ಪುಟ:Duurada Nakshhatra.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಈ ಪ್ರಯಾಣದಲ್ಲಿ ಹೀಗಾದುದು ಇದು ಎರಡನೆಯ ಸಲ. ಹಿಂದಿನ ರಾತ್ರಿ ಬೆಂಗಳೂರಿನ ರೈಲುನಿಲ್ದಾಣದಲ್ಲೂ ಅಂಥದೇ ಅನುಭವವಾಗಿತ್ತು. ಬೀಳ್ಕೊಡಲೆಂದು ಬಂದಿದ್ದ ವೇಣುಗೋಪಾಲನೂ ಜಯದೇವನೂ ಪ್ಲಾಟ್ ಫಾರಂ ಸೇರಿದಾಗ, ಹೊರಡುವ ಗಾಡಿಯಿನ್ನೂ ಬಂದು ನಿಂತಿರಲಿಲ್ಲ.

ಆಗ ವೇಣುಗೋಪಾಲ ಹೇಳಿದ್ದ:

“ಒಂದು ಮಾಡೋಣ ಜಯಣ್ಣ, ಗಾಡಿ ಬರುತ್ಲೆ ನಾನು ಬೇಗ್ನೆ ಹತ್ಕೊಂಡ್ಬಿಟ್ಟೂ ಮೇಲ್ಗಡೆ ಜಾಗ ಹಿಡೀತೀನಿ. ನೀನು ಮಲಕೊಂಡ್ಬಿಡು!”

ಇತರರು ಕುಳಿತೋ ನಿಂತೋ ಪ್ರಯಾಣ ಮಾಡುವಾಗ ತಾನು ಮಲಗಿರುವ ಸನ್ನಿವೇಶ......

“ಸಾಕು, ಗೊತ್ತು, ಯಾಕೆ ನಿದ್ದೆ ಬರೊಲ್ವೋ ನೋಡ್ರೀನಿ. ನೋಡಪ್ಪ, ಜಯಣ್ಣ, ಈ ಸಂಕೋಚ ಎಲ್ಲಾ ಬಿಟ್ಟಿಡು. ಹ್ಯಾಗಾದರೂ ಮಾಡಿ ಜಾಗ ಹಿಡೀತೀನಿ, ಸ್ವಸ್ಥ ಮಲಕೋ ರಾತ್ರೆಯೆಲ್ಲಾ ಜಾಗರವಿದ್ದು, ಬೆಳಗ್ಗೆ ಬಾಡಿದ ಸೋರೆಕಾಯಿ ಹಾಗೆ ಮುಖ ಮಾದ್ಕೊಂಡು ಅದೇನು ಹೋಗಿ ನೋಡಿಯೋ ಅವರ್ನೆಲ್ಲಾ!"

ಜಯದೇವನಿಗೂ ಅದು ಹೌದೆನಿಸಿತು.

ಗಾಡಿ ಬಂದು ಪೂರ್ತಿ ನಿಲ್ಲುವುದಕ್ಕೂ ಇಲ್ಲ, ಅಷ್ಟರಲ್ಲೆ ವೇಣು ಗೋಪಾಲ ನೂಕು ನುಗ್ಗಲಿನಲ್ಲಿ ಮುಂದಾಗಿ ಮೂರನೆ ತರಗತಿಯ ಡಬ್ಬಿಯೊಂದನ್ನೇರಿದ, ಹೊರಗಿಂದ ಹಾಸಿಗೆಯ ಸುರುಳಿ-ಚೀಲ ಎತ್ತಿಕೊಂಡು ಗಾಡಿ ನಿಲ್ಲುವವರೆಗೆ ಜಯದೇವನೂ ಓಡಬೇಕಾಯಿತು. ಸದ್ದು ಗದ್ದಲ ಮಾಡುತ್ತ ಕಿಟಕಿಯ ಮೂಲಕ ಜಯದೇವನ ಸಾಮಾನುಗಳನ್ನು ಒಳಕ್ಕೆಳೆದುಕೊಂಡು ವೇಣು ಮೇಲಿನ ಹಲಿಗೆಗೆ ಏರಿಸಿದ. ಕೈಕೊಟ್ಟು ಜಯದೇವನನ್ನೂ ಕಿಟಕಿಯ ಮೂಲಕವೆ ಒಳಕ್ಕೆ ಬರಸೆಳೆದುಕೊಂಡು, ಮೇಲಕ್ಕೆ ಕಳುಹಿಕೊಟ್ಟ, ಹಾಸಿಗೆ ತಲೆದಿಂಬಾಯಿತು. ಚೀಲ ಬಲಮಗುಲು ಸೇರಿತು. ಜಯದೇವ ಕಾಲುನೀಡಿ ಮಲಗಿಕೊಂಡ.

ಗಾಡಿ ಹೊರಡಲು ಆಗಿನ್ನೂ ಅರ್ಧ ಘಂಟೆಯಿತ್ತು.

“ಕಣ್ಣ ಮುಚ್ಚಿ ನಿದ್ದೆ ಬಂದವರ ಹಾಗೆ ಮಲಕೊ ಜಯಣ್ಣ, ನಾನು