ಪುಟ:Duurada Nakshhatra.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರುಚಿ ನೋಡಿದ್ದುವು ಆಗಲೆ. ಸೂರ್ಯನ ಏಕಾಧಿಪತ್ಯವಿದ್ದ ಸುಡುಬೇಸಗೆ ಕಳೆದು ಹೋಗಿತ್ತು. ಆದರೂ ಸೋಲನ್ನೊಷ್ಟಿಕೊಳ್ಳದೆ ಆ ಸೂರ್ಯ ಗಹಗಹಿಸಿ ನಗುತ್ತಿದ್ದ.

ಬಸ್ಸು ಹಾರಿ ಎದ್ದು ಬಿದ್ದು ತನ್ನ ಮೈಯನ್ನೂ ಪ್ರಯಾಣಿಕರ ಮೈಗಳನ್ನೂ ಕುಲುಕುತ್ತಾ ಕೊರಕಲು ಹಾದಿಯಲ್ಲಿ ಓಡುತ್ತಿದ್ದಂತೆ, ಜಯದೇವ ಆಗಾಗ್ಗೆ ಮುಗುಳು ನಕ್ಕ–ಸೂರ್ಯನ ಪರಿವೆ ಇಲ್ಲದೆ. ಹೊರಗಿನ ದೃಷ್ಟಿಯೇನೋ, ಗೋಚರವಾಗಿ ಮರೆಯಾಗುತ್ತಿದ್ದ ಹೊಲ ಗುಡಿಸಲು ಹುಲ್ಲು ಗಾವಲು ಪೊದೆ ಪೊದರು ಮರಗಳನ್ನು ನೋಡುತ್ತಿತ್ತು. ಆದರೆ ಮನಸಿನೊಳಗೆ ನಡೆಯಿತ್ತಿದ್ದ ನೆನಪಿನ ಆಟವೇ ಬೇರೆ. ಸ್ಮರಣೆಯ ಲೋಕದ ವಿವಿಧ ವ್ಯಕ್ತಿಗಳೊಡನೆ ಓಡಾಡುತ್ತಾ ಸಹಪ್ರಯಾಣಿಕರನ್ನೆಲ್ಲ ಜಯದೇವ ಮರೆತ.

..............

ಉದ್ಯೋಗದ ಆಜ್ಞಾಪತ್ರ ಕೈಸೇರಿದಮೇಲೆ ಜಯದೇವ ತನ್ನ ಹುಟ್ಟೂರಿಗೆ ಹೋಗಿದ್ದ-ತನ್ನ ಮನೆಗೆ. ಅದು ಕಾನಕಾನಹಳ್ಳಿಯ ಪ್ರವಾಸ. ಸ್ವಾತಂತ್ರ ಬಂದಮೇಲೆ ಆದ ಮಾರ್ಪಾಟುಗಳಲ್ಲಿ ಆತನ ಊರಿನ ಹೆಸರು ಬದಲಾದುದೂ ಒಂದು. ಕನಕಪುರ. ಬಂಗಾರ ಅಲ್ಲಿ ಬೇಕಷ್ಟು ಇದೆಯೋ ಇಲ್ಲವೋ! ದಟ್ಟದರಿದ್ರರಾದ ಲಕ್ಷ್ಮೀನಾರಾಯಣರಿರುವುದಿಲ್ಲವೆ? -ಹಾಗೆ ಎಂದುಕೊಂಡರಾಯಿತು. ಆದರೂ ಜಯದೇವನಿಗೆ ಕಾನಕಾನಹಳ್ಳಿ ಎಂಬ ಹೆಸರೇ ಇಷ್ಟ.

ಕಾನಕಾನಹಳ್ಳಿ ಸೇರಿದ ಜಯದೇವ ಆಲ್ಲಿ ಒಂದು ದಿನವೂ ಇರಲಿಲ್ಲ. ಅದು ಹೆಸರಿಗೆ ಮಾತ್ರ ಆತನ ಮನೆ. ಆದರೆ ಆತನದಾಗಿ ಆಲ್ಲೇನಿತ್ತು? ಜಯದೇವ ತಬ್ಬಲಿಯಾಗಿ ಬೆಳೆದವನು. ತಂದೆಗೆ ಎದಡನೆಯ ಮದುವೆಯಾಯಿತು. ಆ ಮಲತಾಯಿ ಎರಡು ಮೂರು ವರ್ಷ ವಾತ್ಸಲ್ಯಮಯಿಯಾಗಿಯೇ ಇದ್ದಳು. ತನ್ನದೇ ಆದ ಮಗು ಬರುವತನಕ...ಅನಂತರ ಒಂದಲ್ಲ ಎರಡು ಮೂರು. ತಂದೆ, ತನ್ನ ಕೆಲಸ ಕಾರ್ಯಗಳಲ್ಲಷ್ಟೆ ನಿರತನಾಗಿದ್ದ ಶಾನುಭೋಗ. ಮಕ್ಕಳ ಲಾಲಸೆ ಪಾಲನೆಗಾಗಿ ಹೆಚ್ಚು ಕಾಲ ವ್ಯಯಮಾಡುವುದು ಆತನಿಂದಾಗಲಿಲ್ಲ.