ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೯೮
ಚಿರಸ್ಮರಣೆ

"ಆಗಲಿ.ಅದಕ್ಕೇನಂತೆ?"

"ಹಾಗಾದರೆ ಸಾಯಂಕಾಲದ ಹೊತ್ತು ಯಾವಾಗಲೂ ಇಲ್ಲಿಗೆ ಬರ್ತಾ ಇರಿ ಆಗದೆ?"

ಸಾಯಂಕಾಲವನ್ನೆಲ್ಲಾ ತಮ್ಮಿಂದ ಕಸಿದುಕೊಳ್ಳುವ ಯತ್ನ ಬಲು ಕ್ರೂರವಾಗಿ ಮಾಸ್ತರಿಗೆ ತೋರಿತ್ತು,ಒಪ್ಪಿಗೆ ಸೂಚಿಸದೆ ಸುಮ್ಮನ್ನಿದ್ದ ಮಾಸ್ತರನ್ನು ಜಮೀನ್ದಾರರು ಅರೆಕ್ಷಣ ಹುಬ್ಬು ಗಂಟಿಕ್ಕಿ ನೋಡಿ, ವೇಗವಾಗಿ ಮಾತನಾಡುತ್ತ ಅಂದರು:

"ನನಗೆ ಬ್ಯಾಡ್ಮಿಂಟನ್ ಅಂದರೆ ಇಷ್ಟ.ನಾನು ಹೈಸ್ಕೂಲ್ನಲ್ಲಿ ಓದ್ತಾ ಇದ್ದಾಗ ಬಹಳ ಪ್ರಸಿದ್ದನಾಗಿದ್ದೆ. ಇಲ್ಲಿ ಯಾರೂ ಜತೆ ಇಲ್ಲದೆ ಬೇಜಾರಾಗಿತ್ತು . ಇಲ್ಲೇ ಎದುರಿಗೆ ಕೋರ್ಟು ಹಾಕಿಸ್ತೇನೆ.ನನಗೆ ಪುರುಸೊತ್ತು ಆದಗಲೆಲ್ಲ ಸಾಯಂಕಾಲ ಒಂದೊಂದು ಆಟವೂ ಆಡ್ಬಹುದು."

ಮಾಸ್ತರು ಉತ್ತರವಿತ್ತರು:

"ನನಗೆ ಬ್ಯಾಡ್ಮಿಂಟನ್ ಬರೋದಿಲ್ಲ."

"ಆಶ್ಛರ್ಯ! ಈಗಿನ ಕಾಲದ ನೀವೇ ಹೀಗಿರೋದು ಮಹಾದಾಶ್ಛರ್ಯ!"

"ಹೇಳೋದಕ್ಕೆ ನಾಚಿಕೆಯಾಗ್ತದೆ,ಪಂದ್ಯಾಟ ಅಂದರೆ ನನಗೆ ಅಷ್ಟಷ್ಟೇ."

ಜಮೀನ್ದಾರರು ನಕ್ಕರು.

"ಹಾಗಾದರೆ,ಜೋಡು ನಳಿಗೆ ಬಂದೂಕೆತ್ತಿ ನೀವು ಬೇಟೆಯಾಡೋದೆಲ್ಲ ಅಷ್ಟರಲ್ಲೇ ಇದೆ!"

ಮಾಸ್ತರು ನಗೆಯ ಉತ್ತರವಿತ್ತರು.

"ಹೋಗಲಿ,ಇಸ್ಪೀಟಾದರೂ ಆಡ್ತೀರೋ?"

"ಅದೂ ಇಲ್ಲ."

"ಹಾಗದರೆ ನೀವು ಪುಸ್ತಕ ಕೀಟ ಅಂತ ತೋರ್ತದೆ."

ಆ ಮಾತನ್ನು ತಮ್ಮ ಉಪಯೋಗಕ್ಕೆ ತಿರುಗಿಸಿಕೊಡು ಮಾಸ್ತರೆಂದರು:

"ನಿಜ ಹೇಳಿದ್ರಿ. ನಾನು ಮೊದಲಿನಿಂದಲೂ ಅಷ್ಟೆ,ಪುಸ್ತಕದ ಹುಚ್ಚು. ಈಗ ಸಹ ಬಿಡುವು ಸಿಕ್ಕಿದರೆ ಸಾಕು, ಪುಸ್ತಕ ಹುಡುಕಿಕೊಂಡು ನೀಲೇಶ್ವರಕ್ಕೊ ಹೊಸದುರ್ಗಕ್ಕೋ ಓಡ್ತಿರ್ತೇನೆ."

ಈ ಓಡಾಟದ ಗೂಢಾರ್ಥವನ್ನು ತಿಳಿಯದ ಜಮೀನ್ದಾರರು ನಕ್ಕು ತಲೆ ಅಲ್ಲಾಡಿಸಿ ಅಂದರು:

"ಈ ಪುಸ್ತಕದ ವಿಷಯ ನನಗೆ ಎಣ್ಣೆ ಸೀಗೆ ಇದ್ದ ಹಾಗೆ !"

ಆಳು ಚಹ ತಂದ.ಚೀಣಿ ಪಿಂಗಾಣಿಯ ಕಪ್ ಮತ್ತು ಸಾಸರು ಹಳ್ಳಿಯ ಬಡ