ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೬
ಚಿರಸ್ಮರಣೆ

ಕಾಂಡಕ್ಕೊರಗಿ, ಅಸಹನೆಯಿಂದ ಅತ್ತಿತ್ತ ಮೈ ಹೊರಳಿಸುತ್ತ ಹೇಳಿದ:

"ಈ ಹಳ್ಳಿಯ ಇಬ್ಬರು ಜಮೀನ್ದಾರ್ರು ಆಳೋ ಪಾಳೆಯಗಾರರಾಗಿಹೋದ್ರು! ಅವರು ರಾಜರು--ನಾವು ಪ್ರಜೆಗಳು! ಹುಂ!"

ಚಿರುಕ೦ಡ ನಿಧಾನವಾಗಿ ಹೇಳಿದ:

"ಇನ್ನುಮುಂದೆ ಯಾವಾಗಬೇಕಾದರೂ, ಗೇಣಿ ಸರಿಯಾಗಿ ಕೊಡಲಿಲ್ಲ ಅಂತ್ಲೋ ಇನ್ನೇನೋ ನೆಪ ಹೇಳಿ, ಜಮೀನ್ದಾರ ನಮ್ಮನ್ನು ಹೊರಗೆ ಹಾಕ್ಬಹುದು. ಆಮೇಲೆ ನಮ್ಮದು ಅನ್ನೋದು ಏನೂ ಉಳಿಯೋದಿಲ್ಲ. ಇರೋದಕ್ಕೆ ಜಾಗ ಇಲ್ದೆ ನಾವು ಊರು ಬಿಡ್ಬೇಕು."

ಸತ್ಯಸಂಗತಿಯನ್ನು ಚಿರುಕಂಡ ಹೇಳಿದ್ದರೂ, ಅಪ್ಪುವಿಗೆ ಅದು ಒಪ್ಪಿಗೆಯಾಗಲಿಲ್ಲ.

"ನೀನು ಸುಮ್ನಿರು. ಯಾರೂ ಊರು ಬಿಡೋದಿಲ್ಲ!"

"ನಿನಗೆ ತಿಳೀದು ಅಪ್ಪು. ಮಾಸ್ತರು ಹೇಳ್ಲಿಲ್ವ? ಹಾಗೇ ಅಲ್ಪ ನಡೆಯೋದು?

ರೈತ ಹೊಲ ಕಳಕೊಂಡು ಬಡವನಾಗ್ತಾನೆ, ಭಿಕಾರಿಯಾಗಾನೆ, ಆಮೇಲೆ ದೇಹದ ಶ್ರಮದ ಹೊರತಾಗಿ ಅವನಲ್ಲಿ ಏನೂ ಉಳಿಯೋದಿಲ್ಲ. ಪಟ್ಟಣಕ್ಕೆ ಹೋಗಿ, ಕೂಲಿಯಾಗಿ, ಆ ಶ್ರಮವನ್ನೇ ಆತ ಮಾರ್ತಾನೆ."

"ಅದು ಸರಿ ಅನ್ನು. ಆದರೆ ಯಾವಾಗಲೂ ಹಾಗೇ ಇರ್ತದಾ? ಮುಂದೆ ಒಂದು ದಿವಸ,ಅನ್ಯಾಯವಾದೋರಿಗೆಲ್ಲಾ ನ್ಯಾಯ ಸಿಗ್ತದೇ೦ತ್ಲೂ ಮಾಸ್ತರು ಹೇಳಿಲ್ವ?"

ಚಿರುಕಂಡ ಸುಮ್ಮನಾದ. ಅದನ್ನೂ ಮಾಸ್ತರು ಹೇಳಿದ್ದರು, ನಿಜ. ಆದರೆ ಬೇರೆಯೂ ಒಂದು ಮಾತನ್ನು ಅವರು ಆಡಿದ್ದರು: ಜನ ಒಂದಾದರೆ ಮಾತ್ರ ಅದು ಸಾಧ್ಯ: ಅದಕ್ಕಾಗಿ ಹೋರಾಟವಾಗಬೇಕು; ಆ ಹೋರಾಟದಲ್ಲಿ ರೈತರು ಕಷ್ಟನಷ್ಟ ಅನುಭವಿಸಬೇಕು; ರಾಷ್ಟ್ರವನ್ನು ತುಳಿದು ನಿಂತಿದ್ದ ಪರಕೀಯ ಶಕ್ತಿಯ ಬೆನ್ನೆಲುಬನ್ನು ಮುರಿಯಬೇಕು;ಆ ಬಳಿಕ ಶಕ್ತಿಯ ಆಧಾರಸ್ತ೦ಭಗಳನ್ನು ಕಿತ್ತುಹಾಕಬೇಕು...

ಆ ಮಾತುಗಳೆಲ್ಲ ಚಿರುಕಂಡನ ನೆನಪಿಗೆ ಬಂದವು. ಅಪ್ಪುವಿಗೂ ಅದು ಗೊತ್ತಿತು. ಆದರೂ ಆತ ಉದ್ವೇಗದಿ೦ದ ಮಾತನಾಡಿದ್ದ.

ಗೆಳೆಯನ ಮೌನ ಕಂಡು ಅಪ್ಪುವಿನ ಮನಸ್ಸು ಚಡಪಡಿಸಿತು. ತಾನು ಏನು ಹೇಳಿದರೆ, ಏನು ಮಾಡಿದರೆ,ಚಿರುಕ೦ಡನಿಗೆ ಸಮಾಧಾನವಾಧೀತೆ೦ದು ಆತ ಯೋಚಿಸಿದ. ಆ ಯೋಚನೆ ಸ್ವಾಭಾವಿಕವಾಗಿಯೇ ಮಾಸ್ತರನ್ನು ತಲಪಿತು. ಆತ ಕೇಳಿದ: “ಮಾಸ್ತರು ಬಂದಿದಾರಾ ಊರಿಗೆ?"