್ನು ಕೇಳಬೇಕೆಂದು ಅವರು ಹೊಂಗುಟ್ಟಿದರು. "ಹೌದು." "ನಿಮಗೆ ಒಪ್ಪಿಗೆಯಾದ್ರೆ ನನ್ನ ಹಟ್ಟೀಲಿ---" ಮಾಸ್ತರು ನಕ್ಕರು. ತಾನು ಹೇಳಿದುದು ಅನುಚಿತವಾಯಿತೇನೋ ಎಂದು ಕೋರ ಅಳುಕಿದ. ಮಾಸ್ತರು ಎಡಅಂಗೈಗೆ ಬಲಮುಷ್ಟಿಯಿಂದ ಗುದ್ದಿ ಹೇಳಿದರು: "ಈವರೆಗೂ ನನಗೆ ಹೇಳಲೇ ಇಲ್ವಲ್ಲ ಕೋರ!" ಮಾಸ್ತರಿಗೆ ಒಪ್ಪಿಗೆಯಾಯಿತೆಂದು ಸಂತೋಷಗೊಂಡು, ನಿಂತದ್ದ ಕೋರ ನೆಲದ ಮೇಲೆ ಕುಳಿತು ಕೋರನ ಆಹ್ವಾನದ ವಿಷಯ ತಿಳಿದು,ಅಪ್ಪು ಮತ್ತು ಚಿರುಕಂಡ ಇಬ್ಬರಿಗೂ, ಒಂದು ಸಮಸ್ಯೆ ಬಗೆಹರಿಯಿತೆಂದು ಸಮಾಧಾನವಾಯಿತು. ಆದರೆ, ಜನರನ್ನು ಕೊಡಿಸುವ ಇನ್ನೊಂದು ಸಮಸ್ಯೆ ಹಾಗೆಯೇ ಉಳಿದಿತ್ತು. "ನಾನೊಬ್ಬ ಇದ್ದೇನೆ. ಚಿರುಕಂಡ ನನಗೆ ಓದಿ ಹೇಳ್ಲಿ" ಎಂದ ಕೋರ. ಹಾಗೆ ಆತ ಹೇಳಿದುದು ಪತ್ರಿಕೆಯಲ್ಲಿನ ಆಸಕ್ತಿಯಿಂದಲ್ಲ, ಮಾಸ್ತರ ಮೇಲಿನ ಪ್ರೀತಿಯಿಂದ. ಮಾಸ್ತರು ತಮ್ಮ ಅವಸ್ಥೆ ಕಂಡು ತಾವೇ ನಕ್ಕರು. ಅಂತೂ ಕ್ರಮೇಣ ಬೇರೆಯೂ ಒಬ್ಬಿಬ್ಬರನ್ನು ಪ್ರಯಾಸಪಟ್ಟು, ಸೇರಿಸಿ, ಕತ್ತಲಾದ ಮೇಲೆ ಸ್ವಲ್ಪ ಹೊತ್ತು ಜರುಗುವ ಅಭ್ಯಾಸಕೂಟ ಆರಂಭವಾತಯಿತು. ಕುಡಿದು ಬಂದ ದಿನ ಕೋರ ದೂರ ಮೂಲೆಯಲ್ಲಿ ಕುಳಿತು ನಿದ್ದೆ ಹೋಗುತ್ತಿದ್ದ. ಮಗನ ಚಟುವಟಿಕೆಯ ವಿಷಯ ಕೇಳಿ ಚಿರುಕಂಡನ ತಂದೆಗೆ ಸಂತೋಷವಾಯಿತು. "ಆ ಮಾಸ್ತರು ನಮ್ಮ ಹುಡುಗನನ್ನು ಒಳ್ಳೆಯ ಹಾದೀಲಿ ನಡೆಸ್ತಿದ್ದಾರೆ, ಕಲ್ಯಾಣಿ" ಎಂದು ಆತ ಹೆಂಡಿತಿಗೆ ಹೇಳಿದ. ಅಪ್ಪುವಿನ ತಂದೆ ಒಂದು ಸಂಜೆ ಕೋರನ