ಚಿರಸ್ಮರಣೆ "ಇಲ್ಲವಪ್ಪ ಭಾರೀ ಅಡುಗೆ ಮಾಡಿಟ್ಟು ಅಮ್ಮ ಕಾದಿದ್ದಾಳೆ. ನಿಮಗೆ ನಾಳೆ ಸಿಗ್ತೇನೆ" ಎಂದು ಹೇಳಿ ಅಬೂಬಕರ್ ಎದ್ದೇಬಿಟ್ಟ. ಆತನ ಜತೆಯಲ್ಲಿ ಚಿರುಕಂಡ ಹೊರಗೆ ಹತ್ತು ಹೆಜ್ಜೆ ಹೋದ. ಮಾಸ್ತರ ವಿಷಯ ಕೇಳಬೇಕೆಂದು ಆತನ ಮನಸ್ಸು ತವಕಿಸಿತು. ಅಷ್ಟರಲ್ಲಿ ಅಬೂಬಕರನೇ ಅಂದ: "ಸದ್ಯಃ ತಲಚೇರಿಲಿದ್ದೇನೆ; ಇನ್ನೂ ಮಾಸ್ತರಿಕೆ ಕೆಲಸ ಹುಡುಕ್ತಾನೇ ಇದ್ದೇನೆ-ಅಂತ ಮಾಸ್ತರು ನಿಮಗೆ ತಿಳಿಸ್ಬೇಕು ಅಂದಿದ್ದಾರೆ." "ಅವರು ಆರೋಗ್ಯವಾಗಿದ್ದಾರಾ?" ಮಾಸ್ತರ ವಿಷಯದಲ್ಲಿ ಅತ್ಯಂತ ಆತ್ಮೀಯತೆಯನ್ನು ಸೂಚಿಸಿದ ಆ ಧ್ವನಿ ಕೇಳಿ ಅಬೂಬಕರ್ ಚಕಿತನಾದ. "ಹೂಂ. ಆರೋಗ್ಯವಾಗಿದ್ದಾರೆ. ನಾನು ಇಲ್ಲಿ ಹುಡುಗನಾಗಿದ್ದಾಗ ಅವರ ಪರಿಚಯ ಇರ್ಲಿಲ್ಲ. ನನಗೆ ಅವರು ಮಾಸ್ತರಾದದ್ದು ತಲಚೇರಿಯಲ್ಲೇ!" ಆದರೆ ಬೇರೇನನ್ನೋ ಯೋಚಿಸುತ್ತಿದ್ದ ಚಿರುಕಂಡ ಹೇಳಿದ: "ಒಳ್ಳೇದಾಯ್ತು ಸಂಗಾತಿ! ನಾಳೆ ಬೆಳಿಗ್ಗೆ ಸಂಘದ ಕಚೇರಿಗೆ ಬನ್ನಿ. ಎಲ್ಲರ ಪರಿಚಯ ಮಾಡಿಕೊಡ್ತೇನೆ. ಜತೇಲಿ ಕೆಲಸ ಮಾಡೋಣ. ನಾವು ಮಾಡಬೇಕಾದ್ದು ಬೆಟ್ಟದಷ್ಟಿದೆ. ಕಾಗದದಲ್ಲಿ ಮಾಸ್ತರು ಸೂಚಿಸಿರೋದಂತೂ ಬಹಳ ವಿಶಿಷ್ಟವಾದದ್ದು. ವಿವರವಾಗಿ ನಾಳೆ ಮಾತಾಡೋಣ." ..................... ಆ ನಾಳೆ, ಸಂಘ ಹೊಸ ಹೆಜ್ಜೆಗಳನ್ನಿಟ್ಟ ದಿನವಾಯಿತು. ತಲಚೇರಿಯಲ್ಲಿ ಬೀಡಿ ಕೆಲಸಗಾರನಾಗಿದ್ದ ಅಬೂಬಕರ್ ಕಯ್ಯೂರಲ್ಲೇ ನೆಲೆಸಲು ಬಂದಿದ್ದ. ಆತ ಶಹರದಲ್ಲಿ ಕಾರ್ಮಿಕರ ಒಂದು ಸ್ವಯಂಸೇವಕ ದಳಕ್ಕೆ ಉಪನಾಯಕನಾಗಿದ್ದ ಅನುಭವಿ. ಕಯ್ಯೂರಿನ ಎಲ್ಲರ ದೃಷ್ಟಿಯಲ್ಲೂ ಅದು ಅವನಿಗೆ ದೊರತಿದ್ದ ವಿಶಿಷ್ಟ ಶಿಕ್ಷಣ. ಆ ಶಿಕ್ಷಣದ ಪ್ರಯೋಜನವನ್ನು ಸಂಘ ಪಡೆಯಿತು. ಕ್ರಮಬದ್ಧವಾದ ರೀತಿಯಲ್ಲಿ ಕಾರ್ಯೋನ್ಮುಖನಾಗಿ ಅಬೂಬಕರ್, ಕಯ್ಯೂರಿನ ರೈತ ಯುವಕರ ಸ್ವಯಂಸೇವಕ ದಳವನ್ನು ರಚಿಸಿದ. ....ಸಂಘದ ಮುಂದೆ ಬೇರೆ ಹಲವು ಸಮಸ್ಯೆಗಳಿದ್ದುವು. ಕಯ್ಯೂರಿಗೆ ಗ್ರಾಮಪಂಚಾಯಿತಿ ಬೇಕೆಂದು ಅವರು ಜಿಲ್ಲಾಧಿಕಾರಿಗೆ ಅರ್ಜಿ ಬರೆದರು: ಉತ್ತರ ಬರಲಿಲ್ಲ. ಹೊಲವಿಲ್ಲದ ರೈತರಿಗಾಗಿ ಹಳ್ಳಿಯ ಒಂದು ಮೂಲೆಯಲ್ಲಿದ್ದ ಬಂಜರು ಭೂಮಿಯನ್ನು ಕೃಷಿ ಮಾಡಲು ಅವಕಾಶ ಕೊಡಬೇಕೆಂದು ಸರಕಾರವನ್ನು ಕೇಳಿದರು.