ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೯೮
ಚಿರಸ್ಮರಣೆ


ಸೂರ್ಯ ಮೇಲೇರುತ್ತಿದ್ದ, ಮೆರವಣಿಗೆ ನೋಡಲೆಂದು ಗುಡಿಸಲು ಗುಡಿಸಲುಗಳಿಂದ ಹೊರಗಿಣಿಕಿದ ರೈತರು ಪೋಲೀಸನನ್ನೂ ಕಂಡರು. ಇದೇನೋ ಆಗುತ್ತಿದೆ ಎಂದು ರೈತರು ತಾವೂ ಮೆರವಣಿಗೆಯನ್ನು ಹಿಂಬಾಲಿಸತೊಡಗಿದರು.

ಸುಬ್ಬಯ್ಯ ಪೆಚ್ಚಾಗಿ ಹೋದ. "ಧಿಕ್ಕಾರ!" ಎಂದಾಗಲೆಲ್ಲ ಸ್ವಯಂಸೇವಕರು ಆತನತ್ತ ಬೊಟ್ಟ ಮಾಡುತ್ತಿದ್ದರು. 'ಅಬಾ! ಈ ಹಳ್ಳಿ ಮುಕ್ಕಗಳ ಎದೆಯೇ!'ಎಂದು ತುಟಿ ಕಚ್ಚಿದ. ಸಾಲದುದಕ್ಕೆ ರೈತರೂ ನೋಡತೊಡಗಿದ್ದರು, ಅಂತೂ ಅವಮಾನ.ಏನಾದರೂ ಮಾಡಿ ತಾನು ತನ್ನ ಅಧಿಕಾರ ತೋರಿಸದೇ ಹೋದರ ಮೂರು ಕಾಸಿನ ಬೆಲೆಯೂ ಉಳಿಯುವ ಹಾಗಿಲ್ಲ.......

ಮೆರವಣಿಗೆ ಎಡಕ್ಕೆ ತಿರುಗಿ ನದಿ ದಂಡೆಯುದ್ದಕ್ಕೂ ನಡೆಯಿತು. ಅಲ್ಲೇ ಕೋರ, ಕಣ್ಣ ಮತ್ತಿತರರ ಗುಡಿಸಲುಗಳಿದ್ದುವು, ರೈತ ಹೆಂಗಸರೂ ಹೊರಬಂದು, ಪೋಲೀಸನು ಕೆಂಪು ಬಾವುಟದ ನೆರಳಿನಂತೆ ಬರುತ್ತಿದ್ದ ದೃಶ್ಯವನ್ನು ನೋಡಿದರು. ಇದರಲ್ಲಿ ಅಪಾಯವಿದೆಯೇನೋ ಒಂದು ಒಮ್ಮೆ ಅವರಿಗೆ ದಿಗಿಲಾದರೂ, ಆ ಜನಸಮುದಾಯದಲ್ಲಿ ಆತ ಒಂಟಿಗನೆಂಬುದು ಸ್ಪಷ್ಟವಾಗಿ ಅವರು ನಗುತ್ತ, ಪೋಲೀಸನತ್ತ ಬೊಟ್ಟು ಮಾಡುತ್ತ, ಗುಜುಗುಜು ಮಾತಾಡಿದರು.ಹೆಂಗಸರ ಆ ವರ್ತನೆಯಂತೂ ಸುಬ್ಬಯ್ಯನಿಗೆ ನುಂಗಲಾರದ ತುತ್ತಾಯಿತು. ಆತನಲ್ಲಿ ವಿವೇಕ ಮರೆಯಾಗಿ ದುರಭಿಮಾನಕ್ಕೆ ಮೇಲುಗೈ ಆಯಿತು, ಹೊಲಕ್ಕೆ ಹಾರಿ, ಓಡುತ್ತ, ಸುಬ್ಬಯ್ಯ ಮೆರವಣಿಗೆಯ ಮುಂಭಾಗವನ್ನು ತಲುಪಿದ.

ಹಾದಿಗೆ ಅಡ್ಡಿಯಾಯಿತೆಂದು ಕಣ್ಣ ನಿಲ್ಲಬೇಕಾಯಿತು. ಕಣ್ಣ ನಿಂತನೆಂದು ಬಾವುಟವೂ ಸ್ತಬ್ದವಾಯಿತು.ಹಾಡು ಕೂಡ.

"ಹಾಲ್ಟ್!ನಿಂತಲ್ಲೆ ನಿಲ್ಲಿ!"ಎಂದು ಹೇಳಿ ಅಬೂಬಕರ್ ಶಿಳ್ಳೆ ಊದಿದ.

ಯಾರೋ "ಇಂಕ್ವಿಲಾಬ್" ಎಂದರು. ಅದಕ್ಕೆ ಮಾರುತ್ತರ ದೊರೆಯಿತು. ಮತ್ತೆ ಘೋಷಗಳು ಹೊರಟವು.

"ಬಿಡು ಹಾದಿ!" ಎಂದ ಕಣ್ಣ.

"ಬಿಡೋದಿಲ್ಲ, ಸರಕಾರ ಸತ್ತೋಯ್ತೂಂತ ತಿಳಿದಿರಾ?"

ಅಬೂಬಕರ್ ಬಂದು ಪೋಲೀಸನ ರಟ್ಟೆ ಹಿಡಿದು "ಸರಿದು ನಿಲ್ಲು! ಏನು ಸಮಾಚಾರ?"ಎನ್ನುತ್ತ ಆತನನ್ನು ಬದಿಗೆಳೆದ. ಸುಬ್ಬಯ್ಯನ ಪಾಲಿಗೂ ಅದು ಬಲವಾದ ಹಿಡಿತವೇ!ಆತ ಕೈಕೊಡವಿ ಅಬೂಬಕರ್ ನ ಕೆನ್ನೆಗೊಂದು ಏಟು ಬಿಗಿದ. ಮೆರವಣಿಗೆಯ ಸಾಲು ಮುರಿಯಿತು.ಎಲ್ಲರೂ ಬಾವುಟದ ಸುತ್ತಲೂ ಪೋಲೀಸನ ಸುತ್ತಲೂ ಗುಂಪು ಕಟ್ಟಿದರು. ಕೂಗುಗಳು ಕೇಳಿದುವು. "ಕೊಡಿ ಆತನಿಗೆ!"ಬಿಗೀರಿ